Total Pageviews

Thursday, July 23, 2020

ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !





ನಮ್ಮ ಧಾರವಾಡದ ಮಳೆಗಾಲಕ್ಕ, ಮೋಹಕ ಸೊಬಗಿದೆ, ಎರಡು ನಿಮಿಷವೂ ಬಿಡದೆ, ಆಗಸವೆಂಬ ಬಿಂದಿಗೆಗೆ ಯಾರೋ ತೂತು ಮಾಡಿದ ಹಾಗೆ ಬಿಟ್ಟು ಬಿಡದೇ  ಸುರಿಯುವ  ತವಕವಿದೆ !ಇಂತಿಪ್ಪ ಮಳೆಗಾಲದಲ್ಲಿ ಬರುವ ಪಂಚಮಿಯ ಹಬ್ಬಕ್ಕೆ ಪ್ರೀತಿಯ ಆಚರಣೆ ಇದೆ.

ತಂಪಾದ  ಮಂಜಿನ  ಬೆಳಗು, ಜಿಟಿ ಜಿಟಿ ಸುರಿಯುವ ಮಳೆ, ಬೆಚ್ಚಗೆ ಹೊದ್ದು ಮಲಗಿದ್ದ ನಮ್ಮನ್ನ , "ಇವತ್ತು ಪಂಚಮಿ ,ಇವತ್ತರೆ ಬೇಗ ಎದ್ದು ಹಾಲು ಎರೆದು  ಬಂದ್ಮೇಲೆ ನಾಷ್ಟಾ ನೆನಪಿರಲಿ "ಎಂದು ಗದರಿಸಿ ಎಚ್ಚರಿಸುತ್ತಿದ್ದ ಅಮ್ಮ, ರೇಶಿಮೆಯ ಕೆಂಪು ಹಾಗೂ ಹಸಿರು ಬಣ್ಣದ ಲಂಗ ದಾವಣಿ, ಮಲ್ಲಿಗೆ ಹೂವು, ಝುಮಕಿ, ಕೈತುಂಬ  ಬಳೆ, ಕಾಡಿಗೆ ಹಾಗೂ ಕುಂಕುಮ ಇಟ್ಟುಕೊಂಡು ಅಮ್ಮ ತಯಾರಿಸಿಟ್ಟ , ಸಣ್ಣ ಗಿಂಡಿಯಲ್ಲಿ ಹಾಲು, ಅಗರ್ ಬತ್ತಿ,ತಂಬಿಟ್ಟು, ಶೇಂಗಾ ಉಂಡಿ ,  ಹುರಿದ ಜೋಳದ ಅಳ್ಳು ,ಹೂವು , ನೈವೇದ್ಯೆಗೆಂದು ಮಾಡಿಟ್ಟ ಕರಿಗಡುಬು, ದೀಪದ ಎಣ್ಣೆ-ಬತ್ತಿ, ಎಲ್ಲವನ್ನು ಶ್ರದ್ಧೆಯಿಂದ ಒಂದು ತಟ್ಟೆಗೆ ಜೋಡಿಸಿಕೊಂಡು ಅದರ ಮೇಲೆ ಉಲೆನಿಂದ ಹಣೆದ ಮುಚ್ಚಿಗೆ, ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !

ಹೋಗುವ ದಾರಿಯಲ್ಲಿ ನೆರೆಯವರು ಸಿಕ್ಕು "ಹಾಲ್ ಎರಿಯಾಕ್ ಹೊಂಟೇರಿ? ಎಷ್ಟು ಎತ್ತರ ಬೆಳದಾಳ ನೋಡ್ರಿ ಮಗಳು, ಲಕ್ಷಣದ ಗೌರಮ್ಮ" ಎಂದು ಕೆನ್ನೆ ತಟ್ಟಿ ಪ್ರೀತಿಯಿ೦ದ , ಮಾತನಾಡಿಸುತ್ತಿದ್ದ ಆಂಟಿಯರು , ಗಣೇಶನ ದೇವಸ್ಥಾನದ ಅಂಗಳದಲ್ಲಿ ಆಲದ ಮರಕ್ಕೆ ಅಂಟಿಕೊಂಡಿದ್ದ ಕೆಂಪು ಮಣ್ಣಿನ ಹುತ್ತು, ಪ್ರತಿವರ್ಷ ನಾಗಪ್ಪ, ನಾವು ಹೋಗುವ ವರೆಗೆ ಹೊರಗೆ ಬರದೇ ಇರಲಪ್ಪ ಎಂಬ ಅಂಜಿಕೆಯಿಂದಲೇ ಹಾಲು ಹಾಕುವಾಗ, "ಹೆದರ್ಬ್ಯಾಡ ಅರಾಮ್ ಪೂಜೆ ಮಾಡು ಏನೂ ಆಗುದಿಲ್ಲ ಎಂದು" ಅಮ್ಮ ಹೇಳುತ್ತಿದ್ದ ಧೈರ್ಯ, ಅರ್ಚಕರು ಹೊರಗೆ ಬಂದು ನಂಗೋಸ್ಕರ ಒಂದು ಮಂಗಳಾರತಿ ಮಾಡಿ ಗಣೇಶನ ಮೇಲಿದ್ದ ಹೂವು ತಂದುಕೊಟ್ಟು, ಎಲ್ಲ ಚೊಲೋ ಆಗ್ಲಿ ಅರಾಮ್ ಇರ್ರಿ , ನೀನೆ ಫಸ್ಟ್ ಬರಬೇಕು ಈ ಸಲ ಎಕ್ಸಾಮ್ಸ್ನ್ಯಾಗ , ಎನ್ನುವಾಗ ಎಂತದೋ ಹಿಗ್ಗು!
ಆಮೇಲೆ ದೀಪ ಹಚ್ಚಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮನೆಕಡೆ ಹೊರಟರೆ ಜೋಕಾಲಿಯದ್ದೇ ಗುಂಗು.

ದೊಡ್ಡ ಮರಕ್ಕೆ ಕಟ್ಟಿದ ಜೋಕಾಲಿ ಆಡುವುದಕ್ಕೆ ಹರ ಸಾಹಸ ಪಟ್ಟು, ಕಡೆಗೆ ನಾನು ಹೆಚ್ಚು ,ನೀನು ಹೆಚ್ಚು ಎಂದು ಕ್ವಾರ್ಟರ್ಸ್ ಹುಡುಗೀಯರ ಜೊತೆ  ಜಗಳ ಆಡುವ ಗೋಜೇ ಬೇಡ ಎಂದು ಹೇಳಿ ಅಪ್ಪ ಮನೆಯಲ್ಲೇ ನನಗಾಗಿ ಕಟ್ಟುತ್ತಿದ್ದ ಜೋಕಾಲಿ, ಅಡುಗೆ ಮನೆಯಿಂದ ಹಾಲ್ ಗೆ ಬರುವ ಪ್ಯಾಸೇಜ್ ಬ್ಲಾಕ್ ಮಾಡಿ ಪ್ರತಿ ಸಲ ಅಮ್ಮನಿಗೆ ಹಾಯ್ದು ಬೈಸಿಕೊಳ್ಳುತ್ತಿದ್ದ ದಿನಗಳು, ಇದರ ಮಧ್ಯೆ ತಮ್ಮನಿಗೂ ಸ್ವಲ್ಪ ಹೊತ್ತು ಜೋಕಾಲಿ ಬಿಟ್ಟು ಕೊಡುವ ತ್ಯಾಗ, ಒಂದೇ ಎರಡೇ, ಪಂಚಮಿ ಕೇವಲ ಹಬ್ಬವಲ್ಲ ಹುಡುಗೀಯರ ಪಾಲಿಗೆ ಸಡಗರ !
ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು



Monday, July 13, 2020

ಸೋಶಿಯಲ್ ಮೀಡಿಯಾ ಹಾಗೂ ವರ್ಚುಯಲ್ ಐಡೆಂಟಿಟಿ !



ಸುಮ್ಮನೆ ಗಮನಿಸಿ ನೋಡಿ.. ಸೋಶಿಯಲ್ ಮೀಡಿಯಾ ಗೆ ಒಂದು ಪ್ಯಾಟರ್ನ್ ಇದೆ, ಒಂದೇ ಸಲಕ್ಕೆ ಯಾರನ್ನೋ ಹೀರೋ ಅಥವಾ ಜೀರೋ ಮಾಡುವ ಬಲಿಷ್ಠ ಶಕ್ತಿ ಇದೆ ! ನಿಮಗೆ ಇಷ್ಟವೊ ಇಲ್ಲವೋ ಟ್ರೆಂಡಿಂಗ್ ಹೆಸರಲ್ಲಿ ನಡೆಯುವ ಎಲ್ಲ ವಿದ್ಯಮಾನಗಳು ನಿಮ್ಮ timeline ನಲ್ಲಿ ಕಾಣಲೇ ಬೇಕು, ಅವರ ಅಲ್ಗೊರಿಥಮ್ಸ್ ಕೂಡ ಟ್ರೆಂಡ್ ಗೆ ಅನುಗುಣವಾಗಿ ಅಪ್ಡೇಟ್ ಆಗುತ್ತಲಿರುತ್ತವೆ!

ಕಳೆದೆರಡು ವಾರಗಳಿಂದ ಒಂದು ಸೂಲಿಬೆಲೆ, ಇನ್ನೊಂದು ಪ್ರತಾಪ್ ಟ್ರೊಲ್ ಗಳಿಗೆ ಆಹಾರವಾದ ವ್ಯಕ್ತಿಗಳು! ಸೂಲಿಬೆಲೆಯ ಬಗ್ಗೆ ಮೊದಲೇ ಕೇಳಿದ್ದ ನೆನಪು ಕೆಲವು ಒಳ್ಳೆಯ ಕೆಲ್ಸದ ಜೊತೆಗೆ ಅವರ ಅತಿಯಾದ ಇಲ್ಲೊಜಿಕಲ್ ಮಾತುಗಳೇ ಅವರಿಗೆ ಸಧ್ಯ ಮುಳುವಾಗಿರುವುದು ಈಗ ಹಳೆಯ ಸುದ್ದಿ. ಹೇಂಗೂ ಚಕ್ರವರ್ತಿ ಟ್ರೆಂಡ್ ನಡೆದಿತ್ತು, ಅದರೊಟ್ಟಿಗೆ ಈ ಹುಡುಗ ಟ್ರೊಲ್ ಆಗುವ ಮುಂಚೆ ಯಾರೆಂದು ಅನೇಕರಿಗೆ ಗೊತ್ತೇ ಇರಲಿಲ್ಲ ಅಂತಹ ಮಹಾ ಮೋಸಗಾರನನ್ನು ಸಾರಾಸಗಟಾಗಿ ಸುಳ್ಳುಗಳ ಕಾರಣದಿಂದ ಸೂಲಿಬೆಲೆಯ ತಮ್ಮನ ಪಟ್ಟ ಕೊಟ್ಟು ಬಿಡಲಾಯಿತು. ಟ್ರಾಲ್ ಗಳಿಗೆ ಎಥಿಕ್ಸ್ ಇರುವುದಿಲ್ಲ ಬಿಡಿ ಟ್ರೊಲ್ knows ಹೌ ಟು ಡಿಫೇಮ್ someone. ಇದೇ ಸಿಕ್ಕಿದ ಅವಕಾಶವೆಂದು ದಶಕಗಳಿಂದ ತನ್ನ ಕ್ಷೇತ್ರದಲ್ಲಿ ರಾಜಕೀಯ ಪ್ರೇರೆಪಿತ  ಭಾಷಣಗಳ ಹೊರತಾಗೀಯೂ ಸಮಾಜಕ್ಕೆ ಅನೇಕ ರೀತಿಯ ಸಹಾಯ ಮಾಡಿದ ಚಕ್ರವರ್ತಿ ಎಲ್ಲಿ , ಸುಳ್ಳುಗಳನ್ನೇ ಮಾರಿ ದುಡ್ಡು ಮಾಡಿ ರಾಜಕೀಯ ನಾಯಕರನ್ನೇ ಮಂಗ ಮಾಡಿದ ಈ ಹುಡುಗ ಎಲ್ಲಿ? ಹೋಲಿಕೆಗೂ ಮಿತಿ ಬೇಡವೇ?!

ನಾನು ಸೂಲಿಬೆಲೆಯ ಅನುಯಾಯಿಯೂ ಅಲ್ಲ, ಯಾವುದೇ ಬ್ರಿಗೇಡ್ ನ ಕಾರ್ಯಕ್ರತೆಯೂ ಅಲ್ಲ, ಆ ವ್ಯಕ್ತಿಯನ್ನು ಅಣ್ಣ ಎಂದು ತಬ್ಬಿಕೊಂಡೆ ಇನ್ಸ್ಪೈರ್ ಆಗೋ ದೂಡ್ಡ  ಯುವ ಬಳಗವಿದೆ ಅದೆಲ್ಲ ಕೇವಲ ಅವರು ಮಾಡುವ ಭಾಷಣಗಳಿಂದ ಆಗಿದ್ದಲ್ಲ ಅನ್ನುವುದು ಎಷ್ಟು ನಿಜವೂ ಅಷ್ಟೇ ನಿಜ  ಮಾತಿನ ಭರದಲ್ಲಿ ಹೇಳಿದ ಸುಳ್ಳುಗಳಿಂದ ಅವರ ಕಟ್ಟಾ ಹಿಂಬಾಲಕರು ಪೇಚಿಗೆ ಸಿಲುಕಿರುವುದು.

ನಾವುಗಳೆಲ್ಲ ಭಾವುಕ ಜೀವಿಗಳು ದೇಶಭಕ್ತಿಯೆಂಬ ರೋಮಾಂಚನವನ್ನು ಮಾತಿನ ಮೂಲಕವೇ ಬಡಿದೆಬ್ಬಿಸುತ್ತಿದ್ದ ಅಪ್ಪಟ ವಾಗ್ಮಿ ಸೂಲಿಬೆಲೆಗೂ ಈ ಸುಳ್ಳುಗಾರ ಪ್ರತಾಪನಿಗೂ ಹೋಲಿಕೆ ಸಲ್ಲ. ಸೈದ್ಧಾಂತಿಕ ವಿರೋಧ ಏನೇ ಇದ್ದರೂ ನೀವು ಯಾವ ಕಂಟೆಂಟ್ ಇಟ್ಟುಕೊಂಡು ನಿಮ್ಮ ಸೈಧಾಂತಿಕ ವಾದ ಮಂಡಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ, ಟ್ರೊಲ್ ಗಳ  ಹೆಸರಲ್ಲಿ ಕೇವಲ ದ್ವೇಷ ಹಾಗೂ ಅಸೂಯೆ ಬಿತ್ತಿ, ವೈಯಕ್ತಿಕ ತೇಜೋವಧೆ ಮಾಡುವುದೇ ನಿಮ್ಮ ಉದ್ದೇಶವಾಗಿದ್ದರೆ ಅದನ್ನು ಟ್ರೊಲ್ ಅನ್ನದೆ ಬುಲ್ಯಿಂಗ್ ಎನ್ನಬೇಕಾಗುತ್ತದೆ. ಸಮಾಜದ ಸ್ವಾಸ್ಥ್ಯ ಸುಳ್ಳುಗಾರರಿಂದ ಕೆಡುವುದಲ್ಲ ಆ ಸುಳ್ಳುಗಳನ್ನು ಮರು ಪ್ರಶ್ನೆ ಇಲ್ಲದೆ ಒಪ್ಪಿಕೊಂಡು ಸೋಶಿಯಲ್ ಮೀಡಿಯಾ ಕೊಡುವ ಪ್ಯಾಟರ್ನ್ ಗೆ ಅನುಗುಣವಾಗಿ ಕುಣಿಯುವ ನಮ್ಮ ವರ್ಚುಯಲ್ ಐಡೆಂಟಿಟಿ!!!


ನಿಮಗಾಗದವರನ್ನು ಅಥವಾ ನಿಮ್ಮ ಯೋಚನೆಗೆ ಹೊಂದಿಕೆಯಾಗದವರನ್ನು, ನಿಮ್ಮ ವೈಚಾರಿಕ ಭಿನ್ನಾಭಿಪ್ರಾಯಗಳಿಂದ ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ದ್ವೇಷಿಸಲು ಹೊರಟರೆ ಜಗತ್ತಿನಲ್ಲಿ ಪ್ರೀತಿಸಲು ಯಾರೂ ಉಳಿಯುವದಿಲ್ಲ! ಯಾರೂ ನೂರು ಪ್ರತಿಶತ ಒಳ್ಳೆಯವರೂ ಅಲ್ಲ ನೂರು ಪ್ರತಿಶತ ಕೆಟ್ಟವರೂ ಅಲ್ಲ, ನಮಗೆ ಒಳ್ಳೆಯದು ಎಲ್ಲಿಂದಲೋ ಯಾರಿಂದಲೂ ಕೇಳಲು ಕಲಿಯಲು  ಅವಕಾಶವಿದ್ದರೆ ಅದನ್ನು ರಾಜಕೀಯ ಹಾಗೂ ಸೈದ್ಧಾಂತಿಕ ಎಂಬ ಬೇಲಿಗಳನ್ನು ದಾಟಿ ಅಳವಡಿಸಿಕೊಳ್ಳೋಣ !