Total Pageviews

Thursday, November 12, 2020

ಬದುಕು ಮಹೋತ್ಸವ ಎಂದ ಬೆಳಗೆರೆ

 

ನಾವು ಎಂಜಿನಿಯರಿಂಗ್ ಓದುವ ದಿನಗಳಲ್ಲಿ (ನಮ್ಮನ್ನ ತುಂಬಾ ಹಳೆ ಕಾಲದವರು ಅಂದುಕೊಳ್ಳೋ ಅವಶ್ಯಕತೆ ಇಲ್ಲ , ತೊಂಭತ್ತರ ಕಿಡ್ಸ್ ) ವಾಟ್ಸ್ ಆಪ್ , ಇನ್ಸ್ಟಾ , ಅಮೆಜಾನ್ ನೆಟ್ಫ್ಲಿಸ್ ಯಾವದೂ ಇರ್ಲಿಲ್ಲ , ಆಗಷ್ಟೇ ಹವಾ ಶುರು ಮಾಡಿದ ಆರ್ಕುಟ್ ಬಳಕೆದಾರರನ್ನು ಫೇಸ್ಬುಕ್ ತನ್ನೆಡೆಗೆ ಸೆಳೆಯುತ್ತಲಿತ್ತು, ಆಗ ನನ್ನಂತೆ ಅನೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬ್ಲಾಗಿಂಗ್  ಹವ್ಯಾಸ ಶುರು ಹಚ್ಚಿಕೊಂಡಿದ್ದರು, ಹಾಸ್ಟೆಲ್ ದಿನಗಳಲ್ಲಿ ಎಂಟ್ರ್ಟಟೈನ್ಮೆಂಟ್ ಅಂದ್ರೆ ಲ್ಯಾಪ್ಟಾಪ್ಗಳಲ್ಲಿ ಎಲ್ಲರೂ ಸೇರಿ ಮೂವಿ ನೋಡೋದು ಇಲ್ಲ ಒಬ್ಬರಾದಮೇಲೆ ಒಬ್ಬರು ರೊಟೇಷನ್  ಬೇಸ್ ಮೇಲೆ ಯಾವುದೊ ನಾವೆಲ್ ಓದುವುದು, ಸ್ವರ್ಗದಂಥ ದಿನಗಳವು. 

ಇವತ್ತು ಕನ್ನಡದಲ್ಲಿ ನನಗೆ ಸಂತೋಷ ಹಾಗೂ ತೃಪ್ತಿ ಸಿಗುವಷ್ಟು ವಿಚಾರ ಹಂಚಿಕೊಂಡು ಬರೆಯಲು ಪ್ರೇರಣೆ ನೀಡಿದ ಅನೇಕ ಜನರಲ್ಲಿ ಬೆಳಗೆರೆ ಕೂಡ ಒಬ್ಬರು, ಆ ದಿನಗಳಲ್ಲಿ, ನೂರೆಂಟು ಮಾತು, ಬೆತ್ತಲೆ ಜಗತ್ತು ಕಾಲಂ ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ ನನ್ನ ಓದುವ ಹುಚ್ಚು ನೋಡಿ ಗೆಳತೀ ಅರ್ಪಿತಾ ರವಿ ಬೆಳಗೆರೆಯ "ಹಿಮಾಲಯನ್ ಬ್ಲಂಡರ್" , "ಹೇಳಿ ಹೋಗು ಕಾರಣ" ಹಾಗೂ "ಖಾಸ್ ಬಾತ್" ಸೀರೀಸ್ ಪುಸ್ತಕಗಳನ್ನು ಓದಲು ಕೊಟ್ಟಳು, ಹಿಮಾಲಯನ್ ಬ್ಲಂಡರ್ ಓದು ಮುಗಿಸುವಷ್ಟರಲ್ಲಿ ಈ ಬೆಳಗೆರೆ ಎಂಬ ಮಾಂತ್ರಿಕ ನನ್ನ ಪೂರ್ಣ ಪ್ರಮಾಣದಲ್ಲಿ ಮೋಡಿ ಮಾಡಿದ್ದ, ಅದು ಟ್ರಾನ್ಸ್ಲೇಷನ್ ಕಣೆ ಖಾಸ್ ಬಾತ್ ಓದು ಅಂತ ಹೇಳಿದಾಗ, ಇಲ್ಲೇ ಯಾರೋ ಪಕ್ಕದಲ್ಲೇ ನಿಂತು ಹರಟೆ ಹೊಡೆಯುತ್ತ ಹರಟೆಯಲ್ಲೇ ಕೆಲವು ಸೂಕ್ಷ ವಿಚಾರಗಳನ್ನು ಆಪ್ತವಾಗಿ ಹೇಳುತ್ತಿದ್ದಾರೇನೋ ಅನ್ನಿಸಲು ಶುರುವಾಗಿತ್ತು, ಖಾಸ್ ಬಾತ್ ಹುಚ್ಚು ಹಿಡಿದು ನಾನು ಅರ್ಪಿತಾ ಸೇರಿ ಪ್ರತಿ ವಾರ ಹೈ  ಬೆಂಗಳೂರು ಓದಲು ಶುರು ಮಾಡಿದೆವು, ಜಾನಕೀ ಕಾಲಂ , ಹಾಗೂ ಖಾಸ್ ಬಾತ್ ಮತ್ತೆ  ಕೆಲವು ಗಾಸಿಪ್ ಬರಹಗಳು ನಮ್ಮ ಚರ್ಚೆಯ ವಿಷಯಗಳಾಗಿದ್ದವು, ಜಾನಕಿ ಹೆಸರಲ್ಲಿ ಜೋಗಿ ಬರೆಯುತ್ತಿದ್ದಿದು ತುಂಬ ವರ್ಷಗಳ ಮೇಲೆ ಗೊತ್ತಾಯ್ತು. 

ಅಷ್ಟರಲ್ಲಾಗಲೇ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎಂಥ happening ಕ್ಷೇತ್ರಗಳು ನಾವು ಮಾತ್ರ ಜೀವ ವಿಲ್ಲದ ಮಷೀನ್ , ಹಾಗೂ ಕಣ್ಣಿಗೆ ಕಾಣದ ಎಲೆಕ್ಟ್ರೋನ್ಸ್ಗಳ  ಬಗ್ಗೆ  ಓದುತ್ತ ಎಂಥ ಬೋರಿಂಗ್ ಜೀವನ ಮಾಡ್ತಾ ಇದೀವಿ ಅಂತ ಹಲವು ಬಾರಿ ಅನಿಸಿದರೂ ನಮ್ಮ ಜನರೇಶನ್ ನವರಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಬಿಟ್ರೆ ಆಯ್ಕೆಗಳೇ ಇರಲಿಲ್ಲವಲ್ಲ, ಓದು ಜೀವನ್ ನಡೆಸುವುದಕ್ಕಾಗಿ  , ಹಾಗೂ ಒಳ್ಳೆಯ ಉದ್ಯೋಗಕ್ಕಾಗಿ, ಆತ್ಮ ಸಂತೋಷಕ್ಕಾಗಿ ಬ್ಲಾಗ್ ಶುರು ಮಾಡಿದೆ, ಅದಕ್ಕೆ ಸಿಕ್ಕ ರೆಸ್ಪಾನ್ಸ್ ಒಮ್ಮೆಲೇ ಜರ್ನಲಿಸ್ಟ್ ಆಗುವ ಉಮೇದಿ ಹೆಚ್ಚಿಸಿತು . 

ಹೀಗೆ ಒಂದಿನ ಹೈ ಬೆಂಗಳೂರು ಓದುವಾಗ ಅಶೋಕ್ ಶೆಟ್ಟರ್ ಬಗ್ಗೆ ಒಂದು ಲೇಖನ ಬರೆದಿದ್ದರು ಬೆಳಗೆರೆ, ಆ ಲೇಖನ ಹೇಗಿತ್ತೆಂದರೆ, ಒಂದು ವರ್ಷದಿಂದ ಹೈ  ಬೆಂಗಳೂರು, ಓದುತ್ತಿದ್ದರೂ ಬೆಳಗೆರೆಯನ್ನು ಭೇಟಿಯಾಗಬೇಕು ಎನಿಸಿರಲಿಲ್ಲ, ಶೆಟ್ಟರ್ ಸರ್ ಧಾರವಾಡ, ನಂಗೆ ಪರಿಚಯನೇ ಇಲ್ವಲ್ಲ ಈ ಸೆಮ್ಸ್ಟರ್ ರಜೆ ಲಿ ಹೋಗಿ ಅವ್ರನ್ನು ಭೇಟಿ ಆಗಲೇ ಬೇಕು ಎಂದುಕೊಂಡು ಫೇಸ್ಬುಕ್ ಅಲ್ಲಿ ಹುಡುಕಿ ರಿಕ್ವೆಸ್ಟ್ ಕಳ್ಸಿದೆ, ಒಂದು ಮೆಸೇಜ್ ಕೂಡ ಹಾಕಿದೆ ಸರ್ ನಿಮ್ಮನ್ನ ಭೇಟಿ ಆಗ್ಬೇಕು ಅಂತ ಕರ್ನಾಟಕ ಯೂನಿವರ್ಸಿಟಿ archeology ಡಿಪಾರ್ಟ್ಮೆಂಟ್ ಗೆ ನನ್ನ ಬ್ಲಾಗ್ ಬರಹಗಳ ಪ್ರಿಂಟ್ ಔಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲ ಲೇಖನಗಳನ್ನು ಒಂದು ಫೈಲ್ನಲ್ಲಿ ಹಾಕಿಕೊಂಡು ನಾಳೆ ನೇ ಪತ್ರಕರ್ತೆ ಆಗಿ ಬಿಡುವ ಉತ್ಸಾಹದಿಂದ ಶೆಟ್ಟರ್ ಸರ್ ನ ಭೇಟಿಯಾದೆ, "ಭಾಳ್ ಚೊಲೋ ಬರೀತಿ ಆದ್ರ ರವಿ ಬೆಳೆಯಗೆ ಇನ್ಫ್ಲುಯೆನ್ಸ್ ಭಾಳ್ ಆಗೇತಿ ನಿಂಗ ಸ್ವಲ್ಪ ದಿನ ಅವನ ಬರಹ ಓದದೇ, ನಿನ್ನ ಲೇಖನ ಬರಿ" ಅಂದ್ರು. ಸರಿ ಅಂತ ಒಪ್ಪಿಕೊಂಡು "ಸರ್, ನಾ  ಇಂಜಿನಿಯರಿಂಗ್ ವಲ್ಯ ಭಾಳ ಬೋರಿಂಗ್ ಇದು ನ್ಯೂಸ್ anchor ಆಗ್ತೀನಿ ನಂಗ್ ರೆಫರ್ ಮಾಡ್ರಿ ಬೆಳಗೆರೆಗೆ ಹೇಳಿ" ಅಂದೇ, ನನ್ನ ಮಾರ್ಕ್ಸು ಸೆಮಿಸ್ಟರ್ ರಿಸಲ್ಟ್ ಕೇಳಿ "ತಲಿ ಕೆಟ್ಟದೇನವಾ ?, ಚೊಲೋ ಓದುಮುಂದ ಅರ್ದಕ್ಕ ಯಾಕ್ ಬಿಡತಿ , ಎಲ್ಲವೂ ಒಂದು ಹಂತ ಆದ್ಮೇಲೆ ಮೊನೊಟೋನೂಸ್ ಅನ್ಸೇ ಅನ್ಸುತ್ತೆ , ಸುಮ್ನ ಬ್ಲಾಗ್ ಬರ್ಕೊಂಡು ಓದು ಮುಗಸು, ಜೀವನಕ್ಕ ಏನು ಬೇಕು ಅನ್ನೋಕಿಂತ ಬದುಕಿಗೆ ಏನು ಬೇಕು ಅನ್ನೋದು ಇನ್ನು ತಿಳಿಯದ ವಯಸ್ಸು ನಿಂದು , ಮುಂದೊಂದಿನ  ನೀನೆ  ಇದರ ಬಗ್ಗೆ ತಮಾಷೆ ಮಾಡ್ತಿ ನೋಡು ಅಂತ ಬುದ್ಧಿ ಹೇಳಿ ಕಳ್ಸಿದ್ರು . 

ಅದಾದ್ಮೇಲೆ ನಿಧಾನವಾಗಿ, ಬೆಳಗೆರೆ ಮೇನಿಯಾ ಇಂದ ಹೊರಬರಲು ಶುರು ಮಾಡಿ ಅನೇಕ ಲೇಖಕರು, ಕಥೆಗಾರರು , ಕಾದಂಬರಿಗಾರರು ಭಿನ್ನ ಸಿದ್ಧಾಂತ, ಭಿನ್ನ ವೈಚಾರಿಕತೆ, ಎಲ್ಲದೂ ಅರ್ಥವಾಗುತ್ತಾ ಹೋದಂತೆ, ಬೆಳಗೆರೆಯವರ ಕಾಂಟ್ರವರ್ಸಿಗಳು ಒಹ್ ಇವರು ಇಷ್ಟೇ ಎಲ್ಲರೂ ಇಷ್ಟೇ ಬದುಕೇ ಬೇರೆ ಬರಹವೇ ಬೇರೆ ಎಂದು ಒಂದು ರೀತಿಯ ಘಾಸಿ ಉಂಟಾಯ್ತು, ಆವಾಗ್ಲೇ ಯಾರೇ ಇರಲಿ ಅವರ ವೈಯಕ್ತಿಕ ಬದುಕಿಗಿಂತ ಅವರ ಯಾವ ಗುಣದಿಂದ ಅಥವಾ ಯಾವ ಕೆಲಸದಿಂದ ಅವರು ನಮಗೆ ಇಷ್ಟ ಹಾಗೂ ಅದರಿಂದ ಯಾವ ಒಳ್ಳೆಯ ಗುಣವನ್ನು ನಾನು ಮೈಗೂಡಿಸಿಕೊಳ್ಳಬಹುದು ಎಂಬ transformational phase ನಲ್ಲಿ ಬೆಳಗೆರೆಯ ಹಾರ್ಡವರ್ಕ್ , ಅವರ ಅದಮ್ಯ ಜೀವನ ಪ್ರೀತಿ ಹಾಗೂ ಪೂರ್ಣ ಪ್ರಮಾಣದಲ್ಲಿ ಜೀವನ ಅನುಭವಿಸುವ ಗುಣಗಳು, ಅವರ ಕಷ್ಟದ ದಿನಗಳ ಹೋರಾಟ ಎಲ್ಲವನ್ನೂ ಮೆಚ್ಚಿಯೂ ಅವರನ್ನೂ ವೈಯಕ್ತಿಕವಾಗಿ ಭೇಟಿಯಾಗಲು ಬಯಸಲಿಲ್ಲ, ಭೇಟಿಯಾಗಲಿಲ್ಲ ಎಂಬ ಕೊರಗೂ ಇಲ್ಲ, ಆ ಮನುಷ್ಯನ ಅಕ್ಷರ ಕ್ರಾಂತಿ ನಮ್ಮ ಜನರೇಶನ್ ಹಲವು ಜನರಿಗೆ ಸ್ಪೂರ್ತಿ, ಈ ಬೆಳಗೆರೆಯವರ ಖಾಸ್ ಬಾತ್ ಓದದೇ  ಇದ್ದಿದ್ದರೆ ನನಗೆ ಗುರುವರ್ಯ ಶೆಟ್ಟರ್ ಸರ್ ಸಿಗುತ್ತಿರಲಿಲ್ಲ. 

೬೨ ಕಮ್ಮಿ ಅಂತ ನಮಗೆ ಅನ್ನಿಸಿದರೂ ಒಂದಿನಿತು ರಿಗ್ರೆಟ್ ಇಲ್ಲದೇ ಬದುಕಿಹೋದ ಅವರ ಛಲ ಹಾಗೂ ಜೀವವೋತ್ಸಾಹ ನಮಗೆಲ್ಲರಿಗೂ ಮಾದರಿ, He celebrated his life and  Am Glad that I witnessed his existence !!


Thursday, September 10, 2020

ಭಾಷೆಯ ಹಾಗೂ ಗಡಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲುತ್ತದೆ!



 "ಶಿವಸೇನೆ", ಹೇಗೆ ಒಂದು ಕಟ್ಟರ್ ಹಿಂದುತ್ವ ಪ್ರತಿಪಾದಿಸುವ, ಭಾಷೆ ಹಾಗೂ ರಾಜ್ಯದ ಗಡಿಯ ಸಿದ್ಧಾಂತಕ್ಕೆ  ಒತ್ತು  ಕೊಡುವ  ರಾಜಕೀಯ ಪಕ್ಷ ತಾನೇ ಖುದ್ದು ರಾಜಕೀಯ ಕಣ್ಣಾ ಮುಚ್ಚಾಲೆ ಆಟಗಳಿಗೆ ಬಲಿಯಾಯಿತು ಎನ್ನುವುದು ವಿಪರ್ಯಾಸವಾದರೂ ಸತ್ಯ!  

ಮುಂಬೈ ಎಂಬ ಮಾಯಾನಗರಿಯಲ್ಲಿ ಮರಾಠಿಗಿರ ಹೊರತಾಗಿ ಅನೇಕ ಸಮುದಾಯಗಳು, ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರೂ, ನಮ್ಮ ಕರಾವಳಿ ಜನರನ್ನೂ ಸೇರಿಸಿಕೊಂಡೇ ನಮ್ಮ ಅಜ್ಜ ಅಪ್ಪಂದಿರ ಕಾಲಕ್ಕೆ ಬದುಕು ಕಟ್ಟಿಕೊಳ್ಳುವ ನಗರವೆಂದೇ ಖ್ಯಾತಿ ಪಡೆದ ಊರು. ಹೋದವರ್ಯಾರೂ ನಿರಾಶೆಯಾಗಿ ವಾಪಸ್ಸು ಬಂದ ನಿದರ್ಶನಗಳಿಲ್ಲ, ಐಟಿ ಬಿಟಿ ಕಂಪನಿಗಳ ಹಾವಳಿಯಿಂದ ನಮ್ಮ ಜೆನೆರೇಷನ್ ಗೆ ಬೆಂಗುಳೂರು ಇವತ್ತು ಹೇಗೋ , ಹಾಗೇ ಸುಮ್ಮರು ೨೫-೩೦ ವರ್ಷದ ಕೆಳಗೆ ಮುಂಬೈ ಕೂಡ ಹಲವರ ಅನ್ನದಾತ. 

ಇಂತಿಪ್ಪ ಮುಂಬೈ ಜನರಿಗೆ ವಿಶೇಷವಾಗಿ ಮರಾಠೀ ಮಾತನಾಡುವ ಸಮುದಾಯ, ವಲಸಿಗರ ಇಂಗ್ಲಿಷ್ ಪಾಂಡಿತ್ಯದಿಂದೋ ಅಥವಾ ಹೆಚ್ಚಿನ ವಿದ್ಯಾರ್ಹತೆ ದೆಸೆಯಿಂದಲೋ ಎಪ್ಪತ್ತು ಹಾಗು  ಎಂಭತ್ತರ ದಶಕಗಳಲ್ಲಿ, ಮೂಲ ಮುಂಬೈ ನಿವಾಸಿಗಳನ್ನು ಹೊರತುಪಡಿಸಿ ಹೊರಗಡೆ ಇಂದ ಬಂದವರನ್ನೆಲ್ಲ ಬಾಚಿ ತಬ್ಬಿಕೊಂಡು ಬೆಳಸುತ್ತಿರುವಾಗ ಹುಟ್ಟಿಕೊಂಡಿದ್ದೇ ಶಿವ ಸೇನೆ ಹಾಗೂ ಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ! ಟೀ ಮಾರಾಟ ಮಾಡುವ ಮಾಣಿಯಿಂದ ಹಿಡಿದು ಸರ್ಕಾರಿ ಕಚೇರಿಗಳ ವರೆಗೆ ಮರಾಠಿಗರಿಗೆ "ಮರಾಠಿಗರು" ಎಂಬ ಕಾರಣಕ್ಕೆ ಅನ್ಯಾಯವಾಗದಂತೆ ನೋಡಿಕೊಂಡ ಹೆಗ್ಗಳಿಕೆ ಆ ನಾಯಕನದ್ದು 

ಮೂಲ ಮುಂಬೈ ನಿವಾಸಿಗಳಾದ ಹಾಗೂ ಮಾಧ್ಯಮ ವರ್ಗ ಹಾಗು ಕೆಲ ಮಧ್ಯಮ ವರ್ಗದ ಜನರ ಮನೆಗಳಲ್ಲಿ ಇವತ್ತೀಗೂ ಅವರ ಫೋಟೋ ನೇತು ಹಾಕಿರುವುದು ಕಾಣಸಿಗುತ್ತದೆ. ಇದು ಕೇವಲ ಅಂಧ ಶ್ರದ್ಧೆಯೋ, ಭಯವೂ ಆಗಿರಲಿಲ್ಲ, ಬದಲಾಗಿ ನಮನ್ನು ಕಾಪಾಡಲೆಂದೇ ಇರುವ ನಾಯಕ ಎಂಬ ವಿಶ್ವಾಸದ ನಂಬಿಕೆಯಾಗಿತ್ತು,

ತಳ ಮಟ್ಟದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೇ ದೊಡ್ಡ ಮಟ್ಟಕ್ಕೆ ಬೆಳೆಯಲಾಗುವುದಿಲ್ಲ ಹಾಗೂ ನಿಮ್ಮ ಗಡಿ ನಿಮ್ಮ ಭಾಷೆಯ ಜನರ ಹಿತಾಸಕ್ತಿ ಕಾಯ್ದುಕೊಳ್ಳುವ ಮೂಲ ಗುಣ ಇಲ್ಲದಿದ್ದರೆ ಒಬ್ಬ ನಾಯಕ ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಇಷ್ಟು ಎತ್ತರವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ರಾಜಕೀಯ ಹೊರತಾಗಿ ಇವತ್ತಿಗೂ ಬಲ ಠಾಕ್ರೆ ಹುಲಿಯೇ! ಅಂಥ ಒಂದು ಸಾಮ್ರಾಜ್ಯಕಟ್ಟಿ, ಮೈಕಲ್ ಜ್ಯಾಕ್ಸನ್ ಇಂದ ಹಿಡಿದು, ಇಂಡಿಯಾ ಪಾಕಿಸ್ತಾನದ ಕ್ರಿಕೆಟ್ ಮ್ಯಾಚ್ ಗಳನ್ನೂ ಸಹ ಕಂಟ್ರೋಲ್ ಮಾಡಬೇಕಿದ್ದರೆ ಅದೆಂತಹ ಸಾಮ್ರಾಜ್ಯ ಕಟ್ಟಿರಬೇಡ??!

ಆಗಿನ ಕಾಲಕ್ಕೆ, ಹಿಂದೂ ಮುಸ್ಲಿಂ ಗಲಾಟೆ, ಭೂಗತ ಲೋಕದ ಪಾತಕಿಗಳ ಸಂಘರ್ಷ , ಮತ್ತು ಭಯೋತ್ಪಾದನೆಯ ತಾಣವಾಗಿದ್ದ ಮುಂಬೈ ಎಂಬ ನಗರಿಯನ್ನು ಕೇಂದ್ರ ಸರ್ಕಾರವೂ ಪ್ರಶ್ನಿಸದಂತೆ ಕೇವಲ, ಭಾಷೆಯ ಹಾಗೂ ಒಂದು ಸಮುದಾಯದ ಜನರ ಪಲ್ಸ್ ಅನ್ನು ಆಳವಾಗಿ ಅರ್ಥೈಸಿಕೊಂಡು ಬೆಳೆದ ಪರಿ ರೋಚಕವೇ. ಇಂದಿರಾ ಗಾಂಧಿ ಖುದ್ದು ಅವರನ್ನು ಕರೆದು ರಾಜಿಗಾಗಿ ಬೇಡಿಕೆಯಿಡುತ್ತಿದ್ದರೆಂದರೆ ಸುಮ್ಮನೆ ಮಾತೆ??! 

ಇಂತಿಪ್ಪ ಸಾಮ್ರಾಜ್ಯಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲದ ಮಕ್ಕಳು, ಮೊಮ್ಮಕ್ಕಳು, ಕೆಲವು ಹುಂಬ ಮನಸ್ಥಿತಿಯ ಜನರ ಸೇರ್ಪಡೆಯಿಂದ, ಶಿವ ಸೇನೆ ಪುಂಡಾಟಕೀಯ ಪಕ್ಶವೆಂದೇ ಕುಖ್ಯಾತಿ ಪಡೆಯಲು ಶುರುಮಾಡಿತು. ಯಾರೋ ಎಲ್ಲೋ ಮಾಡುವ ಧಾಂದಲೆಗಳನ್ನು ಈ ಪಕ್ಷದ ಕಾರ್ಯಕರ್ತರೆಂಬ ಸಮರ್ಥನೆಯಲ್ಲಿ ಮುಗಿದು ಹೋಗುತ್ತಿದ್ದವು. 

ಇಡೀ ದೇಶದಲ್ಲಿ ಭಾಷೆಯ ಹಾಗೂ ಗಡಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲುತ್ತದೆ, ಕನ್ನಡಿಗರಾಗಿ ನಮಗೆ ಕೋಪ ತಾಪ ಬಂದರೂ ಬೆಳಗಾವಿಯಲ್ಲಿ ಬಂದು ಧಾಂದಲೆ ನಡೆಸಿ ತಮ್ಮ ಬಾವುಟ ಹಾರಿಸುವಷ್ಟು ಉಡಾಫೆ ತೋರಿಸಲು ಮೂಲ ಕಾರಣ ಮತ್ತದೇ ನಾವೆಲ್ಲ ಒಂದೇ ಎಂದು ಸಾರುವ ಮರಾಠೀ ಭಾಷೆ! 

ಕೇವಲ ಭಾಷೆಯ ಮಾನದಂಡ ತೆಗೆದುಕೊಂಡರೆ ತಮಿಳು ನಾಡು ಹಾಗೂ ಕೇರಳ ಕೂಡ ಅಷ್ಟೇ ಜತನದಿಂದ ಭಾಷಾ ಪ್ರೇಮ ಹಾಗೂ ಪ್ರಾದೇಶಿಕ ಬೆಳವಣಿಗೆಗೆ ಒತ್ತು ಕೊಡುವ ರಾಜ್ಯಗಳು. ಆ ಕಾರಣಗಳಿಂದಲೇ ಅಲ್ಲಿನ ಜನ ಹಾಗೂ ಸರ್ಕಾರಗಳೂ ಕೇಂದ್ರದ ಮೇಲೆ ಅವಲಂಬಿತರಾಗದೇ ಆರಾಮಾಗಿ ಉಸಿರಾಡುತ್ತಿವೆ. 

ಇಂತಹ ಇತಿಹಾಸ ಹಾಗೂ ಅಪಾರ ಜನಮನ್ನಣೆ ಪಡೆದ ಪಕ್ಷವೊಂದು ಕೇವಲ ಒಬ್ಬ ಚಿತ್ರನಟಿಯ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿ ನಗೆಪಾಟಲಿಗೀಡಾಗಿ ಯುವ ಜನರ ಪಾಲಿನ ಖಳನಟ ಎಂಬಂತೆ ಚಿತ್ರಿಸಲ್ಪಟ್ಟಿದ್ದು ಮಾತ್ರ ದುರಂತ. ಇನ್ನು ಕಾಂಟ್ರೊವರ್ಸಿಗಳ ಜೀವಿತಾವಧಿ ನೋಡಲು ಹೊರಟರೆ ಅವು ನಮ್ಮ ಒಂದು ದಿನದ ಸ್ಟೇಟಸ್ ಸ್ಟೋರಿಗಳಷ್ಟೆಯೇ ಪ್ರಸ್ತುತ. ಇದರಿಂದ ಮುಖ ಭಂಗವಾಗಿದ್ದರೂ ಇದು ತೀರಾ ರಾಜಕೀಯವಾಗಿ ಪರಿಣಾಮ ಬೀಳಬಹುದೇ ಎಂದು ಕಾಡು ನೋಡಬೇಕಷ್ಟೆ!

ಎಲ್ಲ ವಿದ್ಯಾಮಾನಗಳೂ ಹೀಗೆ ನಡೆದೂ ಮೈತ್ರಿ ಸರ್ಕಾರ ಮಾತ್ರ ಬಿಜೆಪಿ ಹಾಗು ಶಿವ ಸೇನೆ ಇದ್ದಿದ್ದರೇ, ಇವತ್ತು #ಮನೆಮಗಳು  #ಜೈ_ಕಂಗನಾ ಹಾಗೂ #love _you  _kangana  ಗಳು ಇಷ್ಟೇ ಪ್ರಬಲವಾಗಿ ಕೆಲಸ ಮಾಡುತ್ತಿದ್ದವೇ ಎಂದು ಯೋಚಿಸುವ ಸಮಯ! 



Thursday, July 23, 2020

ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !





ನಮ್ಮ ಧಾರವಾಡದ ಮಳೆಗಾಲಕ್ಕ, ಮೋಹಕ ಸೊಬಗಿದೆ, ಎರಡು ನಿಮಿಷವೂ ಬಿಡದೆ, ಆಗಸವೆಂಬ ಬಿಂದಿಗೆಗೆ ಯಾರೋ ತೂತು ಮಾಡಿದ ಹಾಗೆ ಬಿಟ್ಟು ಬಿಡದೇ  ಸುರಿಯುವ  ತವಕವಿದೆ !ಇಂತಿಪ್ಪ ಮಳೆಗಾಲದಲ್ಲಿ ಬರುವ ಪಂಚಮಿಯ ಹಬ್ಬಕ್ಕೆ ಪ್ರೀತಿಯ ಆಚರಣೆ ಇದೆ.

ತಂಪಾದ  ಮಂಜಿನ  ಬೆಳಗು, ಜಿಟಿ ಜಿಟಿ ಸುರಿಯುವ ಮಳೆ, ಬೆಚ್ಚಗೆ ಹೊದ್ದು ಮಲಗಿದ್ದ ನಮ್ಮನ್ನ , "ಇವತ್ತು ಪಂಚಮಿ ,ಇವತ್ತರೆ ಬೇಗ ಎದ್ದು ಹಾಲು ಎರೆದು  ಬಂದ್ಮೇಲೆ ನಾಷ್ಟಾ ನೆನಪಿರಲಿ "ಎಂದು ಗದರಿಸಿ ಎಚ್ಚರಿಸುತ್ತಿದ್ದ ಅಮ್ಮ, ರೇಶಿಮೆಯ ಕೆಂಪು ಹಾಗೂ ಹಸಿರು ಬಣ್ಣದ ಲಂಗ ದಾವಣಿ, ಮಲ್ಲಿಗೆ ಹೂವು, ಝುಮಕಿ, ಕೈತುಂಬ  ಬಳೆ, ಕಾಡಿಗೆ ಹಾಗೂ ಕುಂಕುಮ ಇಟ್ಟುಕೊಂಡು ಅಮ್ಮ ತಯಾರಿಸಿಟ್ಟ , ಸಣ್ಣ ಗಿಂಡಿಯಲ್ಲಿ ಹಾಲು, ಅಗರ್ ಬತ್ತಿ,ತಂಬಿಟ್ಟು, ಶೇಂಗಾ ಉಂಡಿ ,  ಹುರಿದ ಜೋಳದ ಅಳ್ಳು ,ಹೂವು , ನೈವೇದ್ಯೆಗೆಂದು ಮಾಡಿಟ್ಟ ಕರಿಗಡುಬು, ದೀಪದ ಎಣ್ಣೆ-ಬತ್ತಿ, ಎಲ್ಲವನ್ನು ಶ್ರದ್ಧೆಯಿಂದ ಒಂದು ತಟ್ಟೆಗೆ ಜೋಡಿಸಿಕೊಂಡು ಅದರ ಮೇಲೆ ಉಲೆನಿಂದ ಹಣೆದ ಮುಚ್ಚಿಗೆ, ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !

ಹೋಗುವ ದಾರಿಯಲ್ಲಿ ನೆರೆಯವರು ಸಿಕ್ಕು "ಹಾಲ್ ಎರಿಯಾಕ್ ಹೊಂಟೇರಿ? ಎಷ್ಟು ಎತ್ತರ ಬೆಳದಾಳ ನೋಡ್ರಿ ಮಗಳು, ಲಕ್ಷಣದ ಗೌರಮ್ಮ" ಎಂದು ಕೆನ್ನೆ ತಟ್ಟಿ ಪ್ರೀತಿಯಿ೦ದ , ಮಾತನಾಡಿಸುತ್ತಿದ್ದ ಆಂಟಿಯರು , ಗಣೇಶನ ದೇವಸ್ಥಾನದ ಅಂಗಳದಲ್ಲಿ ಆಲದ ಮರಕ್ಕೆ ಅಂಟಿಕೊಂಡಿದ್ದ ಕೆಂಪು ಮಣ್ಣಿನ ಹುತ್ತು, ಪ್ರತಿವರ್ಷ ನಾಗಪ್ಪ, ನಾವು ಹೋಗುವ ವರೆಗೆ ಹೊರಗೆ ಬರದೇ ಇರಲಪ್ಪ ಎಂಬ ಅಂಜಿಕೆಯಿಂದಲೇ ಹಾಲು ಹಾಕುವಾಗ, "ಹೆದರ್ಬ್ಯಾಡ ಅರಾಮ್ ಪೂಜೆ ಮಾಡು ಏನೂ ಆಗುದಿಲ್ಲ ಎಂದು" ಅಮ್ಮ ಹೇಳುತ್ತಿದ್ದ ಧೈರ್ಯ, ಅರ್ಚಕರು ಹೊರಗೆ ಬಂದು ನಂಗೋಸ್ಕರ ಒಂದು ಮಂಗಳಾರತಿ ಮಾಡಿ ಗಣೇಶನ ಮೇಲಿದ್ದ ಹೂವು ತಂದುಕೊಟ್ಟು, ಎಲ್ಲ ಚೊಲೋ ಆಗ್ಲಿ ಅರಾಮ್ ಇರ್ರಿ , ನೀನೆ ಫಸ್ಟ್ ಬರಬೇಕು ಈ ಸಲ ಎಕ್ಸಾಮ್ಸ್ನ್ಯಾಗ , ಎನ್ನುವಾಗ ಎಂತದೋ ಹಿಗ್ಗು!
ಆಮೇಲೆ ದೀಪ ಹಚ್ಚಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮನೆಕಡೆ ಹೊರಟರೆ ಜೋಕಾಲಿಯದ್ದೇ ಗುಂಗು.

ದೊಡ್ಡ ಮರಕ್ಕೆ ಕಟ್ಟಿದ ಜೋಕಾಲಿ ಆಡುವುದಕ್ಕೆ ಹರ ಸಾಹಸ ಪಟ್ಟು, ಕಡೆಗೆ ನಾನು ಹೆಚ್ಚು ,ನೀನು ಹೆಚ್ಚು ಎಂದು ಕ್ವಾರ್ಟರ್ಸ್ ಹುಡುಗೀಯರ ಜೊತೆ  ಜಗಳ ಆಡುವ ಗೋಜೇ ಬೇಡ ಎಂದು ಹೇಳಿ ಅಪ್ಪ ಮನೆಯಲ್ಲೇ ನನಗಾಗಿ ಕಟ್ಟುತ್ತಿದ್ದ ಜೋಕಾಲಿ, ಅಡುಗೆ ಮನೆಯಿಂದ ಹಾಲ್ ಗೆ ಬರುವ ಪ್ಯಾಸೇಜ್ ಬ್ಲಾಕ್ ಮಾಡಿ ಪ್ರತಿ ಸಲ ಅಮ್ಮನಿಗೆ ಹಾಯ್ದು ಬೈಸಿಕೊಳ್ಳುತ್ತಿದ್ದ ದಿನಗಳು, ಇದರ ಮಧ್ಯೆ ತಮ್ಮನಿಗೂ ಸ್ವಲ್ಪ ಹೊತ್ತು ಜೋಕಾಲಿ ಬಿಟ್ಟು ಕೊಡುವ ತ್ಯಾಗ, ಒಂದೇ ಎರಡೇ, ಪಂಚಮಿ ಕೇವಲ ಹಬ್ಬವಲ್ಲ ಹುಡುಗೀಯರ ಪಾಲಿಗೆ ಸಡಗರ !
ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು



Monday, July 13, 2020

ಸೋಶಿಯಲ್ ಮೀಡಿಯಾ ಹಾಗೂ ವರ್ಚುಯಲ್ ಐಡೆಂಟಿಟಿ !



ಸುಮ್ಮನೆ ಗಮನಿಸಿ ನೋಡಿ.. ಸೋಶಿಯಲ್ ಮೀಡಿಯಾ ಗೆ ಒಂದು ಪ್ಯಾಟರ್ನ್ ಇದೆ, ಒಂದೇ ಸಲಕ್ಕೆ ಯಾರನ್ನೋ ಹೀರೋ ಅಥವಾ ಜೀರೋ ಮಾಡುವ ಬಲಿಷ್ಠ ಶಕ್ತಿ ಇದೆ ! ನಿಮಗೆ ಇಷ್ಟವೊ ಇಲ್ಲವೋ ಟ್ರೆಂಡಿಂಗ್ ಹೆಸರಲ್ಲಿ ನಡೆಯುವ ಎಲ್ಲ ವಿದ್ಯಮಾನಗಳು ನಿಮ್ಮ timeline ನಲ್ಲಿ ಕಾಣಲೇ ಬೇಕು, ಅವರ ಅಲ್ಗೊರಿಥಮ್ಸ್ ಕೂಡ ಟ್ರೆಂಡ್ ಗೆ ಅನುಗುಣವಾಗಿ ಅಪ್ಡೇಟ್ ಆಗುತ್ತಲಿರುತ್ತವೆ!

ಕಳೆದೆರಡು ವಾರಗಳಿಂದ ಒಂದು ಸೂಲಿಬೆಲೆ, ಇನ್ನೊಂದು ಪ್ರತಾಪ್ ಟ್ರೊಲ್ ಗಳಿಗೆ ಆಹಾರವಾದ ವ್ಯಕ್ತಿಗಳು! ಸೂಲಿಬೆಲೆಯ ಬಗ್ಗೆ ಮೊದಲೇ ಕೇಳಿದ್ದ ನೆನಪು ಕೆಲವು ಒಳ್ಳೆಯ ಕೆಲ್ಸದ ಜೊತೆಗೆ ಅವರ ಅತಿಯಾದ ಇಲ್ಲೊಜಿಕಲ್ ಮಾತುಗಳೇ ಅವರಿಗೆ ಸಧ್ಯ ಮುಳುವಾಗಿರುವುದು ಈಗ ಹಳೆಯ ಸುದ್ದಿ. ಹೇಂಗೂ ಚಕ್ರವರ್ತಿ ಟ್ರೆಂಡ್ ನಡೆದಿತ್ತು, ಅದರೊಟ್ಟಿಗೆ ಈ ಹುಡುಗ ಟ್ರೊಲ್ ಆಗುವ ಮುಂಚೆ ಯಾರೆಂದು ಅನೇಕರಿಗೆ ಗೊತ್ತೇ ಇರಲಿಲ್ಲ ಅಂತಹ ಮಹಾ ಮೋಸಗಾರನನ್ನು ಸಾರಾಸಗಟಾಗಿ ಸುಳ್ಳುಗಳ ಕಾರಣದಿಂದ ಸೂಲಿಬೆಲೆಯ ತಮ್ಮನ ಪಟ್ಟ ಕೊಟ್ಟು ಬಿಡಲಾಯಿತು. ಟ್ರಾಲ್ ಗಳಿಗೆ ಎಥಿಕ್ಸ್ ಇರುವುದಿಲ್ಲ ಬಿಡಿ ಟ್ರೊಲ್ knows ಹೌ ಟು ಡಿಫೇಮ್ someone. ಇದೇ ಸಿಕ್ಕಿದ ಅವಕಾಶವೆಂದು ದಶಕಗಳಿಂದ ತನ್ನ ಕ್ಷೇತ್ರದಲ್ಲಿ ರಾಜಕೀಯ ಪ್ರೇರೆಪಿತ  ಭಾಷಣಗಳ ಹೊರತಾಗೀಯೂ ಸಮಾಜಕ್ಕೆ ಅನೇಕ ರೀತಿಯ ಸಹಾಯ ಮಾಡಿದ ಚಕ್ರವರ್ತಿ ಎಲ್ಲಿ , ಸುಳ್ಳುಗಳನ್ನೇ ಮಾರಿ ದುಡ್ಡು ಮಾಡಿ ರಾಜಕೀಯ ನಾಯಕರನ್ನೇ ಮಂಗ ಮಾಡಿದ ಈ ಹುಡುಗ ಎಲ್ಲಿ? ಹೋಲಿಕೆಗೂ ಮಿತಿ ಬೇಡವೇ?!

ನಾನು ಸೂಲಿಬೆಲೆಯ ಅನುಯಾಯಿಯೂ ಅಲ್ಲ, ಯಾವುದೇ ಬ್ರಿಗೇಡ್ ನ ಕಾರ್ಯಕ್ರತೆಯೂ ಅಲ್ಲ, ಆ ವ್ಯಕ್ತಿಯನ್ನು ಅಣ್ಣ ಎಂದು ತಬ್ಬಿಕೊಂಡೆ ಇನ್ಸ್ಪೈರ್ ಆಗೋ ದೂಡ್ಡ  ಯುವ ಬಳಗವಿದೆ ಅದೆಲ್ಲ ಕೇವಲ ಅವರು ಮಾಡುವ ಭಾಷಣಗಳಿಂದ ಆಗಿದ್ದಲ್ಲ ಅನ್ನುವುದು ಎಷ್ಟು ನಿಜವೂ ಅಷ್ಟೇ ನಿಜ  ಮಾತಿನ ಭರದಲ್ಲಿ ಹೇಳಿದ ಸುಳ್ಳುಗಳಿಂದ ಅವರ ಕಟ್ಟಾ ಹಿಂಬಾಲಕರು ಪೇಚಿಗೆ ಸಿಲುಕಿರುವುದು.

ನಾವುಗಳೆಲ್ಲ ಭಾವುಕ ಜೀವಿಗಳು ದೇಶಭಕ್ತಿಯೆಂಬ ರೋಮಾಂಚನವನ್ನು ಮಾತಿನ ಮೂಲಕವೇ ಬಡಿದೆಬ್ಬಿಸುತ್ತಿದ್ದ ಅಪ್ಪಟ ವಾಗ್ಮಿ ಸೂಲಿಬೆಲೆಗೂ ಈ ಸುಳ್ಳುಗಾರ ಪ್ರತಾಪನಿಗೂ ಹೋಲಿಕೆ ಸಲ್ಲ. ಸೈದ್ಧಾಂತಿಕ ವಿರೋಧ ಏನೇ ಇದ್ದರೂ ನೀವು ಯಾವ ಕಂಟೆಂಟ್ ಇಟ್ಟುಕೊಂಡು ನಿಮ್ಮ ಸೈಧಾಂತಿಕ ವಾದ ಮಂಡಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ, ಟ್ರೊಲ್ ಗಳ  ಹೆಸರಲ್ಲಿ ಕೇವಲ ದ್ವೇಷ ಹಾಗೂ ಅಸೂಯೆ ಬಿತ್ತಿ, ವೈಯಕ್ತಿಕ ತೇಜೋವಧೆ ಮಾಡುವುದೇ ನಿಮ್ಮ ಉದ್ದೇಶವಾಗಿದ್ದರೆ ಅದನ್ನು ಟ್ರೊಲ್ ಅನ್ನದೆ ಬುಲ್ಯಿಂಗ್ ಎನ್ನಬೇಕಾಗುತ್ತದೆ. ಸಮಾಜದ ಸ್ವಾಸ್ಥ್ಯ ಸುಳ್ಳುಗಾರರಿಂದ ಕೆಡುವುದಲ್ಲ ಆ ಸುಳ್ಳುಗಳನ್ನು ಮರು ಪ್ರಶ್ನೆ ಇಲ್ಲದೆ ಒಪ್ಪಿಕೊಂಡು ಸೋಶಿಯಲ್ ಮೀಡಿಯಾ ಕೊಡುವ ಪ್ಯಾಟರ್ನ್ ಗೆ ಅನುಗುಣವಾಗಿ ಕುಣಿಯುವ ನಮ್ಮ ವರ್ಚುಯಲ್ ಐಡೆಂಟಿಟಿ!!!


ನಿಮಗಾಗದವರನ್ನು ಅಥವಾ ನಿಮ್ಮ ಯೋಚನೆಗೆ ಹೊಂದಿಕೆಯಾಗದವರನ್ನು, ನಿಮ್ಮ ವೈಚಾರಿಕ ಭಿನ್ನಾಭಿಪ್ರಾಯಗಳಿಂದ ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ದ್ವೇಷಿಸಲು ಹೊರಟರೆ ಜಗತ್ತಿನಲ್ಲಿ ಪ್ರೀತಿಸಲು ಯಾರೂ ಉಳಿಯುವದಿಲ್ಲ! ಯಾರೂ ನೂರು ಪ್ರತಿಶತ ಒಳ್ಳೆಯವರೂ ಅಲ್ಲ ನೂರು ಪ್ರತಿಶತ ಕೆಟ್ಟವರೂ ಅಲ್ಲ, ನಮಗೆ ಒಳ್ಳೆಯದು ಎಲ್ಲಿಂದಲೋ ಯಾರಿಂದಲೂ ಕೇಳಲು ಕಲಿಯಲು  ಅವಕಾಶವಿದ್ದರೆ ಅದನ್ನು ರಾಜಕೀಯ ಹಾಗೂ ಸೈದ್ಧಾಂತಿಕ ಎಂಬ ಬೇಲಿಗಳನ್ನು ದಾಟಿ ಅಳವಡಿಸಿಕೊಳ್ಳೋಣ !

Thursday, June 18, 2020

ದೂರ ತೀರ ಯಾನ....

  ಬೆಳಗ್ಗೆ ಏಳು , ಹಲ್ಲುಜ್ಜು , ಸ್ನಾನ ಮಾಡು , ತಿಂಡಿ ತಿನ್ನು ಕರೆಕ್ಟ್ ಸಮಯಕ್ಕೆ  ಕ್ಲಾಸಿಗೆ ಹೋಗು... ಇದು ಪ್ರತಿನಿತ್ಯದ ದಿನಚರಿ. ಇದರಲ್ಲಿ ಬದಲಾವಣೆಗಳು ಸಾಧ್ಯವೇ ಇಲ್ಲ. ಬದಲಾವಣೆ ಮಾಡಹೊರಟರೂ  ಅದು ಒಂದೋ ಎರೆಡೋ  ದಿನಕ್ಕಾಗುವ ಬದಲಾವಣೆಯೋ ವಿನಃ ದಿನಚರಿ ಆಗಲೊಲ್ಲದು.

ಹೀಗೆ ದಿನ ಪೂರ್ತಿ ಮಾಡಿದ್ದನ್ನೇ  ಮಾಡುತ್ತ , ಕೇಳಿದ್ದನ್ನೇ ಕೇಳುತ್ತ, ಅದೇ ಮನೆ, ಅದೇ ಕಾಲೇಜು ,ಅದೇ ಕಚೇರಿ  ಅದೇ ಜನ, ಅದೇ ಸಮಾಜ ಎಂಬ ನಿಯಮಿತ ಪರೀಧಿಯೊಳಗೆ ಸಾಗುತ್ತಿರುತ್ತದೆ ನಮ್ಮ ಜೀವನ ಗುಟ್ಟುಗಳಲ್ಲಿ ಹಾಗೂ ವಿಫಲ ರಟ್ಟುಗಳಲ್ಲಿ !

 ನಾವೇ ನಮ್ಮ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಸಮಾಜ, ಅದರ ಕಟ್ಟುಪಾಡುಗಳು ಏನೋ ಇದೆಲ್ಲ ಗೋಪಿ , ನನಗೊಬ್ಬನಿಗೆ ಹೀಗೆ ಅನ್ಸೋದ ಅಥವಾ ನಿಂಗೂ ಹಿಂಗ ಆಗುತ್ತ ?! ಸಾಕು  ಸುಮ್ನಿರಪಾ  ನಿನ್ನ ನಂಬಿಕೊಂಡು ಒಂದ್ಸಲ ನಿನ್ ಜೊತೆ ನಾನು ಅವನಲ್ಲ ಅವಳು ಫಿಲಂ ನೋಡಿದ್ದಕ್ಕೆ ಅಮ್ಮ ನಂಗೆ ಬಾಸುಂಡೆ ಬಾರೋ ಹಾಗೆ ಬಾರ್ಸಿದ್ಲು ಗೊತ್ತಲ್ವ ?! ದುಡ್ಡಿರೋರು ನೀವೆಲ್ಲ ಏನಂದ್ರು ನಡೆಯುತ್ತೆ ಏನ್ ಮಾಡಿದ್ರು ನಡೆಯುತ್ತೆ ಅಸಲಿಗೆ ಯಾಕೆ ಅಂತ ಕೇಳುವ ತಾಕತ್ತೇ ಯಾರ್ಗೂ ಇಲ್ಲ, ಯಾರ್ಗೂ ಗೊತ್ತಾಗದ ಹಾಗೆ ನ್ಯೂಮೆರೊಲೊಜಿ ಮಣ್ಣು ಮಸಿ ಅಂತ ದೀಪಕ್ ಅನ್ನೋ ಹೆಸರನ್ನೇ ದೀಪ್ ಮಾಡಿಕೊಂಡ ನೀನು ,ಸಮಾಜ ,ಶಾಸ್ತ್ರ ಅಂತ ಮಾತಾಡ್ತೀಯಾ? ಬಿಡು ಇಲ್ಲಿಗೆ ಇದನ್ನೆಲ್ಲ ಕೆಲಸಕ್ಕ್ ಬರೋದನ್ನ ಮಾಡು , ಮಾಡ್ಲಿಲ್ಲ ಅಂದ್ರೂ ತೊಂದ್ರೆ ಇಲ್ಲ ಬಿಡು ನಂಗೆ ಮಾತ್ರ ಬದುಕಲು ಬಿಟ್ಟಬಿಡು ! ಇದೆಲ್ಲ ನಂಗಾಗೋ ಕೆಲಸ ಅಲ್ಲ...ಎಂದು ರಾತ್ರಿ ಕಂಬೈನ್ ಸ್ಟಡಿ ಮಾಡಲು ಹೋಗಿದ್ದು, ಓದೋದನ್ನ ಬಿಟ್ಟು ಇನ್ನೆಲ್ಲ ಮಾಡಿದ್ದಾಯ್ತು, "ಹಿಂಗೇ ಆದ್ರೆ ನಾನು ಇಂಜಿನಿಯರ ಆದ ಹಾಗೆ!ನಾ ಮನೆಗ್ ಹೋಗ್ಬೇಕು ಇನ್ಯಾವತ್ತೂ ಬರಲ್ಲ ಇಲ್ಲಿ" ಎಂದು ಹೊರಡಲು ಅಣಿಯಾದ ಗೋಪಿ

ಲೋ ದಡ್ದ ಅದು ಹಂಗಲ್ಲ ಒಂದು ಸಿಗಾರ್ ಹೊಡೆಯಣ ಬಾ ಇಲ್ಲಿ , ನೋಡು ನಮಗೇನು ಅನ್ಸುತ್ತೋ ಅದನ್ನೇ ಮಾಡಿ ನಿಮಗ್ ಖುಷಿ ಕೊಡದನ್ನೇ ಹಿಂಬಾಲಿಸಿ ಅಂತ ಕನ್ನಡ ಮಾಷ್ಟ್ರು ಲೆಕ್ಚರ್ ಕೊಟ್ರ ಇಲ್ವಾ? ದೀಪಕ್ , ಗೋಪಿಯ ಹೆಗಲ ಮೇಲೆ ಕೈ ಹಾಕಿ ಸಮಾಧಾನ ಹೇಳಲು ಹೋಗಿದ್ದು ಫಲ ಕೊಡಲಿಲ್ಲ.  "ಅದಕ್ಕೂ ಇದಕ್ಕೂ ಸಂಭಂದ ಇಲ್ಲ" ಗೋಪಿ ಸಿಟ್ಟಲ್ಲಿ ಹೇಳಿದ ... "ಇದೆ ಕಣೋ ನಮ್ಮ ದೇಶ ನಮ್ಮ ಸಮಾಜ ಹೆಂಗೆ ನಿರ್ಮಿಸಲ್ಪಟ್ಟಿದೆ ಅಂದ್ರೆ ಯಾವನೋ ಏನೋ ರೂಲ್ಸು ಮಾಡಿ ಗೊಟಕ್ ಅನ್ನೋದು ನೇಣ್ ಹಾಕೋ ಪರಿಸ್ಥಿತಿ ಬಂದ್ರೂ ಅದನ್ನು ಚಾಚೂ ತಪ್ಪದೆ ಪಾಲ್ಸಿ ನೇಣ್ ಹಾಕೊಳ್ಳೋ ನಮ್ಮ ಜನರು , ಅವರು ಮಾಡಿದ್ದು ಸರಿ , ಅವರ ಸಂಪ್ರದಾಯ ಸರಿ, ಅವರ ಲೈಂಗಿಕತೆನೇ ಸರಿ ಅಂತ ವಾದ ಮಾಡಿ ಸಾಯ್ತಾವೆ ! ಅಮೇರಿಕಾ ಇಂಗ್ಲೆಂಡ್ ನಲ್ಲಿ ಗೇ ಮ್ಯಾರೇಜ್ ಎಲ್ಲ ಕಾಮನ್ ಮಗಾ ! ನಮ್ಮುವುಕ್ಕೆ ಅದೊಂದು ಅಪರಾಧ. ಸರಿ ತಪ್ಪು ಅವರವರ ಮನಸಿನ ಭಾವನೆ ಮತ್ತು ಆ ಭಾವನೆ ಮೂಡಿಸಿದ ಸಮಾಜದ ಮೇಲೆ ನಿರ್ಧರಿತವಾಗಿರುತ್ತದೆ ! ಇವತ್ತಿಗೂ ನಿಂಗೆ ಇಷ್ಟ ಇಲ್ಲ ಅಂದ್ರೆ ನಾನು , ನಿನ್ನ ಒತ್ತಾಯ ಪೂರ್ವಕವಾಗಿ ಇಟ್ಕೊಳ್ಳೋಕೆ ಆಗೋದಿಲ್ಲ, ನೀನು ಸಮಾಜ ಅಂತ ಅಂಜಿಕೊಂಡು ನಿನ್ನ ಆಸೆಗಳನ್ನು , ಮನದ ಬೇಡಿಕೆಗಳನ್ನು ಕೊಲ್ಲಬೇಕು ಅಂತ ನಿರ್ಧರಿಸಿದ್ದರೆ ಕೊಂದುಕೊ ಅದಕ್ಕಾಗಿ ಇನ್ನೊಬ್ಬ ಹುಡುಗಿಯ ಜೀವನ ಹಾಳು...... " ಎನ್ನುವಷ್ಟರಲ್ಲಿಯೇ ಸಿಟ್ಟಿನಲ್ಲಿ ಬಾಗಿಲನ್ನು, ರಪ್ ಅಂತ ಎಳೆದುಕೊಂಡು ಹೊರನಡೆದ ಗೋಪಿ.

ದಾರಿಯಲ್ಲಿ ನಡೆದು ಹೋಗುವಾಗ ,ಮನೆಯಲ್ಲಿ ಕಾಯಿಲೆ ಬಿದ್ದಿರುವ ಅಜ್ಜಿ, ಅಪ್ಪನಿಗಾಗಿ ಒಂದು ಕಿಡ್ನಿ ದಾನ ಮಾಡಿ, ಕೊನೆಗೂ ಅಪ್ಪನನ್ನು ಉಳಿಸಿಕೊಳ್ಳಲಾಗದೆ ಹೋದ ನತದೃಷ್ಟ ಹೆಂಡತಿ ನಾನು, ಎಂದು ದಿನಾ  ಶಪಿಸಿಕೊಂಡು ಅಡುಗೆ ಮಾಡುವ ಅಮ್ಮನನ್ನು ನೋಡಿ ಒಂದು ಸಲ ಪಾಪ ಪ್ರಜ್ಞೆ ಬಂದು ,ಕೆನ್ನೆ ತಟ್ಟಿ  ಹೋದ ಹಾಗೆ ಆಯ್ತು! ನಾನು ಓದಿ ಒಳ್ಳೆಯ ಕೆಲಸ ಸೇರಿ ಮನೆ ಸಾಲ ತೀರ್ಸಿ, ಅಮ್ಮನಿಗೊಂದು ಒಳ್ಳೆಯ ಜೀವನ ಕೊಡಬಹುದು ಅಂತ ಅಪ್ಪ ಇರುವಾಗಲೂ ಬಯಸಿದ್ದಳು ಅಮ್ಮ ! "ನಾನೀಗ ಓದುವುದನ್ನು ಬಿಟ್ಟು ಇನ್ನೇನೋ ಮಾಡಿಕೊಂಡು ಓಡಾಡ್ತಾ ಇದೀನಿ ಅಸಹ್ಯ" ಎಂದು ತನ್ನನ್ನು ತಾನೇ ಹಳಿದುಕೊಂಡು, ಮನೆ ತಲುಪಿ  ಮತ್ತೆ ಓದಲು ಕುಳಿತುಕೊಳ್ಳುತ್ತಾನೆ ಗೋಪಿ !

ಬಿಟ್ಟರೂ ಬಿಡದೀ ಮಾಯೆ ಅನ್ನುವ ಹಾಗೆ, ಎರಡು ಪುಟಗಳನ್ನ ತಿರುವಷ್ಟರಲ್ಲಿ ದೀಪಕ್ ಕಾಡಲು ಶುರು ಮಾಡುತ್ತಾನೆ ! ಥತ್  ಹಾಳಾದ್ದು ಓದಕ್ಕೆ ಆಗ್ತಿಲ್ಲ ಅಂತ ಪುಸ್ತಕ ಮುಚ್ಚಿಟ್ಟು , ಪಡಸಾಲೆಯಲ್ಲಿ ಅಜ್ಜಿಯ ಪಕ್ಕ ಬಂದು ಮಲಗುವ ನಾಟಕ ಮಾಡಿದರೂ, ನೆನ್ನೆ ರಾತ್ರಿ ಕುಡಿದ ಮತ್ತಿನಲ್ಲಿಯೇ ಎಲ್ಲವೂ ನಡೆಯಲಿಲ್ಲ ಆದರೂ ನಾನ್ಯಾವುದಕ್ಕೂ ಪ್ರತಿರೋಧ ಒಡ್ಡಲಿಲ್ಲ ಅಂದ್ರೆ ನನಗೂ ಅವನು ಮಾಡಿದ್ದೆಲ್ಲ ಇಷ್ಟ ಅಂತಲೇ ಅರ್ಥ ಅಲ್ವ ? ಕಾಲೇಜು ಅಂದ್ರೆ ಸುಂದರ ಹುಡುಗೀಯರನ್ನು ನೋಡಬಹುದು ಅಂತ ಹೇಳುವ ಹುಡುಗರ ಮಧ್ಯೆ ನನಗೆ ಮಾತ್ರ ದೀಪಕ್ ಮೋದಲ ನೋಟಕ್ಕೆ ಇಷ್ಟ ಆಗಿ ಬಿಟ್ಟಿದ್ದ, ಗಂಡು ಹೆಣ್ಣನ್ನು ಮಾತ್ರ ಇಷ್ಟ ಪಡಬೇಕು ಅಂತ ಕಾನೂನೇ ಇರುವಾಗ ನಾ ಹೇಗೆ ಧೈರ್ಯ ಮಾಡಿ ಅವನ ಹತ್ತಿರ ಹೋಗಿ ನನ್ನ ಇಷ್ಟ ಹೇಳಿಕೊಳ್ಳೋದು ಅಂತ ಮನಸ್ಸಿನಲ್ಲೇ ಕೊರಗುವಾಗ ಅವನೇ ಬಂದು ನನ್ನ ಪಕ್ಕ  ಕೂತು ನನ್ನನ್ನು  ಇಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಲ್ಲದೇ  ನನಗೆ ಗೊತ್ತಿಲ್ಲದೇ, ನನ್ನ ಇಡೀಯಾಗಿ ಆವರಿಸಿದ !
to be continued.....

"ದಿ ಪ್ಲೇಗ್ " ಇಂದಿನ ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ !

ಫ್ರೆಂಚ್ ತತ್ವಜ್ಞಾನಿ ,ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ ": ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್ ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ...... ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ!

ಕೆಮುವಿನ ಕಾದಂಬರಿ "ದಿ ಪ್ಲೇಗ್ " ಇಂದಿನ  ಕೋವಿಡ್ -೧೯ ಸಾಂಕ್ರಾಮಿಕ  ರೋಗದ  ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ ! 

" ಈ ಅನಿರ್ದಿಷ್ಟ ದುರದೃಷ್ಟಕರ ಕಾಲಮಾನ ಏಕತಾನತೆಯಿಂದ ನರಳುವಂತೆ ಮಾಡುವುದಲ್ಲದೇ ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತದೆ. ತಗ್ಗಿಸಲಾಗದ ಬೆಂಕಿಯಂತೆ ಮೇಲುನೋಟಕ್ಕೆ ಕಂಡುಬಂದರೂ , ಪ್ಲೇಗ್ ನಂತಹ ಮಾರಿಯನ್ನು ಸಹ ಗೆದ್ದವರ ನೆನಪಿನೊಂದಿಗೆ, ಹೆಜ್ಜೆ ಹೆಜ್ಜೆಗೂ ಅತಿರೇಕದ ರಕ್ಕಸನಂತೆ,ವಿವರಿಸಲಾಗದ ಹಿಂಸೆ, ಸಾವು ,ನೋವು, ಹತಾಶೆಯನ್ನು  ಕೊಟ್ಟ  ಈ ಕಾಯಿಲೆ ಈಗ ಇತಿಹಾಸದ ಪುಟಗಳಲ್ಲಿನ ಕರಾಳ ಅಧ್ಯಾಯ! ಈ ಸ೦ವೇದನಾಶೀಲ ಜಾಡ್ಯದ ಮುಂದೆ ಇನ್ನೆಲ್ಲವೂ ಗೌಣವೆಂಬಂತೆ ಕಾಣುವಂತೆ ಮಾಡಿರುವುದು ಅಕ್ಷರಶಃ ನಿಜ. "ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ "-ಪುಟ ೧೭೯

ಕಾಲ್ಪನಿಕ ಕಾದಂಬರಿಯಾದರೂ, ೨ ಲಕ್ಷ ಜನಸಂಖ್ಯೆ ಇರುವ , ಉತ್ತರ ಆಫ್ರಿಕಾದ ಓರಾನ್ ಎಂಬ ಪಟ್ಟಣದಲ್ಲಿ ,ಜನ ಇದನ್ನು ತಡೆಯುವಲ್ಲಿ ಹೇಗೆ ಮಾನಸಿಕವಾಗಿ ತೈಯಾರಿ ನಡೆಸುತ್ತಿದ್ದರು , ಹಾಗೂ ಭಾವನಾತ್ಮಕವಾಗಿ ಎಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ಕ್ಯೆಮೂ ತನ್ನ ವಿಚಾರದ ಮೂಲಕ, ಹಾಗೂ ಪಾತ್ರಗಳ ಮುಖಾಂತರ, ಸಂಭಾಷಣೆಗಳಲ್ಲಿ, ಮನುಕುಲದ ಅಸ್ತಿತ್ವವನ್ನು ಅಣುಕಿಸುವ ಅನಿಶ್ಚತತೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾನೆ. 

ಹಾಗೆ ಹೋಲಿಸುವುದಾದರೆ  ಕ್ಯೆಮೂವಿನ ಪ್ಲೇಗ್ ಗೂ  ಹಾಗೂ ಕೋವಿಡ್ -೧೯ ಕೊರೋನಾ ಅಂಟುರೋಗಕ್ಕೂ ತುಂಬ ವ್ಯತ್ಯಾಸವಿದೆ . ಮೊದಲನೆಯದಾಗಿ ಪ್ಲೇಗ್ ಎರಡನೇ ಮಹಾಯುದ್ಧದ ಮುಂದುವರೆದ ಭಾಗದಂತೆ ಜನರನ್ನು ಕಾಡಿತ್ತು , ೭೦ ವರ್ಷದ  ಹಿಂದೆ ,ಈಗಿರುವ ವೈದ್ಯಕೀಯ ಸವಲತ್ತಾಗಲಿ, ಔಷಧವಾಗಲೀ ಇಲ್ಲದ ಕಾಲದಲ್ಲಿ ಸಮುದಾಯದ ನಾಮಾವಶೇಷ ಸಿಗದಂತೆ ಮಾಡಿದ್ದಲ್ಲದೇ, ಕುಟುಂಬ ನಡೆಸುವ ಆಧಾರ  ಸ್ಥ೦ಭವಾಗಿರುವ ಪುರುಷರನ್ನೇ ಹೆಚ್ಚಾಗಿ ಬಲಿ ತೆಗೆದುಕೊಂಡಿತ್ತು!

ದಿ ಪ್ಲೇಗ್ ನ ಮೂಲ ವಿಷಯ ಮನುಕುಲದ ಸಂಘರ್ಷವೇ ಆಗಿದ್ದರೂ, ಆಗಿನ ಕಾಲಕ್ಕೆ ನಮ್ಮ ಇಂದಿನ ಪರಿಸ್ಥಿತಿಗೂ ಹೋಲಿಕೆಯಾಗುವಂತೆ ಬೆಲೆ ಏರಿಕೆ ಹಾಗೂ ಹಾಹಾಕಾರದಿಂದ ಉಂಟಾಗುವ ಅಭಾವಗಳ ಉಲ್ಲೇಖ ಮಾಡಲಾಗಿದೆ. ಇವತ್ತಿಗೆ ಕೇಳುತ್ತಿರವ ಮಾಸ್ಕ ಹಾಗೂ ಸ್ಯಾನಿಟೈಜರ್ಗಳ  ಕೊರತೆಯನ್ನು  ಹಾಗೂ ಭಯದ ವಾತಾವರಣದಿಂದ ಜನ  ಅವಶ್ಯಕತೆಗೂ ಮೀರಿದ ಖರೀದಿಯನ್ನು ನಾವು ಕಾಣುತ್ತಲ್ಲೇ ಇದ್ದೇವೆ.  ಕಾಲ್ಪನಿಕವಾದ "ಓರಾನ್ ಪಟ್ಟಣದಲ್ಲಿ ಹಣದಾಸೆಗಾಗಿ ವ್ಯಾಪಾರಸ್ಥರು ತಮ್ಮಲ್ಲಿರುವ ಅವಶ್ಯಕತೆಯ ಆಹಾರ ಪದಾರ್ಥಗಳನ್ನು ಶ್ರೀಮಂತರಿಗೇ ಮಾರಾಟಮಾಡಿ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿ ಬಡವರಿಗೆ ತಿನ್ನಲು ಗಂಜಿಯೂ ಇಲ್ಲದಂತೆ ಮಾಡಿದ್ದರು . ಸಮುದಾಯಕ್ಕೆ ಹರಡಿದ ಸಾಮಾಜಿಕ ಪಿಡುಗಾದರೂ, ಎಲ್ಲ ವರ್ಗಗಳಿಗೆ ಸಮಾನತೆ ತರಬಹುದು ಎಂದು ಊಹಿಸುವುದೂ ಮೂರ್ಖತನ" ಪುಟ -೨೩೭. 

ಈ ವೈರಾಣುವಿನ ಜೊತೆಗಿನ ಹೋರಾಟ, ಒಂದು ರೀತಿಯ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳಂತೆಯೇ ಕಂಡುಬರುತ್ತದೆ, ಪೃಕೃತಿಗೆ ಹೇಗೆ ಮೇಲು -ಕೀಳು, ಶ್ರೀಮಂತ- ಬಡವ ,ಹೆಣ್ಣು -ಗಂಡು ಎಂಬ ತಾರತಮ್ಯವಿಲ್ಲವೋ ಹಾಗೆಯೆ ಈ ವೈರಾಣುವಿಗೂ ಕೂಡ! ಆದರೆ ಅತೀ ಕಡಿಮೆ ಸಂಪನ್ಮೂಲ ಹೊಂದಿ ಬದುಕುವ ಜನರಿಗೆ, ಅತೀ  ಹೆಚ್ಚಿನ ಹಾನಿ ಉಂಟಾಗುವುದಂತೂ ಎರಡೂ ವಿಷಯಗಳಲ್ಲಿ ನಿಜ ! 

ಈ ಪುಸ್ತಕದಲ್ಲಿ ನಿರೂಪಕನಾಗಿರುವವ ಡಾಕ್ಟರ್ ಬರ್ನಾರ್ಡ್, ಅವನದ್ದು ಬಿಡುವಿಲ್ಲದ ವೈದ್ಯಕೀಯ ಹೋರಾಟ!
ಕೊನೆಯ ಘಳಿಗೆಯವರೆಗೂ ಹೋರಾಡಿದರೂ ಅವನಿಗೆ ಸಿಗುತ್ತಿದ್ದ ಫಲಿತಾಂಶ ಮಾತ್ರ ೧೦೦ ಕ್ಕೆ ಒಂದರಂತೆ , ಇಂತಿಪ್ಪ ಸಾವುಗಳನ್ನು, ತನ್ನ ಅಸಹಾಯಕತೆಯನ್ನು, ಈ ಪಾತ್ರದ ಮೂಲಕ ಕ್ಯೆಮು ಸೂಕ್ಷ್ಮವಾಗಿ ವಿವರಿಸುತ್ತಾನೆ , ೯ ತಿಂಗಳ ಪ್ರತ್ಯೇಕತೆಯ ನಂತರ ಪಟ್ಟಣದಲ್ಲಿ ಎಲ್ಲರೂ ಮೊದಲಿನಂತೆ ಓಡಾಡಬಹುದು ಎಂಬ ಸಂಭ್ರಮಾಚಾರಣೆಯಲ್ಲಿ ತಾವು ಅನುಭವಿಸಿದ ನೋವನ್ನೆಲ್ಲ ಮರೆತಂತೆ ಕಂಡ ಜನರೆಡೆಗೆ ಬರ್ನಾರ್ಡ್ ಹೇಳುವ ಮಾತಿದು " ಅವನು ಎಲ್ಲರೊಳಗೊಂದಾಗಿ ಇರಲು ಇಚ್ಛಿಸಿದನೋ ಅಥವಾ ಹಾಗೆ  ೯ ತಿಂಗಳೂ ಏನೂ ನಡೆಯಲೇ  ಇಲ್ಲ ಎಂಬಂತೆ ಇರಲು  ಅವನ ಸುತ್ತಲಿನ ವಾತಾವರಣ ಕಾರಣವಾಯಿತೋ ಗೊತ್ತಿಲ್ಲ, ಆದರೆ ಮನುಷ್ಯರ ಹೃದಯದಾಳದಲ್ಲಿ ಬದಲಾವಣೆ ತರಲು, ಪ್ಲೇಗ್ ನ೦ತಹ  ಮಾರಣಾಂತಿಕ ಕಾಯಿಲೆಗೂ, ಸಾಧ್ಯವಿಲ್ಲ "  ಪುಟ ೨೯೫

ಹಾಗಾದರೆ ಈ ಜಾಡ್ಯದ ಫಲಿತಾಂಶವನ್ನು ಕ್ಯೆಮುವಿನ ಕಾದಂಬರಿಯ ದೃಷ್ಟಿಯಲ್ಲಿ ನೋಡ ಹೊರಟರೆ ಅಲ್ಲಿ,ಒಳ್ಳೆಯ ಹಾಗೂ ದುರದೃಷ್ಟಕರ ಎರಡೂ ಅಂಶಗಳಿವೆ, ಪ್ರೀತಿ ಪಾತ್ರರನ್ನು ಕಳೆದುಕೊಂಡು ಅನಾಥ ಭಾವದೊಟ್ಟಿಗೆ, ಭವಿಷ್ಯದ ಅನಿಶ್ಚಯತೆಯ ನಡುವೆ , ಹೃದಯವನ್ನು ಕಲ್ಲಾಗಿಸಿಕೊಂಡು ಬದುಕನ್ನು ಎದುರಿಸುವವರು ಒಂದುಕಡೆಯಾದರೆ, ತಮ್ಮ ಸಾವನ್ನೂ ಲೆಕ್ಕಿಸದೇ  ಕೊನೆಘಳಿಗೆವರೆಗೂ ಹೋರಾಡಿದ ವೈದ್ಯರೂ , ನರ್ಸುಗಳು ಹಾಗೂ ಸ್ವಯಂಸೇವಕರ ನಿಸ್ವಾರ್ಥ ಸೇವೆಯ ಅನಾವರಣ, ಇನ್ನೊಂದೆಡೆ. 

ಯಾವುದೊ ಹಂತದಲ್ಲಿ ಸರಿ ಇಲ್ಲವೆಂಬ ಅಂಶವನ್ನು, ಹಾಗೂ ಅನ್ಯಾಯವನ್ನು ಎದುರಿಸುವುದು ಕಷ್ಟ ಆದರೆ ಅದರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕ! ಜನ ಗೇಲಿಮಾಡಿದರೂ ಸರಿ ಯಾರೋ ಒಬ್ಬ ಮುಂದೆ ಬಂದು ಇದು ತಪ್ಪು, ಹೀಗೆ ಮಾಡುವುದು ಅನ್ಯಾಯ ಎಂದು ಸಾರ್ವಜನಿಕವಾಗಿ  ಹೇಳಿ, ಅದಕ್ಕೆ ಪ್ರತಿಕೂಲವಾದ ಕ್ರಿಯೆಯಿಂದ ಹೇಗೆ ಇದನ್ನು ಸರಿಮಾಡಬಹುದು ಎಂದು ತೋರಿಸಿಕೊಟ್ಟರೂ ಸಾಕು, ಅದು ಒಳ್ಳೆಯ ಕ್ರಿಯೆಯಾಗಿದ್ದರೆ ಖಂಡಿತವಾಗಿಯೂ ಎಲ್ಲರೂ ಅದನ್ನು ಪಾಲಿಸಲು ಮುಂದಾಗುತ್ತಾರೆ ! ಈ ಒಂದು ಬದಲಾವಣೆಯ ಗಾಳಿಯಿಂದಲೇ ಓರಾನ್ ತನ್ನ ಅಳಿವಿನಂಚಿನಿಂದ ಹೊರಬಂದು ಮೊದಲಿನ ಚೈತನ್ಯಕ್ಕೆ ನಾಂದಿ ಹಾಡಿದ್ದು. ಇದು ಬದುಕಿನ ಪಾಠವೂ ಹೌದು! 

ನಾವು ಕ್ಯೆಮುವಿನ ದೃಷ್ಟಿಯಲ್ಲಿ ,ಪರಿಗಣಿಸಬೇಕಾದ,ಇಂದಿನ  ಕೊರೋನಾಗೂ  ಒಗ್ಗುವ, ಎರಡು ಮುಖ್ಯಾ೦ಶಗಳು 

೧.  ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್  ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ. ಪುಟ-  ೧೨೫. 

೨.  ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ! ಪುಟ -೩೦೮(ಕೊನೆಯ ಪುಟ )

ಒಂದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಮ್ಮಿಂದೇನಾಗುತ್ತದೋ ಅದೆಲ್ಲವನ್ನೂ ಮಾಡೋಣ, ಸಧ್ಯ ಈ ಪಿಡುಗಿನಿಂದ ಪಾರಗಲೂ ಏನು ಮಾಡಬೇಕೋ ಅದನ್ನು ಮಾಡೋಣ , ಎಲ್ಲ ಮುಗಿದ ನಂತರ, ಪ್ಲೇಗ್ ಗಿಂತಲೂ ಕೆಟ್ಟದಾಗಿ ಅಂಟಿರುವ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾವೂ ಕಾರಣೀಕರ್ತರಾಗುತ್ತಿರುವ, ಪಿಡುಗುಗಳಾದ, ಪರಿಸರ ವಿನಾಶ ,ಹಸಿವು,ಯುದ್ಧ,  ಹಾಗೂ ವ್ಯವಸ್ಥಿತ ಅನ್ಯಾಯದ ವಿರುದ್ಧ  ಎಲ್ಲರೂ ಒಟ್ಟಾಗಿ ಹೋರಾಡೋಣ. 


Monday, June 15, 2020

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ!






ನಮ್ಮ ಫಾಸ್ಟ್ ಬದುಕೋ, ಅಥವಾ ತಂತ್ರಜ್ನ್ಯಾನದ ಕೊಡುಗೆಯೂ, ಅಥವಾ ನಾವು ನೆಚ್ಚಿಕೊಂಡ ಮೀಡಿಯಾ ಪ್ರಭಾವವೋ ಎಲ್ಲದೂ ಸೇರಿ,ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಾಗಿ, ಆ ಸಮಸ್ಯೆಯ ಹೊಣೆಯನ್ನು ಯಾರ ಹೆಗಲಿಗೆ ಕಟ್ಟೋದು ಅಂತ ಒದ್ದಾಡುತ್ತಿರುತ್ತೇವೆ!! ಹಾಗೇ ಮಾಡುವಾಗೆಲ್ಲ ನಾವು ಸರಿ ನಮ್ಮ ಸುತ್ತಲಿರುವುದೆಲ್ಲ ತಪ್ಪು ಅನ್ನುವ ಕಲ್ಪನೆ ನಮಗೆ ಗೊತ್ತಿಲ್ಲದೇ ಬಲವಾಗುತ್ತಾ ಹೋಗುತ್ತದೆ! ಮತ್ತೆ ಸಮಸ್ಯೆಯ ಮೂಲ ಕರಣ ಹಾಗೂ ಪರಿಹಾರಕ್ಕಿಂತ ಯಾರನ್ನು ಬೈದು ಇಗೋ ತಣಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ನಡೆಯುತ್ತಿರುತ್ತದೆ. ಇದು ಐಚ್ಛಿಕವಾಗಿಯೋ ಅನೈಚ್ಚಿಕವಾಗಿಯೋ ನಡೆಯುವ ಕ್ರಿಯೆ, ಆದರೆ ಹೀಗೆ ನಮ್ಮ ಮೈಂಡ್ ಟ್ರೈನ್ ಆಗಿರೋದಕ್ಕೆ ಮೇಲೆ ಹೇಳಿದ ಎಲ್ಲವೂ ಕಾರಣಗಳೇ!

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ! ಯಾರು ತಪ್ಪು ಯಾರು ಸರಿ ಅನ್ನುವ ವಿಂಗಡನೆ ಇಷ್ಟ! ಆ ವಿಂಗಡನೆಯಿಂದ ನಮ್ಮ ಗುಂಪು ಯಾವುದು ನಾವು ಯಾರ ಬಣದಲ್ಲಿ ಗುರುತಿಸಕೊಳ್ಳಲು ಬಯಸುತ್ತೇವೆ ಎಂಬುದನ್ನು ನಿರ್ಧರಿಸುವ ಸಾಧನ. ನಿನ್ನೆ ಅರ್ನಬ್ ನಡೆಸಿಕೊಟ್ಟ ಕೆಟ್ಟ ಡಿಬೇಟ ಪ್ರೋಗ್ರಾಮ್ಗಳಲ್ಲೇ ಅತೀ ಕೆಟ್ಟದ್ದು ಅಂದರೆ ತಪ್ಪಾಗಲಾರದೇನೋ, ಈತ ನ್ಯೂಸ್ Hour ಅನ್ನೋ ಪ್ರೈಮ್ ಟೈಮ್ ನಡೆಸಲು ಶುರು ಮಾಡಿದಾಗ ವಾವ್ ಎನಿಸುವಂತೆ ಮಾಡಿದ್ದ, ಮೊದಲ ಬಾರಿ ಮೋದಿ ಗೆಲ್ಲುವಲ್ಲೂ ಈತ ಮಾಡಿದ ಇಂಟರ್ವ್ಯೂಗಳು ನೇರ ಪರಿಣಾಮ ಬೀರಿದ್ದವು. ಇತ್ತೀಚಿಗೆ ಈ ವ್ಯಕ್ತಿ ಜರ್ನಲಿಸಂ ಬಿಟ್ಟು ಇನ್ನೇನೋ ಮಾಡುತ್ತಿರುವನೇನೋ ಎನ್ನುವಷ್ಟು ಬಿಂದಾಸಾಗಿಯೇ ತನ್ನ ಡಿಬೇಟ ನಡೆಸಿಕೊಡುತ್ತಾನೆ, ಒಬ್ಬ ಪತ್ರಕರ್ತ ಹೇಗೆ ನಡೆದುಕೊಳ್ಳಬಾರದು ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿ ನಿಲ್ಲುವವ! ಆತ ನೇಶನ್ ಫಸ್ಟ್ ಅನ್ನೋ ಟ್ಯಾಗ್ ಹಾಕಿದ್ ತಕ್ಷಣ ಅವನು ದೇಶ ಭಕ್ತ ಅಂತ ತಬ್ಬಿ ಮುದ್ದಾಡುವುವರು ಇದ್ದಾರೆ! ಅಲ್ಲಿನ ರಾಜಕೀಯ, ಎಡ ,ಬಲ ಏನೇ ಇರಲಿ, ಪ್ರತಿ ಸಾವು, ದುರ್ಘಟನೆ, ನೋವು ಅನ್ಯಾಯಗಳನ್ನು ರಾಜಕೀಯವಾಗಿ ಯೋಚಿಸುವಂತೆ  ಮಾಡಿರುವ ಕೀರ್ತಿ ಎಲ್ಲ ಮಾಧ್ಯಮಗಳಿಗೂ ಸಲ್ಲಬೇಕು ಅರ್ನಬ್ ಎದ್ದು ಕಂಡರೆ ಕಾಣದ ಕೈಗಳು ಹಲವಾರಿವೆ!! 

ಬಾಲಿವುಡ್ ಹಲವು ದಶಕಗಳಿಂದ ಯಾರ ಕಂಟ್ರೋಲ್ ನಲ್ಲಿ ಇದೆ ಎನ್ನುವುದು ಓಪನ್ ಸೀಕ್ರೆಟ್, ಖಾನ್ ಗಳು , ಕಪೂರ್ಗಳು, ಅಷ್ಟೇ ಏಕೆ ಸಂಜಯ್ ದತ್ತ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವ್ಗನ್ ಕೂಡ ಇದಕ್ಕೆ ಹೊರತೇನಲ್ಲ!! ನಾವು ನಮ್ಮ ನೆಚ್ಚಿನ ತಾರೆಯರನ್ನ ನಮ್ಮ ಸೈಧಾಂತಿಕ ಹಿನ್ನಲೆಯಲ್ಲಿ ಅಳೆಯಲು ಶುರು ಮಾಡಿದ ದಿನದಿಂದ ಎಂಟರ್ಟೈನ್ಮೆಂಟ್ ಕೂಡ ಪಾಲಿಟಿಕಲಿ ಮೋಟಿವೇಟೆಡ್ ಬಿಸಿನೆಸ್ ಆಗಿಯಾಗಿದೆ.

ಇನ್ನು ಸುಶಾಂತ್ ಸಿಂಗ್ ನಾ ಸಾವನ್ನು ಜನ ತಮಗೆ ಬೇಕಾದ ಹಾಗೆ ತಿರುಚಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ! ನೆಪೋಟಿಸಮ್ ಯಾವ ಕ್ಷೇತ್ರದಲ್ಲಿ ಇಲ್ಲ?? ಒಬ್ಬ ಸ್ಟಾರ್ ಮಗನಾಗಿದ್ದಕ್ಕೋ ಅಥವಾ ಶ್ರೀಮಂತ ಮನೆಯ ಕುಡಿಯೆನ್ನುವ ಕಾರಣಕ್ಕೋ ಜನ ಎಲ್ಲರನ್ನೂ ಸ್ವೀಕರಿಸುವ ಹಾಗಿದ್ದರೆ ಅಭಿಷೇಕ್ ಬಚ್ಚನ್ ಆಗಲಿ, ನಿಖಿಲ್ ಕುಮಾರಸ್ವಾಮಿ ಯಾಗಲಿ ಇಷ್ಟೊತ್ತಿಗೆ ಸ್ಟಾರ್ ಗಳಾಗಿ ಮೆರೆಯಬೇಕಿತ್ತು! ರಾಜಕುಮಾರ್ ಅವರ ಪರಿವಾರದ ಶ್ರೀರಕ್ಷೆ ಇದ್ದರೂ ಶಿವರಾಜ್ ಆಗಲಿ ಪುನೀತ್ ಆಗಲಿ ತಮ್ಮ ತಮ್ಮ ಪಾಲಿನ ಹೋರಾಟ ಕಷ್ಟಗಳನ್ನು ಅನುಭವಿಸಿಯೇ ಮೇಲೆ ಬಂದಿರುತ್ತಾರೆ , ಸೋಲು ಅವರುಗಳನ್ನು ಪಾತಾಳಕ್ಕೆ ತಳ್ಳದೇ ಇರಬಹುದು, ಸೋತರೂ ಒಪ್ಪುವ ಜನರು ಇರಬಹುದು ಅದನ್ನು ಬಿಟ್ಟರೆ ಪ್ರತಿ ಕ್ಷೇತ್ರ ಪ್ರತಿಭೆಗೆ ಬೆಲೆ ಕೊಟ್ಟೆ ಕೊಡುತ್ತದೆ ಅಲ್ಲಿ ನಡೆಯುವ ರಾಜಕೀಯ ಹಾಗೂ ಅನ್ಯಾಯದ ಹೊರತಾಗಿ!


ಗಾಡ್  ಫಾದರ್ ಇಲ್ಲದ ಸುಶಾಂತನಿಗೆ, ಧೋನಿಯಂತಹ ಕೋಟ್ಯಾ೦ತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟರ್ ನ ಪಾತ್ರ ಮಾಡಲು ಸಿಕ್ಕ ಅವಕಾಶವೇನು ಚಿಕ್ಕದೇ?? ಅದನ್ನು ಲಕ್ಷಾಂತರ ಜನ ಬೆನ್ನು ತಟ್ಟಿ ,ಧೋನಿಯೆಂದರೆ ನೀನೇ ಎನ್ನುವಷ್ಟು ಆಪ್ತವಾಗಿ ಒಪ್ಪಿಕೊಂಡಿರುವುದು ಸಣ್ಣ ಸಾಧನೆಯೇ?? ಇಷ್ಟೆಲ್ಲ ಸಿಕ್ಕ ವ್ಯಕ್ತಿಗೆ, ಅಲ್ಲಿ ನಡೆಯುವ ಫೇವರಿಸಂನ ಅರಿವಿರಲಿಲ್ಲ ಎನ್ನುವುದು ತೀರಾ ಬಾಲಿಶ ವಾದವಾಗುತ್ತದೆ!!


ಕಾರಣ ಏನೇ ಇರಬಹುದು ಪ್ರತಿ ಆತ್ಮಹತ್ಯೆಗೆ ನಮ್ಮ ಸುತ್ತಲಿನ ಸಿಸ್ಟಮ್, ಸಮಾಜ , ಆಗದಿರುವ ಜನ ಕಾರಣೀಭೂತರಾಗಿರುತ್ತಾರೆ, ಅದನ್ನು ಎದುರಿಸುವಲ್ಲಿ ಸೋತ ಮನುಷ್ಯನ ಧೈರ್ಯ ಚಿಕ್ಕದೆನಿಸುತ್ತದೆ ಯಾಕೆಂದರೆ ಖಿನ್ನತೆಯನ್ನು ನಾವು ಮನೋರೋಗವೆಂದಷ್ಟೇ ಉತ್ಪ್ರೇಕ್ಷೆ ತೋರಿ ಅದೇನೂ ದೊಡ್ಡ ವಿಷಯವೇ ಅಲ್ಲ ಎಂಬಂತೆ ಉದಾಸೀನ ಮಾಡಿರುತ್ತೇವೆ. ಶಾಲೆಗೆ ಹೋಗುವ ಮಗು ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಪಾಲಕರನ್ನು ಕೊಲೆಗಾರರು ಎನ್ನವುದು ಸರಿಯೋ ಅಥವಾ ಹಾಗೆ ಮಾಡಿಕೊಳ್ಳುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಸೂಕ್ತ counselling ಅಥವಾ ಚಿಕಿತ್ಸೆಯ ಚರ್ಚೆ ಮುಖ್ಯವೋ??! 

ಮನುಷ್ಯ ಇದ್ದಾಗ ಅವನ ಆಗು  ಹೋಗುಗಳು , ನೋವು ನಲಿವುಗಳಿಗೆ  ಸ್ಪಂದಿಸದೇ, ಅವನು ಪ್ರಾಣ ಕಳೆದುಕೊಳ್ಳುವವರೆಗೂ ಸುಮ್ಮನಿದ್ದು, ಸತ್ತ ವ್ಯಕ್ತಿ ಈಗ ತಿರುಗಿ ಬರುವುದಿಲ್ಲ ಎಂದು ಧೃಡವಾದಾಗ ಮಾತ್ರ ನಮ್ಮ ಕರುಣೆ ಅನುಕಂಪ ತೋರುವುದು ಎಷ್ಟು ಸರಿ? ಅವನಿಗಾದ ಅನ್ಯಾಯವನ್ನು ಅವನು ಬದುಕಿದ್ದಾಗಲೇ ಧೈರ್ಯ ತುಂಬಿ, ಒಟ್ಟಿಗೆ ಹೋರಾಡಲು ಬಲ ಕೊಟ್ಟು , ಎದುರಿಸುವ ಬಾ ಎಂದು ಹೇಳಿದ್ದರೆ, ಇವತ್ತಿನ ಮೊಸಳೆ ಕಣ್ಣೀರಿಗೆ ಹಾಗೂ ಅನ್ಯಾಯದ  ವಿರುಧ್ಧದ ಹೇಳಿಕೆಗಳಿಗೆ ಬೆಲೆ ಇರುತ್ತಿತ್ತು!!  

Monday, May 4, 2020

ಜೀನಾ ಇಸೀ ಕಾ ನಾಮ್ ಹೈ 😍😇❤


Losing love is not the biggest loss, but Losing self Respect Is! ಒಂದೇ ವಾಕ್ಯದಲ್ಲಿ ಥಪ್ಪಡ್ ಚಿತ್ರದ ವಿಮರ್ಶೆ ಹೇಳುವುದು ತುಸು ಕಷ್ಟವೇ. ಆದರೂ ಒಂದೊಳ್ಳೆ ಸ್ಕ್ರಿಪ್ಟ್ ಹಾಗೂ ಸ್ಕ್ರೀನ್ ಪ್ಲೆ ಎನ್ನಲು ಅಡ್ಡಿಯಿಲ್ಲ. ಆ ಟೈಟಲ್ ಹೇಳುವಂತೆ ಗಂಡ ಕೊಟ್ಟ ಒಂದು ಏಟಿಗೆ ಆದರ್ಶ ಗೃಹಿಣಿ ಎನಿಸಿಕೊಂಡ ಹೆಂಡತಿಯಲ್ಲಿನ ಬದಲಾವಣೆಗಳ ಹಂದರವೇ ಇಡೀ ಚಿತ್ರ!!
ನಾನು ಮೊದಲಿಗೆ, ಇದೊಂದು ಫೆಮಿನಿಸಮ್ ಕೇಂದ್ರೀಕೃತ ಚಿತ್ರ ಎಂದುಕೊಂಡು ನೋಡಲು ಶುರುಮಾಡಿದ್ದು. ಆದರೆ ಹೋಗ್ತಾ ಹೋಗ್ತಾ, ಪ್ರತಿ ಮಹಿಳೆಯ ಆಂತರ್ಯವನ್ನು ಯಾವುದೋ ಹಂತದಲ್ಲಿ ತಟ್ಟಬಲ್ಲ ದೃಶ್ಯಕಾವ್ಯ ಎನಿಸಿದ್ದು ಸುಳ್ಳಲ್ಲ. ಭಯಂಕರ ಎಕ್ಪೆಕ್ಟೇಷನ್ ಇಲ್ಲದೇ, ಸೆನ್ಸಿಬಲ್ ಇಮೋಷನ್ ಇರೋ ಗಂಡಸರಿಗೆ ಹೆಚ್ಚು ಆಪ್ತ ಅನಿಸಬಹುದು, ಇನ್ನೂ ಒಂದೇ ಒಂದು ಏಟಿಗೆ ಸಿನಿಮಾನ ಅಂತ ಮೂಗುಮುರಿದು, ಹೆಣ್ಣೆಂದರೇ ಹೀಗೆ ಇರಬೇಕು ಎಂದು ಕಸ್ಟಮೈಸ್ ಮಾಡಿ ಬದುಕುತ್ತಿರುವ ಜನರಿಗಾಗಿಯೇ ಇರುವ ಸಿನಿಮಾ ಆದರೂ ಅವರ್ಯಾರೂ ಇದನ್ನ ಇಷ್ಟ ಪಡುವುದೇ ಡೌಟು!
ಹಾಗಿದ್ದರೇ ಕೇವಲ ಒಂದು ಥಪ್ಪಡ್ ಒಂದು ಹೆಣ್ಣನ್ನು ವಿಚ್ಛೇದನದ ಹಂತದವರೆಗೆ ಕರೆದುಕೊಂಡು ಹೋಗುತ್ತದಾ? ಅಷ್ಟೊಂದು ಸಿಲ್ಲಿ ವಿಷಯನಾ ಅಂತ ಮೇಲು ನೋಟಕ್ಕೆ ಕಂಡುಬಂದರೂ, ಏಟು ಕಾರಣವಷ್ಟೆ! ಸಾರ್ವಜನಿಕವಾಗಿ ಹೆಂಡತಿಯನ್ನು ಹೊಡೆಯುವುದು ತನ್ನ ಹಕ್ಕು ಎಂದುಕೊಂಡ ಗಂಡನನ್ನು, ಹೇಗೆ ಒಂದೀಡಿ ಸಮುದಾಯ, ಆತನ ಕುಟುಂಬ ಹಾಗೂ ನರೆಹೊರೆಯವರು ದೂಷಿಸದೇ ಒಪ್ಪಿಕೊಂಡು, ಹೆಣ್ಣೆಂದರೆ ಸಹಿಸಿಕೊಂಡು ಹೋಗುವುದು ಎನ್ನುವದನ್ನು ಹಲವು ಪಾತ್ರಗಳು ಸಾರಿ ಹೇಳುತ್ತವೆ!
ಚಿತ್ರದ ಹೊರತಾಗಿ ಚಿಂತನೆಗೆ ಹಚ್ಚಿದ ಹಲವು ಕಾರಣಗಳು ಕೆಳಗಿನಂತಿವೆ.
ಅಪ್ಪನನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಸಂಬೋಧಿಸಬಾರದು ಎಂದು ಮಕ್ಕಳಿಗೆ ಹೇಳಿಕೊಡುವ ತಾಯಿ, ತನ್ನನ್ನು ಮಕ್ಕಳು ಹೇಗೆ ಸಂಬೊಧಿಸಿದರೂ ಆದೀತು. ಆದರೆ ಅದೇ ಹೆಣ್ಣು ಮಗುವಿಗೆ ಗಂಡನೊಟ್ಟಿಗೆ ಹೀಗ್ ಹೀಗೇ ನಡೆದುಕೊಳ್ಳಬೇಕು ಅನ್ನುವ ಅಲಿಖಿತ ಸ್ಟ್ಯಾಂಡರ್ಡ್‌ ಸೆಟ್ ಮಾಡಿರುತ್ತಾಳೆ!
ಇಂತಿಪ್ಬ ನಿಲುವನ್ನು ಹೊಂದಿರುವ ಅನೇಕ ತಾಯಂದಿರು ನಮ್ಮ ಜೊತೆಯಲ್ಲಿ ಇದ್ದಾರೆ. ಸೆಲ್ಫ್ ಡಿಕ್ಲೆರ್ಡ ವಿಕ್ಟಿಮ್ ಗಳದ್ದೂ ಇದೇ ಗೋಳು, ಹೊಡಿಲಿ ಬಡಿಲಿ ಗಂಡ ಅಲ್ಲವಾ ಎಲ್ಲಾ ಸಂಭಾಳಿಸಿಕೊಂಡು ಹೋಗಬೇಕಷ್ಟೆ ಎಂದು ಬದಲಾಗದ ನಿತ್ಯ ಹಿಂಸೆಗೆ ಸಮಝಾಯಿಶಿ ಕೊಡುತ್ತಲೇ ತಮ್ಮನ್ನು ತಾವು ಸಂತೈಸಿಕೊಳ್ಳುತ್ತಿರುತ್ತಾರೆ.
ಇನ್ನು ಇವತ್ತಿನ ಮದ್ಯದಂಗಡಿ ಎದುರುಗಡೆ ನಿಂತ ಮಾನಿನಿಯರ ದೊಡ್ಡ ಕ್ಯು ಇಂದಿನ ವೈರಲ್ ಪಟ್ಟಿಗೆ ಸೆಡ್ಡು ಹೊಡೆದು ನಿಂತಿದೆ. ಸಮಾನತೆಯ ಹೆಸರಲ್ಲಿ ಇದನ್ಯಾಕೆ ಸೇರಿಸಬಾರದು ಎಂದು ಒಂದು ಬಣ, ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಮತ್ತೊಂದು ಬಣ ಪೈಪೋಟಿಗೆ ಬಿದ್ದಾಗಿದೆ. ೨೦೨೦ ದಶಕದಲ್ಲಿ ವೈನ್ ಶಾಪ್ ಮುಂದೆ ನಿಂತು ರಾಜಾರೋಷವಾಗಿ ಮದ್ಯ ಖರೀದಿ ಮಾಡುವುದೇ ಸಮಾನತೆಯ ಲಕ್ಷಣ ಅನ್ನೋದಾದರೆ, ಇನ್ನೆಲ್ಲ ವಲಯಗಳಲ್ಲಿ ಮಹಿಳೆಯಾಗಿರುವ ಕಾರಣಕ್ಕೆ ಸಿಗುವ ರಿಸರ್ವೇಷನ್ ಹಾಗೂ ಬೆನಫಿಟ್ ಗಳನ್ನು ಬಿಡಲು ನಾವುಗಳು ತಯಾರಿದ್ದೇವೆಯೇ ಎಂದು ಕೇಳಿಕೊಳ್ಳುವ ಸಮಯ ಇದು!
ವೈಯಕ್ತಿಕವಾಗಿ ನನಗೆ ಫೆಮಿನಿಸ್ಂ ಎಂದರೆ, ಗಂಡಸು ಮಾಡಬಹುದಾದ ಎಲ್ಲ ಕೆಲಸವನ್ನು ಮುಲಾಜಿಲ್ಲದೇ ಮಾಡುವುದಲ್ಲ, ಗಂಡು ಹೆಣ್ಣಿನ ಮಧ್ಯೆ ನಿಸರ್ಗವೇ ನಿರ್ಮಿಸಿದ ವ್ಯತ್ಯಾಸಗಳನ್ನು ಪರಸ್ಪರ ಗೌರವಿಸಿಕೊಂಡು, ಒಬ್ಬರಿಗೊಬ್ಬರು ಕಾಂಪ್ಲಿಮೆಂಟರಿಯಾಗಿ ಬದುಕುವುದು! ಇದು ಯೋಚನಾ ಲಹರಿಯಿಂದ ಹಿಡಿದು ಮಾಡುವ ಪ್ರತಿಕೆಲಸದಲ್ಲೂ ತಮ್ಮ ತಮ್ಮದೇ ಛಾಪನ್ನು ಮೂಡಿಸುವ ಪ್ರತಿ ವ್ಯಕ್ತಿಗೂ ಅನ್ವಯ!
ಇನ್ನು ಹೊಡೆದು ಸರಿಮಾಡಲಾರದ ವಿಷಯ ತೆಗಡದುಕೊಂಡರೆ, ಭಾರತೀಯ ಮಕ್ಕಳು ಮುಂಚುಣಿಯಲ್ಲಿ ನಿಲ್ಲುತ್ತಾರೆ. ನಾಳೆ ಇನ್ಯಾರೋ ಅಮೆರಿಕದಲ್ಲಿ ಮಕ್ಕಳಿಗೆ ಹೊಡೆದರೆ ಜೈಲಾಗುತ್ತೆ, ನಮ್ಮಲ್ಲೂ ಅದು ಬರಬೇಕು ಅಂತ ಹೇಳಲು ನಾವು ತಯಾರಿದ್ದೇವೆಯೆ?!
ಪಾಶ್ಚಾತ್ಯರು ನಮಗಿಂತ ಮುಂಚೆ ಶತಮಾನಗಳ ಅಂತರದಲ್ಲಿ, ಒಂದೀಡಿ ಹೊಸ ಪರಂಪರೆಗೆ ಒಳಗಾದವರು! ನಮ್ಮ ಬೆಂಗಳೂರಿನಲ್ಲಿ ಐಟಿ ಬರುವ ಮುಂಚೆ ಲಿವಿಂಗ್ ಟುಗೆದರ್ ಎಂಬ ಪದಗಳನ್ನೇ ಕೇಳದ ಜನರಿದ್ದರು, ಬೈದುಕೊಂಡೋ ಆಡಿಕೊಂಡೊ ಈಗ ನಿಧಾನವಾಗಿ ಇದು ಅವರದ್ದೇ ಊರಿನ ಭಾಗವಾಗಿದೆ ಎಂಬ ಅರಿವು ಮೂಡಿದೆ! ಇದು ರಾತ್ರೋ ರಾತ್ರಿ ಆಗುವ ಬದಲಾವಣೆಯಲ್ಲ ಕಾಲಕ್ರಮೇಣ ಸುತ್ತಲೂ ನಡೆಯುವ ಘಟನಾವಳಿಗಳಿಂದ ಒಪ್ಪಿಕೊಂಡಿದ್ದು ಯಾಕೆಂದ್ರೆ ದೈಹಿಕವಾಗಿ ನಾವು ಹೇಗೆ ಕಂಡರೂ ಮಾನಸಿಕವಾಗಿ, ಅಮ್ಮ, ಅಜ್ಜಿ ಹಾಗೂ ಮನೆಯವರು ಹೇಳಿದ ಕಟ್ಟಳೆಗಳನ್ನು ಸುಲಭವಾಗಿ ಮೀರುವಂಥ ಜೀನ್ಸ ಮ್ಯುಟೇಷನ್ ಗೆ ನಮ್ಮ ಜನರೇಷನ್ ಒಳಗಾಗಿಲ್ಲ!
ಬಟ್ಟೆ ಬಳಸದೆ, ಸ್ಯಾನಿಟರಿ ಪ್ಯಾಡ್ ಬಳಸಬೇಕು ಎಂದು ಪಬ್ಲಿಕ್ ಆಗಿ ಹೇಳುವುದು ಕೂಡ ಟ್ಯಾಬು ಆಗಿದ್ದ ನಮ್ಮ ಸಮಾಜದಲ್ಲಿ, ಧೈರ್ಯವಾಗಿ ‌ಹೆಂಗಸೇ ಹೋಗಿ ಪ್ರೆಗ್ನೆನ್ಸಿ ಕಿಟ್ ತರುವವರೆಗೆ ಬದಲಾವಣೆಯಾಗಿಯೇ ಇದೆ! ಇದು ಕೂಡ ಬೆಳಗಾಗುವುದರೊಳಗಾಗಿ ಆದ ಬದಲಾವಣೆಯಲ್ಲ!
ಇನ್ನು ಪ್ರತಿ ಮನುಷ್ಯನ ಲಿಂಗಭೇದವಿಲ್ಲದೇ, ನಡೆಯುವ, ಯೋಚನಾ ‌ಲಹರಿ ಭಿನ್ನವಾದದ್ದು ಹಾಗೂ ಅದನ್ನು ಇನ್ಯಾರಿಗೋ ಹೆಳುವಂಥ ಅಥವಾ ಇನ್ಯಾರಿಂದಲೋ ಹೇಳಿಸಿಕೊಳ್ಳದಂಥ ಖಾಸಗೀ ವಿಷಯ! ಅದನ್ನ ಟಿವಿ ಪ್ಯಾನಲ್ ನಲ್ಲಿ, ಗಂಟೆಗಟ್ಟಲೇ ಚರ್ಚೆ ಮಾಡಿಯೋ ಅಥವಾ ಹ್ತಷ್ಟ್ಯಾಗ್ ಹಾಕಿ ಅಭಿಯಾನ ಮಾಡಿದಂತೆ ನಮ್ಮ ಪರ ಹಾಗೂ ವಿರೋಧದ ನಿಲುವುಗಳಿಂದ ಅಳೆಯುವುದಾಗಲೀ, ಅಥವಾ ಜಡ್ಜ್ಮೆಂಟ್ ಕೊಡವುದಕ್ಕೆ ನಾವ್ಯಾರು ನ್ಯಾಯಾಧೀಶರಲ್ಲ!
ಎಲ್ಲರಲ್ಲಿ ನ್ಯೂನ್ಯತೆಗಳಿವೆ, ಕಾರಣಗಳಿಲ್ಲದೇ ಪ್ರೀತಿಸುವ ಅಂಶಗಳೂ ಇವೆ! ಸಮಾನತೆ, ಸ್ವಾತಂತ್ರ್ಯ, ತಾರತಮ್ಯ, ಎಂಬ ಹೊಡೆದಾಟದ ಆಚೆಗೆ ನಮ್ಮ ಆತ್ಮ ತೃಪ್ತಿಪಡುವಂಥ ಅನೇಕ ಧನಾತ್ಮಕ ಅಂಶಗಳಿವೆ! ಭಾವನೆಗಳ ಅಲೆದಾಟವನ್ನು, ಮೊಮೆಂಟರಿ ಸಿಟ್ಟನ್ನೂ ಸಮತೋಲನದಿಂದ ತೂಗಿಸಿಕೊಂಡು ಹೋಗುವುದೇ ನಿಜವಾದ ಪ್ರಭುದ್ದತೆ!
ಕ್ಯುಂಕೀ 😍😇
ಜೀನಾ ಇಸೀ ಕಾ ನಾಮ್ ಹೈ 

Monday, April 27, 2020

ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದ ಸಂಭ್ರಮ!


ಜಿಟಿ ಜಿಟಿ ಮಳೆ ಬೀಳುತ್ತಲೇ ಮನವೂ ಒದ್ದೆಯಾಗಿ ,ಮಗ್ಗಲು ಬದಲಿಸಿ, ಬಾಲ್ಯಕ್ಕೆ ಮರಳಿದೆ! ಹೀಗೆ ನಿಶ್ಶಬ್ದದ ಬಾನಿನಲ್ಲಿ , ಮೋಡಗಳ ಮರೆಯಲ್ಲಿ ಅಡಗಿ ಕುಳಿತಿರುತ್ತಿದ್ದ ಸೂರ್ಯನ ದರ್ಶನವೇ ಇಲ್ಲದ ದಿನಗಳು,ವಾರಗಳು , ಅಜ್ಜನ  ಬೆಚ್ಚನೆಯ ತಬ್ಬುಗೆಯ ಘಮ , ಅಜ್ಜಿಯ ಬೆಳ್ಳುಳ್ಳಿ ಒಗ್ಗರಣೆಯ ಘಾಟು, ಅಪ್ಪನ ಪಂಚತಂತ್ರ ಕಥೆಗಳು, ಅಮ್ಮನ ಲಾಲಿಯ ಹಾಡುಗಳು, ಹಿತ್ತಲಿನ ಸಂಪಿಗೆಯ ರಾಶಿ , ಅಂಗಳದ ಮಲ್ಲಿಗೆಯ ನಗು, ಹೀಗೆ ಒಂದೇ ಎರಡೇ, ಬಾಲ್ಯದ ಅಣುಅಣುವು ವೈವಿಧ್ಯಮಯ.

ಒಂದು ರೂಪಾಯಿಯ ಐಸ್ ಕ್ಯಾಂಡಿ , ಅಜ್ಜಿಯ ಕೂದಲು ಎಂಬ ಮಿಠಾಯಿ, ಮರದ ತೊಗಟೆಯಿಂದ ಪೀಪಿ ಆಕಾರದಲ್ಲಿ  ಮಾಡಿದ ಆಟಿಕೆ, ಕುಂಟಾಬಿಲ್ಲೆ,ಮುಟ್ಟಾಟ, ಕಲರ್ ಕಲರ್ ವಾಟ್ ಕಲರ್, ಕಣ್ಣಾ ಮುಚ್ಚಾಲೆ, ಕೆರೆ ದಡ ,ಬೆಳಗಿನಾಟಗಳಾದರೆ ಸಂಜೆಗಾಗಿ ಕಾಯ್ದಿರುಸುತ್ತಿದ್ದ ವೃತ್ತಾಕಾರದಲ್ಲಿ ,ಸುತ್ತಲೂ ಕುಳಿತು  ಆಡುತ್ತಿದ್ದ ಅಂತ್ಯಾಕ್ಷರಿ, ಒಬ್ಬರ ಕಿವಿಯಿಂದ ಇನ್ನೊಬ್ಬರ ಕಿವಿಗೆ ಹೋಗುವಷ್ಟರಲ್ಲಿ ಬದಲಾಗಿಹೋಗುತ್ತಿದ್ದ "ಹೆಲೋ' ಎಂಬ ಮಜವಾದ ಆಟ, ರಾಜ ರಾಣಿ ಕಳ್ಳ ಪೊಲೀಸ್, ಜುಂಕ್ಷನ್ ಎಂಬ ಚೀಟಿಯ ಆಟಗಳು. ಯಾವಾಗಲೂ ಬ್ಯಾಕ್ಗ್ರೌಂಡ್ ನಲ್ಲಿ, ರಫಿ ಲತಾ ರ ಎವರ್ಗ್ರಿನ್ ಹಾಡುಗಳು, ನಮ್ಮ ಉತ್ತರ ಕರ್ನಾಟಕದಲ್ಲಿ ಒಂಚೂರು ಹಿಂದಿ ಹೇರಿಕೆ ಇತ್ತೇನೋ (ಕನ್ನಡ ಹಾಡುಗಳು ಕಡಿಮೆ ಪ್ರಚಲಿತದಲ್ಲಿದ್ದವು)!

ಬೆಂಗಳೂರಿನಲ್ಲಿ ಮೋಡ ಕವಿದಾಗಲೆಲ್ಲ ಮನಸ್ಸು ಧಾರವಾಡದ ಕಡೆ ಮುಖ ಮಾಡಿ ನಿಲ್ಲುತ್ತದೆ, ಗೊತ್ತಿಲ್ಲದೇ ಕಣ್ಣಾಲಿಗಳೆಲ್ಲ ಕಳೆದು ಹೋದ ಒಂದೊಂದು ಭಾವಾವನ್ನೂ ಕಲೆ ಹಾಕಿ ಕೂಡಿಡಲು ಪ್ರಯತ್ನಿಸುತ್ತದೆ! KCD ಎಂಬ ಸ್ವರ್ಗದ ಕಡೆ ಕೈ ಚಾಚಿ ಕರೆಯುತ್ತದೆ, ಕಿತ್ತೂರು ಚೆನ್ನಮ್ಮ ಪಾರ್ಕಿನ  ಮಕ್ಕಳಾಟದ ಮೈದಾನ ಖಾಲಿಯಾದ ನೋವನ್ನು ನೆನಪಿಸುತ್ತದೆ. ಕತ್ತಲಾದರೂ ಬಿಡದೇ ಸರದಿಸಾಲಿನಲ್ಲಿ ನಿಂತು ತಿನ್ನುತ್ತಿದ್ದ ಪ್ರಕಾಶ್ ಸೇವ್ ಪುರಿ ಸೆಂಟರ್, ಮಹಾರಾಷ್ಟ್ರ ಕ್ಯಾಂಟೀನ್ ನ ಶಾಬುದಾನಿ ವಡ, ದುರ್ಗದ್ ಬೈಲಿನ ಗಿರ್ಮಿಟ್ ಹಾಗೂ ಮಿರ್ಚಿ ಎಲ್ಲವನ್ನೂ ಒಂದೇ ದಿನಕ್ಕೆ ತಿಂದು ತೇಗುವ ಆವೇಗ!

ಎಲ್ಲರ ಬಾಲ್ಯವೂ  ಸುಂದರ, ಬಾಲ್ಯದ ಜೊತೆಗೇ  ಹೊಸೆದುಕೊಂಡ ನೆನಪೂ ಮಧುರ, ಎಷ್ಟೇ ವಯಸ್ಸ್ಸಾದರೂ ಹದಿನೆಂಟೇ ಎಂದು ಹೇಳಿಕೊಳ್ಳುಲು ಬಯಸುವ ಅವಿವೇಕಿ ಆಸೆಗೂ ಮೀರಿದ್ದು, ಸರಿ- ತಪ್ಪು, ನಿಜ-ಸುಳ್ಳು , ಎಂಬ ಜಡ್ಜ್ಮೆಂಟಗಳಿಲ್ಲದ, ಅಮಾಯಕ ಸ್ಥಿತಿ, ಮನೆ, ಕುಟುಂಬ, ಸ್ನೇಹಿತರು, ನೆರೆ ಹೊರೆಯವರು, ಇಷ್ಟೇ ಪ್ರಪಂಚ ಎಂಬಂತೆ ಇದ್ದು ಬಿಡುವ ಮನಸ್ಥಿತಿಯ ಅನಾವರಣವೇ ಸೋಜಿಗ. ಮುಲಾಜಿಗೆ ಬಿದ್ದು ಯಾರನ್ನೋ ಖುಷಿ ಪಡಿಸುವ ಇರಾದೆಯೇ ಇರದ ತಟಸ್ಥ ಭಾವನೆ.


ಕರ್ಮಭೂಮಿಯಲ್ಲಿ, ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದು ಸಂಭ್ರಮಿಸುವುದಷ್ಟೇ  ಸಧ್ಯಕ್ಕೆ ಪಡೆದ ಭಾಗ್ಯ,
ಆದರೆ ಒಂದಂತೂ ಸತ್ಯ , ಮಳೆಯಾದಾಗಲೆಲ್ಲ, ಮಾಯಾವೀ ನಗರ, ನಮ್ಮದಲ್ಲದ ವರ್ಚುಯಲ್  ಅಸ್ತಿತ್ವವನ್ನು ಅಣುಕಿಸಿ ಹೋದಂತಾಗುತ್ತದೆ!