Total Pageviews

Monday, May 4, 2020

ಜೀನಾ ಇಸೀ ಕಾ ನಾಮ್ ಹೈ 😍😇❤


Losing love is not the biggest loss, but Losing self Respect Is! ಒಂದೇ ವಾಕ್ಯದಲ್ಲಿ ಥಪ್ಪಡ್ ಚಿತ್ರದ ವಿಮರ್ಶೆ ಹೇಳುವುದು ತುಸು ಕಷ್ಟವೇ. ಆದರೂ ಒಂದೊಳ್ಳೆ ಸ್ಕ್ರಿಪ್ಟ್ ಹಾಗೂ ಸ್ಕ್ರೀನ್ ಪ್ಲೆ ಎನ್ನಲು ಅಡ್ಡಿಯಿಲ್ಲ. ಆ ಟೈಟಲ್ ಹೇಳುವಂತೆ ಗಂಡ ಕೊಟ್ಟ ಒಂದು ಏಟಿಗೆ ಆದರ್ಶ ಗೃಹಿಣಿ ಎನಿಸಿಕೊಂಡ ಹೆಂಡತಿಯಲ್ಲಿನ ಬದಲಾವಣೆಗಳ ಹಂದರವೇ ಇಡೀ ಚಿತ್ರ!!
ನಾನು ಮೊದಲಿಗೆ, ಇದೊಂದು ಫೆಮಿನಿಸಮ್ ಕೇಂದ್ರೀಕೃತ ಚಿತ್ರ ಎಂದುಕೊಂಡು ನೋಡಲು ಶುರುಮಾಡಿದ್ದು. ಆದರೆ ಹೋಗ್ತಾ ಹೋಗ್ತಾ, ಪ್ರತಿ ಮಹಿಳೆಯ ಆಂತರ್ಯವನ್ನು ಯಾವುದೋ ಹಂತದಲ್ಲಿ ತಟ್ಟಬಲ್ಲ ದೃಶ್ಯಕಾವ್ಯ ಎನಿಸಿದ್ದು ಸುಳ್ಳಲ್ಲ. ಭಯಂಕರ ಎಕ್ಪೆಕ್ಟೇಷನ್ ಇಲ್ಲದೇ, ಸೆನ್ಸಿಬಲ್ ಇಮೋಷನ್ ಇರೋ ಗಂಡಸರಿಗೆ ಹೆಚ್ಚು ಆಪ್ತ ಅನಿಸಬಹುದು, ಇನ್ನೂ ಒಂದೇ ಒಂದು ಏಟಿಗೆ ಸಿನಿಮಾನ ಅಂತ ಮೂಗುಮುರಿದು, ಹೆಣ್ಣೆಂದರೇ ಹೀಗೆ ಇರಬೇಕು ಎಂದು ಕಸ್ಟಮೈಸ್ ಮಾಡಿ ಬದುಕುತ್ತಿರುವ ಜನರಿಗಾಗಿಯೇ ಇರುವ ಸಿನಿಮಾ ಆದರೂ ಅವರ್ಯಾರೂ ಇದನ್ನ ಇಷ್ಟ ಪಡುವುದೇ ಡೌಟು!
ಹಾಗಿದ್ದರೇ ಕೇವಲ ಒಂದು ಥಪ್ಪಡ್ ಒಂದು ಹೆಣ್ಣನ್ನು ವಿಚ್ಛೇದನದ ಹಂತದವರೆಗೆ ಕರೆದುಕೊಂಡು ಹೋಗುತ್ತದಾ? ಅಷ್ಟೊಂದು ಸಿಲ್ಲಿ ವಿಷಯನಾ ಅಂತ ಮೇಲು ನೋಟಕ್ಕೆ ಕಂಡುಬಂದರೂ, ಏಟು ಕಾರಣವಷ್ಟೆ! ಸಾರ್ವಜನಿಕವಾಗಿ ಹೆಂಡತಿಯನ್ನು ಹೊಡೆಯುವುದು ತನ್ನ ಹಕ್ಕು ಎಂದುಕೊಂಡ ಗಂಡನನ್ನು, ಹೇಗೆ ಒಂದೀಡಿ ಸಮುದಾಯ, ಆತನ ಕುಟುಂಬ ಹಾಗೂ ನರೆಹೊರೆಯವರು ದೂಷಿಸದೇ ಒಪ್ಪಿಕೊಂಡು, ಹೆಣ್ಣೆಂದರೆ ಸಹಿಸಿಕೊಂಡು ಹೋಗುವುದು ಎನ್ನುವದನ್ನು ಹಲವು ಪಾತ್ರಗಳು ಸಾರಿ ಹೇಳುತ್ತವೆ!
ಚಿತ್ರದ ಹೊರತಾಗಿ ಚಿಂತನೆಗೆ ಹಚ್ಚಿದ ಹಲವು ಕಾರಣಗಳು ಕೆಳಗಿನಂತಿವೆ.
ಅಪ್ಪನನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಸಂಬೋಧಿಸಬಾರದು ಎಂದು ಮಕ್ಕಳಿಗೆ ಹೇಳಿಕೊಡುವ ತಾಯಿ, ತನ್ನನ್ನು ಮಕ್ಕಳು ಹೇಗೆ ಸಂಬೊಧಿಸಿದರೂ ಆದೀತು. ಆದರೆ ಅದೇ ಹೆಣ್ಣು ಮಗುವಿಗೆ ಗಂಡನೊಟ್ಟಿಗೆ ಹೀಗ್ ಹೀಗೇ ನಡೆದುಕೊಳ್ಳಬೇಕು ಅನ್ನುವ ಅಲಿಖಿತ ಸ್ಟ್ಯಾಂಡರ್ಡ್‌ ಸೆಟ್ ಮಾಡಿರುತ್ತಾಳೆ!
ಇಂತಿಪ್ಬ ನಿಲುವನ್ನು ಹೊಂದಿರುವ ಅನೇಕ ತಾಯಂದಿರು ನಮ್ಮ ಜೊತೆಯಲ್ಲಿ ಇದ್ದಾರೆ. ಸೆಲ್ಫ್ ಡಿಕ್ಲೆರ್ಡ ವಿಕ್ಟಿಮ್ ಗಳದ್ದೂ ಇದೇ ಗೋಳು, ಹೊಡಿಲಿ ಬಡಿಲಿ ಗಂಡ ಅಲ್ಲವಾ ಎಲ್ಲಾ ಸಂಭಾಳಿಸಿಕೊಂಡು ಹೋಗಬೇಕಷ್ಟೆ ಎಂದು ಬದಲಾಗದ ನಿತ್ಯ ಹಿಂಸೆಗೆ ಸಮಝಾಯಿಶಿ ಕೊಡುತ್ತಲೇ ತಮ್ಮನ್ನು ತಾವು ಸಂತೈಸಿಕೊಳ್ಳುತ್ತಿರುತ್ತಾರೆ.
ಇನ್ನು ಇವತ್ತಿನ ಮದ್ಯದಂಗಡಿ ಎದುರುಗಡೆ ನಿಂತ ಮಾನಿನಿಯರ ದೊಡ್ಡ ಕ್ಯು ಇಂದಿನ ವೈರಲ್ ಪಟ್ಟಿಗೆ ಸೆಡ್ಡು ಹೊಡೆದು ನಿಂತಿದೆ. ಸಮಾನತೆಯ ಹೆಸರಲ್ಲಿ ಇದನ್ಯಾಕೆ ಸೇರಿಸಬಾರದು ಎಂದು ಒಂದು ಬಣ, ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಮತ್ತೊಂದು ಬಣ ಪೈಪೋಟಿಗೆ ಬಿದ್ದಾಗಿದೆ. ೨೦೨೦ ದಶಕದಲ್ಲಿ ವೈನ್ ಶಾಪ್ ಮುಂದೆ ನಿಂತು ರಾಜಾರೋಷವಾಗಿ ಮದ್ಯ ಖರೀದಿ ಮಾಡುವುದೇ ಸಮಾನತೆಯ ಲಕ್ಷಣ ಅನ್ನೋದಾದರೆ, ಇನ್ನೆಲ್ಲ ವಲಯಗಳಲ್ಲಿ ಮಹಿಳೆಯಾಗಿರುವ ಕಾರಣಕ್ಕೆ ಸಿಗುವ ರಿಸರ್ವೇಷನ್ ಹಾಗೂ ಬೆನಫಿಟ್ ಗಳನ್ನು ಬಿಡಲು ನಾವುಗಳು ತಯಾರಿದ್ದೇವೆಯೇ ಎಂದು ಕೇಳಿಕೊಳ್ಳುವ ಸಮಯ ಇದು!
ವೈಯಕ್ತಿಕವಾಗಿ ನನಗೆ ಫೆಮಿನಿಸ್ಂ ಎಂದರೆ, ಗಂಡಸು ಮಾಡಬಹುದಾದ ಎಲ್ಲ ಕೆಲಸವನ್ನು ಮುಲಾಜಿಲ್ಲದೇ ಮಾಡುವುದಲ್ಲ, ಗಂಡು ಹೆಣ್ಣಿನ ಮಧ್ಯೆ ನಿಸರ್ಗವೇ ನಿರ್ಮಿಸಿದ ವ್ಯತ್ಯಾಸಗಳನ್ನು ಪರಸ್ಪರ ಗೌರವಿಸಿಕೊಂಡು, ಒಬ್ಬರಿಗೊಬ್ಬರು ಕಾಂಪ್ಲಿಮೆಂಟರಿಯಾಗಿ ಬದುಕುವುದು! ಇದು ಯೋಚನಾ ಲಹರಿಯಿಂದ ಹಿಡಿದು ಮಾಡುವ ಪ್ರತಿಕೆಲಸದಲ್ಲೂ ತಮ್ಮ ತಮ್ಮದೇ ಛಾಪನ್ನು ಮೂಡಿಸುವ ಪ್ರತಿ ವ್ಯಕ್ತಿಗೂ ಅನ್ವಯ!
ಇನ್ನು ಹೊಡೆದು ಸರಿಮಾಡಲಾರದ ವಿಷಯ ತೆಗಡದುಕೊಂಡರೆ, ಭಾರತೀಯ ಮಕ್ಕಳು ಮುಂಚುಣಿಯಲ್ಲಿ ನಿಲ್ಲುತ್ತಾರೆ. ನಾಳೆ ಇನ್ಯಾರೋ ಅಮೆರಿಕದಲ್ಲಿ ಮಕ್ಕಳಿಗೆ ಹೊಡೆದರೆ ಜೈಲಾಗುತ್ತೆ, ನಮ್ಮಲ್ಲೂ ಅದು ಬರಬೇಕು ಅಂತ ಹೇಳಲು ನಾವು ತಯಾರಿದ್ದೇವೆಯೆ?!
ಪಾಶ್ಚಾತ್ಯರು ನಮಗಿಂತ ಮುಂಚೆ ಶತಮಾನಗಳ ಅಂತರದಲ್ಲಿ, ಒಂದೀಡಿ ಹೊಸ ಪರಂಪರೆಗೆ ಒಳಗಾದವರು! ನಮ್ಮ ಬೆಂಗಳೂರಿನಲ್ಲಿ ಐಟಿ ಬರುವ ಮುಂಚೆ ಲಿವಿಂಗ್ ಟುಗೆದರ್ ಎಂಬ ಪದಗಳನ್ನೇ ಕೇಳದ ಜನರಿದ್ದರು, ಬೈದುಕೊಂಡೋ ಆಡಿಕೊಂಡೊ ಈಗ ನಿಧಾನವಾಗಿ ಇದು ಅವರದ್ದೇ ಊರಿನ ಭಾಗವಾಗಿದೆ ಎಂಬ ಅರಿವು ಮೂಡಿದೆ! ಇದು ರಾತ್ರೋ ರಾತ್ರಿ ಆಗುವ ಬದಲಾವಣೆಯಲ್ಲ ಕಾಲಕ್ರಮೇಣ ಸುತ್ತಲೂ ನಡೆಯುವ ಘಟನಾವಳಿಗಳಿಂದ ಒಪ್ಪಿಕೊಂಡಿದ್ದು ಯಾಕೆಂದ್ರೆ ದೈಹಿಕವಾಗಿ ನಾವು ಹೇಗೆ ಕಂಡರೂ ಮಾನಸಿಕವಾಗಿ, ಅಮ್ಮ, ಅಜ್ಜಿ ಹಾಗೂ ಮನೆಯವರು ಹೇಳಿದ ಕಟ್ಟಳೆಗಳನ್ನು ಸುಲಭವಾಗಿ ಮೀರುವಂಥ ಜೀನ್ಸ ಮ್ಯುಟೇಷನ್ ಗೆ ನಮ್ಮ ಜನರೇಷನ್ ಒಳಗಾಗಿಲ್ಲ!
ಬಟ್ಟೆ ಬಳಸದೆ, ಸ್ಯಾನಿಟರಿ ಪ್ಯಾಡ್ ಬಳಸಬೇಕು ಎಂದು ಪಬ್ಲಿಕ್ ಆಗಿ ಹೇಳುವುದು ಕೂಡ ಟ್ಯಾಬು ಆಗಿದ್ದ ನಮ್ಮ ಸಮಾಜದಲ್ಲಿ, ಧೈರ್ಯವಾಗಿ ‌ಹೆಂಗಸೇ ಹೋಗಿ ಪ್ರೆಗ್ನೆನ್ಸಿ ಕಿಟ್ ತರುವವರೆಗೆ ಬದಲಾವಣೆಯಾಗಿಯೇ ಇದೆ! ಇದು ಕೂಡ ಬೆಳಗಾಗುವುದರೊಳಗಾಗಿ ಆದ ಬದಲಾವಣೆಯಲ್ಲ!
ಇನ್ನು ಪ್ರತಿ ಮನುಷ್ಯನ ಲಿಂಗಭೇದವಿಲ್ಲದೇ, ನಡೆಯುವ, ಯೋಚನಾ ‌ಲಹರಿ ಭಿನ್ನವಾದದ್ದು ಹಾಗೂ ಅದನ್ನು ಇನ್ಯಾರಿಗೋ ಹೆಳುವಂಥ ಅಥವಾ ಇನ್ಯಾರಿಂದಲೋ ಹೇಳಿಸಿಕೊಳ್ಳದಂಥ ಖಾಸಗೀ ವಿಷಯ! ಅದನ್ನ ಟಿವಿ ಪ್ಯಾನಲ್ ನಲ್ಲಿ, ಗಂಟೆಗಟ್ಟಲೇ ಚರ್ಚೆ ಮಾಡಿಯೋ ಅಥವಾ ಹ್ತಷ್ಟ್ಯಾಗ್ ಹಾಕಿ ಅಭಿಯಾನ ಮಾಡಿದಂತೆ ನಮ್ಮ ಪರ ಹಾಗೂ ವಿರೋಧದ ನಿಲುವುಗಳಿಂದ ಅಳೆಯುವುದಾಗಲೀ, ಅಥವಾ ಜಡ್ಜ್ಮೆಂಟ್ ಕೊಡವುದಕ್ಕೆ ನಾವ್ಯಾರು ನ್ಯಾಯಾಧೀಶರಲ್ಲ!
ಎಲ್ಲರಲ್ಲಿ ನ್ಯೂನ್ಯತೆಗಳಿವೆ, ಕಾರಣಗಳಿಲ್ಲದೇ ಪ್ರೀತಿಸುವ ಅಂಶಗಳೂ ಇವೆ! ಸಮಾನತೆ, ಸ್ವಾತಂತ್ರ್ಯ, ತಾರತಮ್ಯ, ಎಂಬ ಹೊಡೆದಾಟದ ಆಚೆಗೆ ನಮ್ಮ ಆತ್ಮ ತೃಪ್ತಿಪಡುವಂಥ ಅನೇಕ ಧನಾತ್ಮಕ ಅಂಶಗಳಿವೆ! ಭಾವನೆಗಳ ಅಲೆದಾಟವನ್ನು, ಮೊಮೆಂಟರಿ ಸಿಟ್ಟನ್ನೂ ಸಮತೋಲನದಿಂದ ತೂಗಿಸಿಕೊಂಡು ಹೋಗುವುದೇ ನಿಜವಾದ ಪ್ರಭುದ್ದತೆ!
ಕ್ಯುಂಕೀ 😍😇
ಜೀನಾ ಇಸೀ ಕಾ ನಾಮ್ ಹೈ 

Monday, April 27, 2020

ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದ ಸಂಭ್ರಮ!


ಜಿಟಿ ಜಿಟಿ ಮಳೆ ಬೀಳುತ್ತಲೇ ಮನವೂ ಒದ್ದೆಯಾಗಿ ,ಮಗ್ಗಲು ಬದಲಿಸಿ, ಬಾಲ್ಯಕ್ಕೆ ಮರಳಿದೆ! ಹೀಗೆ ನಿಶ್ಶಬ್ದದ ಬಾನಿನಲ್ಲಿ , ಮೋಡಗಳ ಮರೆಯಲ್ಲಿ ಅಡಗಿ ಕುಳಿತಿರುತ್ತಿದ್ದ ಸೂರ್ಯನ ದರ್ಶನವೇ ಇಲ್ಲದ ದಿನಗಳು,ವಾರಗಳು , ಅಜ್ಜನ  ಬೆಚ್ಚನೆಯ ತಬ್ಬುಗೆಯ ಘಮ , ಅಜ್ಜಿಯ ಬೆಳ್ಳುಳ್ಳಿ ಒಗ್ಗರಣೆಯ ಘಾಟು, ಅಪ್ಪನ ಪಂಚತಂತ್ರ ಕಥೆಗಳು, ಅಮ್ಮನ ಲಾಲಿಯ ಹಾಡುಗಳು, ಹಿತ್ತಲಿನ ಸಂಪಿಗೆಯ ರಾಶಿ , ಅಂಗಳದ ಮಲ್ಲಿಗೆಯ ನಗು, ಹೀಗೆ ಒಂದೇ ಎರಡೇ, ಬಾಲ್ಯದ ಅಣುಅಣುವು ವೈವಿಧ್ಯಮಯ.

ಒಂದು ರೂಪಾಯಿಯ ಐಸ್ ಕ್ಯಾಂಡಿ , ಅಜ್ಜಿಯ ಕೂದಲು ಎಂಬ ಮಿಠಾಯಿ, ಮರದ ತೊಗಟೆಯಿಂದ ಪೀಪಿ ಆಕಾರದಲ್ಲಿ  ಮಾಡಿದ ಆಟಿಕೆ, ಕುಂಟಾಬಿಲ್ಲೆ,ಮುಟ್ಟಾಟ, ಕಲರ್ ಕಲರ್ ವಾಟ್ ಕಲರ್, ಕಣ್ಣಾ ಮುಚ್ಚಾಲೆ, ಕೆರೆ ದಡ ,ಬೆಳಗಿನಾಟಗಳಾದರೆ ಸಂಜೆಗಾಗಿ ಕಾಯ್ದಿರುಸುತ್ತಿದ್ದ ವೃತ್ತಾಕಾರದಲ್ಲಿ ,ಸುತ್ತಲೂ ಕುಳಿತು  ಆಡುತ್ತಿದ್ದ ಅಂತ್ಯಾಕ್ಷರಿ, ಒಬ್ಬರ ಕಿವಿಯಿಂದ ಇನ್ನೊಬ್ಬರ ಕಿವಿಗೆ ಹೋಗುವಷ್ಟರಲ್ಲಿ ಬದಲಾಗಿಹೋಗುತ್ತಿದ್ದ "ಹೆಲೋ' ಎಂಬ ಮಜವಾದ ಆಟ, ರಾಜ ರಾಣಿ ಕಳ್ಳ ಪೊಲೀಸ್, ಜುಂಕ್ಷನ್ ಎಂಬ ಚೀಟಿಯ ಆಟಗಳು. ಯಾವಾಗಲೂ ಬ್ಯಾಕ್ಗ್ರೌಂಡ್ ನಲ್ಲಿ, ರಫಿ ಲತಾ ರ ಎವರ್ಗ್ರಿನ್ ಹಾಡುಗಳು, ನಮ್ಮ ಉತ್ತರ ಕರ್ನಾಟಕದಲ್ಲಿ ಒಂಚೂರು ಹಿಂದಿ ಹೇರಿಕೆ ಇತ್ತೇನೋ (ಕನ್ನಡ ಹಾಡುಗಳು ಕಡಿಮೆ ಪ್ರಚಲಿತದಲ್ಲಿದ್ದವು)!

ಬೆಂಗಳೂರಿನಲ್ಲಿ ಮೋಡ ಕವಿದಾಗಲೆಲ್ಲ ಮನಸ್ಸು ಧಾರವಾಡದ ಕಡೆ ಮುಖ ಮಾಡಿ ನಿಲ್ಲುತ್ತದೆ, ಗೊತ್ತಿಲ್ಲದೇ ಕಣ್ಣಾಲಿಗಳೆಲ್ಲ ಕಳೆದು ಹೋದ ಒಂದೊಂದು ಭಾವಾವನ್ನೂ ಕಲೆ ಹಾಕಿ ಕೂಡಿಡಲು ಪ್ರಯತ್ನಿಸುತ್ತದೆ! KCD ಎಂಬ ಸ್ವರ್ಗದ ಕಡೆ ಕೈ ಚಾಚಿ ಕರೆಯುತ್ತದೆ, ಕಿತ್ತೂರು ಚೆನ್ನಮ್ಮ ಪಾರ್ಕಿನ  ಮಕ್ಕಳಾಟದ ಮೈದಾನ ಖಾಲಿಯಾದ ನೋವನ್ನು ನೆನಪಿಸುತ್ತದೆ. ಕತ್ತಲಾದರೂ ಬಿಡದೇ ಸರದಿಸಾಲಿನಲ್ಲಿ ನಿಂತು ತಿನ್ನುತ್ತಿದ್ದ ಪ್ರಕಾಶ್ ಸೇವ್ ಪುರಿ ಸೆಂಟರ್, ಮಹಾರಾಷ್ಟ್ರ ಕ್ಯಾಂಟೀನ್ ನ ಶಾಬುದಾನಿ ವಡ, ದುರ್ಗದ್ ಬೈಲಿನ ಗಿರ್ಮಿಟ್ ಹಾಗೂ ಮಿರ್ಚಿ ಎಲ್ಲವನ್ನೂ ಒಂದೇ ದಿನಕ್ಕೆ ತಿಂದು ತೇಗುವ ಆವೇಗ!

ಎಲ್ಲರ ಬಾಲ್ಯವೂ  ಸುಂದರ, ಬಾಲ್ಯದ ಜೊತೆಗೇ  ಹೊಸೆದುಕೊಂಡ ನೆನಪೂ ಮಧುರ, ಎಷ್ಟೇ ವಯಸ್ಸ್ಸಾದರೂ ಹದಿನೆಂಟೇ ಎಂದು ಹೇಳಿಕೊಳ್ಳುಲು ಬಯಸುವ ಅವಿವೇಕಿ ಆಸೆಗೂ ಮೀರಿದ್ದು, ಸರಿ- ತಪ್ಪು, ನಿಜ-ಸುಳ್ಳು , ಎಂಬ ಜಡ್ಜ್ಮೆಂಟಗಳಿಲ್ಲದ, ಅಮಾಯಕ ಸ್ಥಿತಿ, ಮನೆ, ಕುಟುಂಬ, ಸ್ನೇಹಿತರು, ನೆರೆ ಹೊರೆಯವರು, ಇಷ್ಟೇ ಪ್ರಪಂಚ ಎಂಬಂತೆ ಇದ್ದು ಬಿಡುವ ಮನಸ್ಥಿತಿಯ ಅನಾವರಣವೇ ಸೋಜಿಗ. ಮುಲಾಜಿಗೆ ಬಿದ್ದು ಯಾರನ್ನೋ ಖುಷಿ ಪಡಿಸುವ ಇರಾದೆಯೇ ಇರದ ತಟಸ್ಥ ಭಾವನೆ.


ಕರ್ಮಭೂಮಿಯಲ್ಲಿ, ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದು ಸಂಭ್ರಮಿಸುವುದಷ್ಟೇ  ಸಧ್ಯಕ್ಕೆ ಪಡೆದ ಭಾಗ್ಯ,
ಆದರೆ ಒಂದಂತೂ ಸತ್ಯ , ಮಳೆಯಾದಾಗಲೆಲ್ಲ, ಮಾಯಾವೀ ನಗರ, ನಮ್ಮದಲ್ಲದ ವರ್ಚುಯಲ್  ಅಸ್ತಿತ್ವವನ್ನು ಅಣುಕಿಸಿ ಹೋದಂತಾಗುತ್ತದೆ!




Tuesday, August 27, 2019

ಎಡ- ಬಲಗಳ ಮಧ್ಯೆ!



 ತುಂಬಾ ಹಿಂದೆ ಹೋಗಿ ನೋಡೋದು ಬೇಡ ನಮ್ಮ ನಮ್ಮ ಮನೆಗಳಲ್ಲಿ ನೋಡಿಕೊಳ್ಳೋಣ ! ಎಷ್ಟೇ ಮುಂದುವರೆದ ಕುಟುಂಬ ಅಂತ ಹೇಳಿಕೊಂಡರೂ , ಎಷ್ಟೇ ವಿದ್ಯಾವಂತರಾಗಿದ್ದರೂ ನಮ್ಮ ಸಮಾಜದಲ್ಲಿ ಕೆಲವು ಕ್ಷೇತ್ರಗಳನ್ನು ಪ್ರೊಫೆಶನ್ ಆಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಸ್ವಾತಂತ್ರ್ಯ ತೀರಾ ಕಡಿಮೆ! ಇದ್ಯಾಕೆ ಹೀಗೆ ಅಂತ ಯೋಚಿಸಿದರೆ ನನಗೆ ಅನ್ನಿಸಿದ್ದಿಷ್ಟು! ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ ಹಾಗೂ ಚರ್ಚೆಗೆ ಮುಕ್ತ ಅವಕಾಶ ಇದೆ !

 ಇವತ್ತಿಗೂ ನಮ್ಮ ಪಾಲಕರು ಚಲನಚಿತ್ರ , ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮ ಮಕ್ಕಳು ತೊಡಗಿಕೊಳ್ಳುವುದನ್ನು ಇಷ್ಟ ಪಡುವುದಿಲ್ಲ ಆದರೆ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳಲು ತೊಂದರೆ ಇಲ್ಲ ! ಇನ್ಸ್ಟಂಟ್ ಹೆಸರು, ಇನ್ಸ್ಟಂಟ್ ಜನಪ್ರಿಯತೆ ಅಂದ್ರೆ ಯಾರಿಗೆ ತಾನೇ ಬೇಡ? ಸರಿ ಇದರಲ್ಲಿ ಕಾಣಿಸಿಕೊಂಡವರೆಲ್ಲರಿಗೂ ಅದೃಷ್ಟ ಇರುವುದಿಲ್ಲ ನೂರರಲ್ಲಿ ಇಬ್ಬರೋ ಮೂವರೋ ಮುಂದೆ ಇದೆ ಕ್ಷೇತ್ರವನ್ನು ಆರಿಸಿಕೊಳ್ಳಬಹುದು . ಹಾಗೆ ಇದು ನಿರಂತರ ಮೇಲೆ ಕೆಳಗಾಗುವ ಚಕ್ರ! ಇಲ್ಲಿ ತಾಳ್ಮೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ಇಂತಹ ಕ್ಷೇತ್ರಗಳನ್ನು ಆರಿಸಿಕೊಳ್ಳುವ ಪ್ರತಿ ವ್ಯಕ್ತಿಯು ಪಾಲಕರ ನಕಾರಗಳು, ಸಮಾಜದ ವಿಚಿತ್ರ ಕಳಕಳಿಯ ಮಧ್ಯೆ  ತನಗೆ ಅರಿವಿಲ್ಲದಂತೆ ಒಂದು ರೀತಿಯ ರೆಬೆಲ್ ಕ್ಯಾರೆಕ್ಟರ್ ಅನ್ನು ಅಳವಡಿಸಿಕೊಂಡಿರುತ್ತಾನೆ !

ಅದೇನೋ ಬರಿತಾಳಂತೆ , ಕೆಲಸಕ್ಕೆ ಬರದೇ ಇರೋದು ನಾಲ್ಕು ಜನ ಶಬಾಷ್ ಅಂದ್ರೆ ಹೊಟ್ಟೆ ತುಂಬಲ್ಲ , ಅದೇನೋ ಸಿನಿಮಾ ಅಂತೇ , ಯಾರು ಬಂಡವಾಳ ಹಾಕೋವ್ರು , ವಿಜಯ್ ಪ್ರಕಾಶ್ ಗೆ ೪೫ ವರ್ಷ ಆದ್ಮೇಲೆ ಸಕ್ಸಸ್ ಸಿಕ್ಕಿದ್ದು ಗೊತ್ತ ? ರಘು ದೀಕ್ಷಿತ್ ಇನ್ನೇನ್ ಮತ್ತೆ ಹಾಡ್ಕೊಂಡಿಲ್ಲ ಜೀವನ ಆಗಲ್ಲ ಕಣ್ರೀ ಅನ್ನೋ ವಿಲಕ್ಷಣ ಜನಗಳ ಮಧ್ಯೆ ಹೇಗೋ ಕಷ್ಟ ಪಟ್ಟು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ತಮ್ಮ ವಲಯಗಳಲ್ಲಿ ಹೊಗಳುವಂತ ಸಾಧನೆ ಮಾಡಿದ ಪ್ರತಿ ವ್ಯಕ್ತಿಗೂ ತನ್ನದೇ ಆದ ವೈಯಕ್ತಿಕ ಅಭಿವ್ಯಕ್ತ್ಯ ಇದ್ದೇ ಇರುತ್ತದೆ ಮತ್ತು ಇರಲೇಬೇಕು ! ತನ್ನ ಹೋರಾಟದಾಯಕ ಮನೋಭಾವವನ್ನು ಅವನೂ ಪ್ರತಿ ಹಂತದಲ್ಲೂ ಹಾಗೂ ತನ್ನ ಸುತ್ತಲು ನಡೆಯುವ ಪ್ರತಿವಿದ್ಯಮಾನಗಳಲ್ಲೂ,ತನಗೆಲ್ಲಿ ಇದನ್ನು ತಪ್ಪು ಎಂದು ಹೇಳಲು ಅವಕಾಶ ಸಿಗುತ್ತದೆ ಎಂದು ಹುಡುಕುತ್ತಲಿರುತ್ತಾನೆ !

ಇವತ್ತಿಗೂ ನಮ್ಮ ದೇಶದ ಇತಿಹಾಸ ತೆಗೆದು ನೋಡಿದರೆ ಅತ್ಯುತ್ತಮ ಅನ್ನುವ ಸಾಹಿತ್ಯ ಸಂಗೀತ ನಾಟಕ ಚಲನಚಿತ್ರ ಕವನಗಳನ್ನು ಕೊಟ್ಟ ಬಹುತೇಕ ಗಣ್ಯರು ಎಡಪಂಥೀಯ ವಿಚಾರಧಾರಿಗಳೇ! ನಮ್ಮ ಫೇಸ್ ಬುಕ್ ಸ್ನೇಹಿತರ ಪಟ್ಟಿಯಲ್ಲೂ ಸಹ ಅತ್ಯುತ್ತಮ ಕವನ ಬರೆಯುವರು,ಸುಂದರ ಛಾಯಾಚಿತ್ರ ತೆಗೆಯುವರು,ಮನ ಮುಟ್ಟುವಂತೆ ಬರೆಯುವ ಅನೇಕ ಲೇಖಕರೂ ಹೆಚ್ಚಿನವರು ಎಡ ಪಂಥದವರೇ ! ಇವರೆಲ್ಲ ತುಂಬಾ ಕೆಳಮಟ್ಟದ ಬಡತನ, ಹತಾಶೆ, ಅನ್ಯಾಯ ಹಾಗೂ ಅವಮಾನಗಳನ್ನು ಸಹಿಸಿಕೊಂಡು ಬೆಳೆದವರು ! ಹಸಿವು ಅನ್ನೋ ಪದ ಇಟ್ಟುಕೊಂಡೆ ಪುಟಗಟ್ಟಲೆ ಬರೆಯುವಂಥವರು . ಫೇರ್ ಇನಫ್ ! ಆದರೆ ಇವರ ಪ್ರತಿ ವಿಚಾರವನ್ನು ಒಪ್ಪಲೇ ಬೇಕಾದ ಅನಿವಾರ್ಯತೆ ಇಲ್ಲದಿರುವಾಗ ಇವರ ಬ್ರಿಲಿಯನ್ಸ್ನ್ ಒಪ್ಪಲೇ ಬೇಕಾದ ಸಮಯಕ್ಕೆ ಒಪ್ಪಿ ಒಂದು ಮೆಚ್ಚುಗೆಯನ್ನು ಕೊಡುವುದರಲ್ಲಿ ತಪ್ಪೇನಿದೆ ?? ಅವನಾ ಭಯಂಕರ ಮೋದಿ ವಿರೋಧಿ , ಅವಳ ಮಿಟೂ ಹುಡಗಿ ಅಂತ ಟ್ಯಾಗ್ ಮಾಡಿ ಅವರ ಕಲೆಗೆ ಅವರ ಪ್ರತಿಭೆಗೆ ಅನ್ಯಾಯ ಮಾಡಿದಂತಾಗುತ್ತದಲ್ಲವೇ ??!

ನಾನೂ ಕೂಡ ಮಿಟೂ ಅಲೆಯನ್ನು ಬಹಿರಂಗವಾಗಿ ವಿರೋಧಿಸಿದವಳೇ! ಆದರೆ ಈ ಅಲೆಯಲ್ಲಿ ಹಲವು ನಿಜವಾಗಿಯೂ ಬಯಲಿಗೆ ಬರಬೇಕಾದ ವಿಷಯಗಳು ಕೊಚ್ಚಿಕೊಂಡು ಹೋಗಿದ್ದವು! ಅದೇನೇ ಇರಲಿ ಮನುಷ್ಯನ ಹಲವು ಇನ್ಸ್ಟಿಂಕ್ಟ್ಗಳಲ್ಲಿ ಕಾಮಾವು ಒಂದು! ಯಾವ  ಸಮಯಕ್ಕೆ ಒಂದು ಗಂಡು ಹಾಗು ಹೆಣ್ಣಿನ ನಡುವೆ ಆ ರೀತಿಯ ಇನ್ಸ್ಟಿಂಕ್ಟ್ ಜಾಗೃತಗೊಂಡು ಗೊಂದಲವುಂಟುಮಾಡುತ್ತದೆ ಎಂದು ಹೇಳುವುದು ಅಷ್ಟು ಸುಲಭದ ವಿಷಯವಲ್ಲ ! ಹಾಗೂ ಆ ಭಾವನೆಯನ್ನು ಸಾರ ಸಗಟಾಗಿ ತಪ್ಪು ಅಪರಾಧ ಅನ್ನೋ ರೀತಿಯಲ್ಲಿ ಬಿಂಬಿಸುವುದೂ ಸರಿಯಲ್ಲ ! ಯಾರಿಗೋ ಹಾಗೆ ಅನ್ನಿಸಿದ್ದಕ್ಕೆ ಹೆಣ್ಣು ತನ್ನ ನಡವಳಿಕೆಯನ್ನು ಅನುಮಾನಿಸುವ ಅವಶ್ಯಕತೆಯೂ ಇಲ್ಲ !ಬಾಯಾರಿಕೆ ಆದಾಗ ನೀರು ಕುಡಿಯಬೇಕು ಅನ್ನುವುದು ನಿಯಮ ! ಹಾಗಂತ ಬಾಯಾರಿಕೆ ಯಾಕಾಗುತ್ತದೆ ಯಾರ ಮನೆಯಲ್ಲಿ ಆಗುತ್ತದೆ ಅವರು ಒಳ್ಳೆಯವರ ಕೆಟ್ಟವರ ಅಂತ ಲೆಕ್ಕ  ಹಾಕಿ ಆಗುವುದಲ್ಲ ! ಮನುಷ್ಯ ಸಹಜ ಬಯಕೆಗಳಲ್ಲಿ ಕಾಮವೂ ಒಂದು ದಾಹವೇ ! ಯಾರಿಗೆ ಯಾರ ಮೇಲೆ ಯಾವ ಸಂಧರ್ಭದಲ್ಲಿ ಯಾವ ರೀತಿಯ ಭಾವನೆ ಮೂಡುತ್ತದೆ ಅನ್ನೋದು ತೀರ ಕಾಂಪ್ಲೆಕ್ಸ್ ವಿಷಯ ! ಒಂದು ಗಂಡಸು ಹೆಂಗಸನ್ನು ಆ ವಿಚಾರವಾಗಿ ಕೇಳಿಯೂ ಇರಬಹುದು ಅದನ್ನು ಆ ಹೆಂಗಸು ನಿರಾಕರಿಸಿಯೂ ಇರಬಹುದು ಇದರಾಚೆ ನಮಗೆ ಸಿಕ್ಕ ಹಲವು ಕೆಲಸಕ್ಕೆ ಬಾರದ ವೈಯಕ್ತಿಕ  ವಿಚಾರಗಳ ಮೇಲೆ ನಮ್ಮ ನಿಲುವುಗಳು ಬದಲಾಗುತ್ತ ಹೋಗುತ್ತವೆ. ಅದೇನೇ ಇರಲಿ ಪ್ರತಿ ಯಶಸ್ವಿ ಪುರುಷರ ಸೆಕ್ಸ್ ಸ್ಕ್ಯಾಂಡಲ್ಸ್ ಬಹಿರಂಗವಾದ ಸಮಯ ನೋಡಿ ಅವರೆಲ್ಲ ಲೈಮ್ ಲೈಟ್ ಗೆ ಬಂದ್ಮೇಲೆಯೋ ಅಥವಾ ಅವರು ಜನಪ್ರಿಯತೆ ಗಳಿಸುವ ಸಮಯದ್ಲಲೋ ಹೊರಗೆ ಬರುತ್ತವೆ . ಅದು ಕೂಡ ಮನುಷ್ಯ ಸಹಜ ಸಂಕಟ ! ಅವನಿಂದ ತೊಂದರೆಗೊಳಗಾಗಿ ವರುಷಗಳೂ ಕಳೆದಿದ್ದರೂ ಅವನ ವಿರುದ್ಧ ಒಂದೇ ಒಂದು ವಾಕ್ಯವನ್ನು ಹೇಳದವರೂ , ರಾತ್ರೋ ರಾತ್ರಿ ಅವನು ದೊಡ್ಡ ಹುದ್ದೆಗೆ ಏರುತ್ತಾನೆ ಅಂತ ಗೊತ್ತಾದ ಕೂಡಲೇ ಪುಟಗಟ್ಟಲೆ ಬರೆದು ತನ್ನ ಜೊತೆಯಲ್ಲಿದ್ದ , ತನಗೆ ಇಷ್ಟೆಲ್ಲಾ ಮೋಸ ಮಾಡಿದ ವ್ಯಕ್ತಿ ಅದ್ಹೇಗೆ ನನಗಿಂತ ಹೆಚ್ಚಿನ ಸ್ಥಾನ ಮಾನ ಹಾಗೂ ಗೌರವಕ್ಕೆ ಪಾತ್ರನಾಗುತ್ತಾನೆ ಅನ್ನೋ ಸಹಜ ಅಸೂಯೆ ಈ ಕೆಲಸವನ್ನು ಮಾಡಿಸಿಬಿಟ್ಟಿರುತ್ತದೆ. ಇದು ಕೇವಲ ಲಾಜಿಕ್ ಪ್ರಶ್ನೆಯಲ್ಲ ಮಾನವನ ಸೈಕೊಲಾಜಿ ! ಅದು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ತುಂಬ ಭಿನ್ನವಾಗಿರುವ ವಿಷಯ. ಇಂತಹ ಸೂಕ್ಷ್ಮ ಹಾಗೂ ಕ್ಲಿಷ್ಟ ವಿಚಾರಗಳನ್ನು ಒಂದು ಅಲೆಯಾಗಲಿ, ಒಂದು ವೇದಿಕೆಯಾಗಲಿ ಅಥವಾ ಒಂದು ಪಂಗಡವಾಗಲಿ ಸರಿ ತಪ್ಪುಗಳನ್ನೂ ನಿರ್ಧರಿಸಲು ಸಾಧ್ಯವಿಲ್ಲ ! ಹಾಗಂತ ಕೇವಲ ಅವರ ನಿಲುವುಗಳಿಂದಾಗಿಯೋ ಅಥವಾ ಅವರುಗಳ ಸೈದ್ಧಾಂತಿಕ ವೈಚಾರಿಕತೆಯ ಭಿನ್ನಾಭಿಪ್ರಾಯಗಳಿಂದಲೋ ವಿನಾಕಾರಣ ಅವರನ್ನ ದ್ವೇಷಿಸುವುದಾಗಲೀ , ಹೀಯಾಳಿಸುವುದಾಗಲೀ ಎಷ್ಟು ಸರಿ??! ಅವರವರ ನಿಲುವುಗಳು ಅವರವ ವೈಚಾರಿಕತೆ ಅವರವರ ಭಾವನೆಗಳು ಅವರಿಗೆ ಬಿಟ್ಟಿದ್ದು ಆದರೆ ಅವರ ಕಲೆ ಪ್ರತಿಭೆ ಹಾಗೂ ಒಳ್ಳೆಯವು ಅನಿಸುವ ಪ್ರತಿ ನಡತೆಗಳು ನಮಗೆ ಆಶಾ ಕಿರಣಗಳಲ್ಲವೇ ??

ಕನ್ನಡ ಚಿತ್ರರಂಗಕ್ಕೆ ೫ ರಾಷ್ಟೀಯ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ! ಮಂಸೋರೆ ಆಗಲೀ , ಶ್ರುತಿ ಹರಿಹರನ್ ಆಗಲಿ ನಮ್ಮ ವೈಚಾರಿಕ ಭಿನ್ನತೆಗಳ ಮಧ್ಯೆಯೂ ಸಾಧಕರೇ ! ಅವರಿಗೆ ಸಿಗಬೇಕಾದ ಎಲ್ಲ ಯಶಸ್ಸು ಅವರಿಗೆ ಇನ್ನು ಹೆಚ್ಚೇ ಸಿಗುವಂತಾಗಲಿ ಅನ್ನೋ ಶುಭ ಹಾರೈಕೆಗಳೊಂದಿಗೆ ನಾತಿಚರಾಮಿ ನನ್ನ favorite ಚಿತ್ರ !ಚಿತ್ರ ತಂಡದ ಎಲ್ಲರಿಗೂ ಹಾರ್ದಿಕ ಶುಭಾಶಯಗಳು !


Friday, July 20, 2018

ಯಾವುದು ಭಿನ್ನವಾಗಿರುತ್ತದೋ ಅದಕ್ಕೆ ತಾನೇ ಪ್ರಾಮುಖ್ಯತೆ ?!

                 





 " ಆಯ್ತಲ್ಲ ಮಗುವಿಗೆ ಎರೆಡು ವರ್ಷ ಯಾವ ಶಾಲೆಗೇ ಸೇರಿಸಿದ್ರಿ? ನಮ್ಮ ಮಗು ಅಂತೂ ಖುಷಿ ಇಂದ ಶಾಲೆಗೆ ಹೋಗಿ ಬರುತ್ತೆ, ರೈಮ್ಸ್, ವರ್ಡ್ಸ್ ಎಲ್ಲ ಕಲಿಸ್ತಾ ಇದಾರೆ ಒಳ್ಳೆ ಶಾಲೆ... ನೀವ್ಯಾವಾಗ ಸೇರ್ಸೋದು?" ಇದು ದಿನಕ್ಕೆ ಒಂದು ಬಾರಿಯಾದರೂ ನಾನು ಕೇಳಿಸಿಕೊಳ್ಳುವ ಸಾಮಾನ್ಯ ಪ್ರಶ್ನೆ ! ಹೀಗೆ ಎರೆಡು ಮೂರು ವರ್ಷದ ಹಿಂದೆ ಮದುವೆಯಾದ ನವ ದಂಪತಿಗಳೆಲ್ಲ ಸ್ವಂತ ಸೂರಿನ ಹುಡುಕಾಟದ ಹೋರಾಟ ಮಾಡಿ ಬೆಂಗಳೂರಿನ ದುಬಾರಿ ಬದುಕಿಗೆ ಅಪಾರ್ಟ್ಮೆಂಟ್ಗಳೇ ಯೋಗ್ಯ ಎಂಬ ನಿರ್ಧಾರ ಕೈಗೊಂಡು, ಮನೆ ಪ್ರವೇಶ ಮಾಡಿ ಬರೋಬ್ಬರಿ  ಎರಡು ಮೂರು ವರ್ಷದ ಒಳಗಾಗಿ ತಮ್ಮ ಪೀಳಿಗೆಯನ್ನು ಮುಂದು ವರಿಸಲು ಮನೆಗೊಬ್ಬ ಪುಟ್ಟ ನಾಯಕನನ್ನೋ/ನಾಯಕಿಯನ್ನೂ ಬರಮಾಡಿಕೊಂಡರು, ಆ ಪುಟ್ಟ ಹೆಜ್ಜೆ ಇತ್ತು ಬಂದ ಶಿಶು ಈಗ ಎರೆಡು ವರ್ಷ ತುಂಬಿದ ಅದಮ್ಯ ಚೈತನ್ಯದ ಚಿಲುಮೆ ! ಆ ಚೈತನ್ಯಕ್ಕೆ ಇನ್ನು ಹೆಚ್ಚಿನ ಸ್ಪೂರ್ತಿ ತುಂಬಿ ಅದನ್ನು ಶಾಲೆಗೆ ಕಳಿಸಿ ಸಂಭ್ರಮಿಸುತ್ತಿರುವ ಪಾಲಕರು.

                   ಪಾಲಕರೇಕೆ ತಮ್ಮ  ಮಕ್ಕಳನ್ನು ಬೇರೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡುತ್ತಾರೆ ಅನ್ನುವುದು ಮಗು ಆಗುವ ವರೆಗೂ ಗೊತ್ತಾಗುವುದಿಲ್ಲ ! ಒಮ್ಮೆ ಮಗುವನ್ನು ಎತ್ತುಕೊಂಡು ಸುಮ್ಮನೆ ಹೀಗೆ ವಾಯು ವಿಹಾರಕ್ಕೆಂದು ಹೋಗಿ ನೋಡಿ... ಎಲ್ಲ ಹಲ್ಲು ಬಂತಾ ? ಮಾತು? ನಡಿತಾಳ ? ಕೂದಲು  ಸ್ವಲ್ಪ ಕಮ್ಮಿ ಅಲ್ವ? ಬಣ್ಣ ನಿಂದಲ್ಲ , ಮೂಗು ಸ್ವಲ್ಪ ಮೊಂಡು ಅನ್ಸುತ್ತೆ ಎಣ್ಣೆ ಹಾಕಿ ಸರಿ ಉಜ್ಜಬೇಕಿತ್ತು! ಒಂದು ಹೆಣ್ಣಾಯ್ತಲ್ಲ , ಹೂಂ ಗಂಡು ಮಗುವಿನ ತಯಾರಿ ಮಾಡಿ ! ಒಂದೇ ಎರಡೇ ನನ್ನದೇ ಮಗುವಿನ ಬಗ್ಗೆ ನಾನೂ ಯೋಚಿಸದಷ್ಟು ನಮ್ಮ ನೆರೆ ಹೊರೆಯವರು ಯೋಚಿಸುತ್ತಿರುತ್ತಾರೆ ! ಎಂಥ ಕಾಳಜಿ ಪ್ರೀತಿ !
ಇದೆಲ್ಲ ಏನು ಎಂದು ಅರ್ಥ ಮಾಡಿಕೊಳ್ಳುವಷ್ಟಿಗೆ ಮಗು ಶಾಲೆ ಎಂಬ ಬೆಂಗಳೂರಿನ ಬಿಸಿನೆಸ್ ಕೇಂದ್ರಕ್ಕೆ ನೊಂದಾಯಿಸಿಕೊಂಡಿರುತ್ತದೆ.

                "ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ ನಾನೇದಾರೂ ಹೀಗೆ ಬಿಟ್ಟು ಬಿಟ್ಟರೆ ನನ್ನ ಮಗು ಉಳಿದೆಲ್ಲ ಮಕ್ಕಳಿಗಿಂತ ಹಿಂದೆ ಉಳಿದು ಹೋಗುತ್ತದೆ"! ಎಂಬಲ್ಲಿಗೆ ಪಾಲಕರ ಮೊದಲ ಭಯ ಮೊಳಕೆಯೊಡೆದಿರುತ್ತದೆ, ಅಲ್ಲಿನ್ಯಾರೋ ಅಯ್ಯೋ 'ಪ್ಲೇ ಹೊಂ'ಗೆ ಹೋಗದ ಮಕ್ಕಳನ್ನು ಒಳ್ಳೊಳ್ಳೆ ಶಾಲೆಗಳು L.K.G ಗೂ ಸೇರಿಸಲ್ವಂತೆ  ಅಂತ ಯಾರೋ ಉಧ್ಘರಿಸಿಬಿಟ್ಟರೆ ಮುಗಿತು ಎಲ್ಲರೂ ಜಿದ್ದಿಗೆ ಬಿದ್ದಂತೆ ಇನ್ನೂ ಪರಿಪೂರ್ಣವಾಗಿ ಮಾತೆ ಆಡದ ಮಗು ಇನ್ಯಾರದ್ದೋ ಭಯ ಹಾಗೂ ಪೈಪೋಟಿ ಎಂಬ ಕದ ತಟ್ಟಿ , ತನ್ನದಲ್ಲದ ಬಾಲ್ಯದ ಮನೆ ಪ್ರವೇಶ ಮಾಡಿರುತ್ತದೆ. ಅಂತೂ ಇಂತೂ ಎಲ್ಲ ಕೇಜಿಗಳನ್ನು ದಾಟಿ ಒಂದನೇ ಕ್ಲಾಸ್ ಸೇರಿಬಿಟ್ಟಮೇಲಂತೂ ಅಪ್ಪ ಅಮ್ಮ ಇಬ್ಬರೂ ಸೇರಿ ಪುನಹ ಒಂದನೇ ತರಗತಿಯಿಂದ ತಮ್ಮ ಎರಡನೇ ಆವೃತ್ತಿಯ ಅಭ್ಯಾಸ ಶುರು ಮಾಡುತ್ತಾರೆ !

                 ಇಂಥ ಅಭೂತಪೂರ್ವ ತಯಾರಿ ಹಾಗೂ ಓದಿದರೆ ಮಾತ್ರ ಜೀವನ ಅನ್ನುವ ಅಲಿಖಿತ ನಿಯಮ ನಾವು ಪಾಲಿಸಿದಷ್ಟು ಜಗತ್ತಿನ ಇನ್ಯಾವ ದೇಶದವರೂ ಪಾಲಿಸಲಿಕ್ಕಿಲ್ಲ ! ಸುಮ್ಮನೆ ಯೋಚನೆ ಮಾಡಿ ನೋಡಿ ಪ್ರತಿವರ್ಷ ಲಕ್ಷ ಲಕ್ಷ ಇಂಜಿನಿಯರ್ ಹಾಗೂ ಡಾಕ್ಟರ್ ಗಳು ಪದವೀಧರರಾಗುತ್ತಿದ್ದಾರೆ, ಅದೆಷ್ಟೋ ಲಕ್ಷಗಳಲ್ಲಿ ಕೆಲವು ಸಾವಿರಗಳಷ್ಟೇ ಕೆಲ್ಸಕ್ಕೆ ಯೋಗ್ಯರೆಂದು ಪರಿಗಣಿಸಲ್ಪಡುತ್ತಾರೆ, ಇನ್ನುಳಿದ ಅರ್ಧದಷ್ಟು ಜನ ತಾವು ಪಡೆದ ಪದವಿಗೂ ಮಾಡುವ ಕೆಲಸಕ್ಕೂ ಸಂಭಂದ ಇರದ ಇನ್ಯಾವುದೊ ಕೆಲಸ ಮಾಡುತ್ತಿರುತ್ತಾರೆ ! ಯಾಕೆ ಹೀಗೆ? ಬದುಕಲು ಹಣ ಬೇಕು ನಿಜ ಬರಿ ಹಣ ಗಳಿಕೆಯೇ ಜೀವನದ ಉದ್ದೇಶವೇ ? ಹೆಸರು ಮಾಡಿದವ್ರೆಲ್ಲ ಹಣವಂತರಾಗಿರುವುದಿಲ್ಲ, ಹಣವಿರುವರೆಲ್ಲ ಹೆಸರು ಮಾಡಿರುವುದಿಲ್ಲ ! ಒಟ್ಟಿನಲ್ಲಿ ಹೆಸರು ಹಣ ಮಾಡಲು ತನಗಿಷ್ಟವಿಲ್ಲದನ್ನು ಮಾಡಲೇ ಬೇಕಾದ ಅನಿವಾರ್ಯತೆ !

                 ಅತ್ಯುತ್ತಮ ಇಂಜಿನಿಯರ್ ,ಡಾಕ್ಟರ್ , ವಿಜ್ನ್ಯಾನಿ , ಕ್ರಿಕೆಟರ್ , ಗಾಯಕ , ಲೇಖಕ , ಕಲಾವಿದ , ಹೀಗೆ ಪ್ರತಿ ಕ್ಷೇತ್ರದಲ್ಲೂ ನಮ್ಮ ಅತ್ತ್ಯುತ್ತಮ ಕೊಡುಗೆ ಕೊಟ್ಟ ಶ್ರೇಯಸ್ಸು ಭಾರತಕ್ಕಿದೆ ! ಆದರೆ ಕಳೆದು ಇಪ್ಪತ್ತು ವರ್ಷದಲ್ಲಿ ಎಲ್ಲ ಪಾಲಕರು ಇಂಜಿನಿಯರ್ ಹಾಗೂ ಡಾಕ್ಟರ್ ಅನ್ನೋ ಮಷೀನ್ ಗಳನ್ನೇ ತಯಾರಿಸಲು ಹೊರಟು ವಿಫಲರಾದರು ! ಪಕ್ಕದ ಮನೆಯ ವಸ್ತುವನ್ನು ನೋಡಿ ಆಕರ್ಷಿತಗೊಂಡು ಅಂಥದ್ದೇ ನಮ್ಮನೆಯಲ್ಲೂ ಬರಲಿ ಎಂದು ಬಯಸುವದು ಮಾನವ ಸಹಜ ಗುಣ , ವಸ್ತುವಿನಿಂದ ಶುರುವಾದ ಬಯಕೆ ಮಕ್ಕಳ ಭವಿಷ್ಯದ ಕನಸಿಗೂ ತಾಗಿದರೆ ಇಂಥ ವಿಚಿತ್ರ ಅನಾಹುತಗಳಾಗುತ್ತವೆ . ೮೦ ಪ್ರತಿಶತ ಜನ ಇಂದು ತಾವು ಮಾಡುವ ಕೆಲಸದಲ್ಲಿ ಸಂತೋಷವಾಗಲಿ ಸಂತೃಪ್ತಿಯಾಗಲಿ ಕಾಣುವುದಿಲ್ಲ . ದುಡ್ಡು ಬರುತ್ತದೆ ದುಡೀಬೇಕು ದುಡೀತೀವಿ , ಇಷ್ಟಾನ ಕಷ್ಟ ನೊ ಯಾರಿಗೆ ಬೇಕು ?! 

              ನಮ್ಮ ಹಾಗೆ ಜೀವನ ನಡೆಸುತ್ತಿರುವ ಚೈನಾ, ಅಮೇರಿಕಾ, ಯೂರೋಪ್ ದೇಶಗಳು  ಹೇಗೆ ಎಲ್ಲ ಕ್ಷೇತ್ರದಲ್ಲೂ ನಮಗಿಂತ ಭಿನ್ನ ಹಾಗೂ ಶ್ರೇಷ್ಠ ?!  ಆ ದೇಶದಲ್ಲಿರುವ ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಾಣದ ಯೋಜನೆ ಹಾಗೂ ಆಲೋಚನೆಗಳು ನಿಜಕ್ಕೊ ಶ್ಲಾಘನೀಯ ! ಇವತ್ತು ಕ್ರಿಕೆಟ್ ಒಂದನ್ನು ಬಿಟ್ಟು ಬೇರೆಲ್ಲ ಕ್ಷೇತ್ರದಲ್ಲೂ  ನಮ್ಮನ್ನು ನಾವು ತೊಡಗಿಸಿಕೊಳ್ಳುವಲ್ಲಿ ನಮ್ಮನ್ನು ನಾವು ಗುರುತಿಸುಕೊಳ್ಳುವಲ್ಲಿ ಸಫಲರಾಗುವ ಅನೇಕ ಅವಕಾಶಗಳಿವೆ ! ಆದರೆ ಅದರಷ್ಟು ದುಡ್ಡಿಲ್ಲ ! ಫುಟ್ಬಾಲ್ ಮ್ಯಾಚುಗಳನ್ನು ನೋಡಿ , ಭೂಪಟದಲ್ಲಿ ಇವೆಯೋ ಇಲ್ಲವೋ ಎನ್ನುವಂಥ ಪುಟ್ಟ ಪುಟ್ಟ ಹೆಸರೇ ಕೇಳದ ದೇಶಗಳು ಈಗ ವರ್ಲ್ಡ್ ಕಪ್ ಆಡಲು ಅವಕಾಶ ಗಿಟ್ಟಿಸಿಕೊಂಡಿದ್ದಲ್ಲದೇ ಘಟಾನು ಘಟಿಗಳಾದ ದೈತ್ಯ ತಂಡಗಳನ್ನು ಸೋಲಿಸಿದ್ದಾವೆ ! ನಮ್ಮಲ್ಲಿ ಇನ್ನು ಅನೇಕ ಜನರಿಗೆ ಫುಟ್ಬಾಲ್ ಆಟದಲ್ಲಿ ಎಷ್ಟು ಜನ ಆಡುತ್ತಾರೆ ಅನ್ನುವುದೇ ಗೊತ್ತಿಲ್ಲ . ನಮ್ಮಲ್ಲಿ ಮಗು ಫುಟ್ಬಾಲ್  ಆಡುತ್ತೆನೆ  ಎಂದು ಹೇಳಿದರೆ ನಮ್ಮ ಪಾಲಕರು ಮಗುವನ್ನು ಕೂರಿಸಿಕೊಂಡು ಬರೋಬ್ಬರಿ ಒಂದು ಗಂಟೆಯ ಉಪದೇಶ ಕೊಟ್ಟು ಮರಳಿ ಪುಸ್ತಕ ಹಿಡಿಯುವಂತೆ ನೋಡಿಕೊಳ್ಳುತ್ತಾರೆ ! 


                    ನಾನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ ಅನೇಕ ಮಕ್ಕಳ ಪಾಲಕರ ಮನಸ್ಥಿತಿ ಅರ್ಥ ಮಾಡಿಕೊಳ್ಳುವಂತಾಗಿದೆ ! ನಮಗೆ ಇಂಜಿನಿಯರ್ ಆಗಲೂ ಮನಸ್ಸೇ ಇರ್ಲಿಲ್ಲ ಮೇಡಂ ಒತ್ತಾಯ ಮಾಡಿ ಇಲ್ಲಿ ಸೇರಿಸಿದ್ದಾರೆ ! ನನಗೆ ಸಿಂಗರ್ ಆಗೋಕೆ ಇಷ್ಟ ಡ್ಯಾನ್ಸರ್ ಆಗೋಕೆ ಇಷ್ಟ , ಪತ್ರಕರ್ತ ಆಗೋಕೆ ಇಷ್ಟ ಅಂತ ಅನೇಕ ಮಕ್ಕಳು ಹೇಳುವಾಗ ಪಾಲಕರನ್ನು ಕರೆಸಿ ಮಾತಡಿದಾಗ , ಏನ್ ಮೇಡಂ ಮಕ್ಕಳ ಮಾತು ಕೇಳಿಕೊಂಡು ನೀವು ಹೀಗೆ ಮಾತಾಡ್ತೀರಲ್ಲ, ಇಂಜಿನಿಯರಿಂಗ್ ಓದದೇ ಇರುವವರನ್ನು ಯಾರೂ ಮೂಸಿಯೂ ನೋಡಲ್ಲ, ಮದುವೆಯಂತು ದೂರದ ಕನಸು, ನಮ್ಮ ಫ್ಯಾಮಿಲಿಯಲ್ಲಿ ಎಲ್ಲ ಡಾಕ್ಟರ್ಸ್ ಇಂಜಿನಿಯರ್ ಗಾಲೆ ಇದಾರೆ ಇವನನ್ನ ಏನ ಅಂತ ಹೇಳಲಿ? ಎಲ್ಲರೂ ಸಾಫ್ಟ್ವೇರ್ ಇಂಜಿನಿಯರ್ ಆಗ್ತೀನಿ ಅಂದ್ರೆ ಇವನು ಪೈಂಟರ್ ಆಗ್ತಾನಂತೆ , ಸರಿ ಆಗ್ಲಿ ಎಷ್ಟು ದುಡಿಬಹುದು ಮೇಡಂ ಅಲ್ಲಿ? ಕಂಪನಿ ಕೊಡುವಷ್ಟು ದುಡ್ಡು ಸಿಗುತ್ತಾ? ಹೋಗ್ಲಿ ಒಂದು ಡೆಸಿಗ್ನೇಷನ್ ಆದ್ರೂ ಬೇಡ್ವಾ?! ದುಡ್ಡಿದ್ರೆ ಎಲ್ಲ ಮಾತಾಡ್ತಾರೆ ಅದಿಲ್ಲ ಅಂದ್ರೆ ಏನು ಇಲ್ಲ ನೀವೇ ಸ್ವಲ್ಪ ತಿಳಿಸಿ ಹೇಳಿ ಎಂದು ಎದ್ದು ಹೊರಡುತ್ತಾರೆ !
            
                   ಇವತ್ತಿನ ಕಾಲಮಾನದಲ್ಲಿ ಎಲ್ಲ ಕ್ಷೇತ್ರಕ್ಕೋ ಬೇಡಿಕೆ ಇದೆ ಎಲ್ಲ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿವೆ ! ನಮ್ಮ ಮನಸ್ಥಿತಿಗೆ ಹಿಡಿದ ಜಿಡ್ಡನ್ನು ತೊಳೆದು ನೋಡಿದರೆ ಎಲ್ಲವೂ ಸುಂದರ ಮತ್ತು ರಂಜನೀಯ ! ಸ್ವಲ್ಪ ಕಷ್ಟ ಪಡಬೇಕಾದ ಅನಿವಾರ್ಯತೆ ಎಲ್ಲ ಕ್ಷೇತ್ರದಲ್ಲೂ ಇದೆ , ಕೆಲವು ಕ್ಷೇತ್ರ ತುಸು ಜಾಸ್ತಿಯೇ  ಪ್ರಯತ್ನ ಬಯಸಿದರೂ ಅದು ನಾವೇ ಆರಿಸಿಕೊಂಡ ಕ್ಷೇತ್ರವಾಗಿರುವುದರಿಂದ ಅಂಥ ಕಷ್ಟ ಅನಿಸುವುದಿಲ್ಲ ! ಸುಲಭ ಪ್ರಯತ್ನವೇ ಆದರೂ ನಮ್ಮದಲ್ಲದ ಕ್ಷೇತ್ರ ನಮಗೆಂದಿಗೂ ಸಹ್ಯವಲ್ಲದ ಆದರೂ ಅದರೊಟ್ಟಿಗೆಯೇ ಇರುವ ವಿಚಿತ್ರ ಮಾನಸಿಕ ಹಿಂಸೆ ನೀಡುವ ತಾಣ ! ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಯಾರೂ ಇಂಜಿನಿಯರ್ ಗಳನ್ನಾಗಲಿ ಡಾಕ್ಟರ್ ಗಳನ್ನಾಗಲಿ ಮಾತನಾಡಿಸುವುದಿಲ್ಲ , ಗಲ್ಲಿ ಗಲ್ಲಿಗೆ ನೂರಾರು ಒಂದೇ ರೀತಿಯ ಜನ  ಇರುವಾಗ  ಯಾವುದು ಭಿನ್ನವಾಗಿರುತ್ತದೋ ಅದಕ್ಕೆ ತಾನೇ ಪ್ರಾಮುಖ್ಯತೆ ?!

                   ಯಾವುದೇ ಕ್ಷೇತ್ರ ಇರಲಿ , ಯಾವುದೇ ಕ್ಷೇತ್ರ ಅತ್ಯತ್ತಮವಾದ್ದನ್ನ ಮಾತ್ರವೇ ತನ್ನ ಮಡಿಲಿಗೆ  ಹಾಕಿಕೊಂಡು ಬೆಳೆಸುತ್ತದೆ ! ಹಾಗೆ ಬೆಳೆದ ಪ್ರತಿ ಅತ್ಯತ್ತಮವೂ ಶ್ರೇಷ್ಟವಾಗೇ ಇರುತ್ತದೆ ಮತ್ತು ಶ್ರೇಷ್ಟವಾದ ಎಲ್ಲದಕ್ಕೂ ಹೆಸರು, ಕೀರ್ತಿ ಹಾಗೂ ಹಣ ತಾನಾಗೇ ಹರಿದು ಬರುತ್ತದೆ ! ಹಾಗಾಗಿ ಪಾಲಕರಾಗಿ ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ಮಕ್ಕಳನ್ನು ನಾವು ಹೇಗೆ ಶ್ರೇಷ್ಟರಾಗುವಂತೆ ಬೆಳೆಸಬೇಕು ಎಂಬುದನ್ನು ಆಲೋಚಿಸಬೇಕು ! ಹಣವನ್ನು ಎಟಿಎಂ ಮಷೀನ್ ಕೂಡ ಕೊಡುತ್ತದೆ! ಯಾರೇ ಕಾರ್ಡ್ ಹಾಕಿದರೂ ಕೊಡುತ್ತದೆ ! ನಮ್ಮ ಮಕ್ಕಳು ದುಡ್ಡು ಮಾಡುವ ಮಷೀನ್ ಗಳಾಗುವುದು ಒಳ್ಳೆಯದೋ ಅಥವಾ ತಾನಾರಿಸಿಕೊಂಡ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕೀರ್ತಿ ಪತಾಕೆ ಹಾರಿಸುವುದೊಳಿತೊ?!

Friday, June 22, 2018

ಮೆಸ್ಸಿ ಎಂಬ ಮಾಯೆ !


ಇನ್ನೇನು ಫುಟ್ಬಾಲ್ ವರ್ಲ್ಡ್ ಕಪ್ ಜ್ವರ  ಶುರುವಾಗಿದೆ ಅನ್ನುವ ಖುಷಿ ಒಂದೆಡೆಯಾದರೆ  , ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಅಧ್ಭುತ   ಫಾರ್ವರ್ಡ್ ಆಟಗಾರ ಲಿಯೊನೆಲ್ ಮೆಸ್ಸಿ ಎಂಬ ಮಾಯಾವಿಯ ಕೊನೆಯ ವರ್ಲ್ಡ್ ಕಪ್  ಎಂಬ ನೋವು ಒಂದು   ಕಡೆ !


ಇಡೀ ವಿಶ್ವದಲ್ಲೇ , ಅತ್ಯಂತ  ಜನಪ್ರಿಯ ಹಾಗೂ ಅತೀ ಬಲಿಷ್ಠ ಆಟಗಾರ ಎಂದೆನಿಸಿಕೊಂಡಿರುವ ಅರ್ಜೆಂಟೀನಾ ತಂಡದ ಫಾರ್ವರ್ಡ್ ನಲ್ಲಿ  ಎದುರಾಳಿ ತಂಡದ ಗೋಲ್ ಕೀಪರ್ ಗಳಿಗೆ ಮೆಸ್ಸಿ, ದುಃಸ್ವಪ್ನವಾಗಿ ಕಾಡಿದ್ದು ಒಂದು ದೊಡ್ಡ ಇತಿಹಾಸ! ಹಲವು ಬಾರಿ ಪಂದ್ಯ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡೂ , ಅತ್ಯುತ್ತಮ ಗೋಲ್ ಗಳನ್ನೂ ತನ್ನ ಮುಡಿಗೇರಿಸಿಕೊಂಡೂ ಅರ್ಜೆಂಟೀನಾ ಕಳೆದ ವಿಶ್ವ ಕಪ್ ನಿಂದ ವಂಚಿತವಾಗಿತ್ತು ,  ಅಭಿಮಾನಿಗಳಿಗೆ ೨೦೧೮ರ ಕಪ್ ಅನ್ನು ಮೆಸ್ಸಿ ಎತ್ತಿಕೊಂಡು ಮುತ್ತಿಡಲಿ ಎಂಬ ಹೆಬ್ಬಯಕೆ! 


ಫುಟ್ಬಾಲ್ ಇತಿಹಾಸದ ದಂತಕಥೆಗಳ ಸಾಲಿನಲ್ಲಿ ನಿಂತಿರುವ ಮೆಸ್ಸಿಯದು ಬಾಲ್ಯದಿಂದಲೂ ಹೋರಾಟದ ಬದುಕು ,ಅತೀ ಬಡತನ ಅಲ್ಲದಿದ್ದರೂ , ದೈಹಿಕ ಸಾಮರ್ಥ್ಯವೇ ಮಾನದಂಡವಾಗಿರುವ ಈ ಕ್ರೀಡೆಗೆ ಅಡ್ಡಿಯಾಗಿ  ಮೆಸ್ಸಿಯ ೧೩ ನೇ ವಯಸ್ಸಿಗೆ ಬೆಳವಣಿಗೆಯ ಹಾರ್ಮೋನ್ ಕುಂಠಿತಗೊಂಡು ಅದರ ಚಿಕಿತ್ಸೆಗೆ ಭರಿಸುವಷ್ಟು ಹಣ ಕಾಸಿನ ತೊಂದರೆಯಾಗಿ, ಸ್ಪೇನ್ ನ ಬಾರ್ಸಿಲೋನಾ ಎಂಬ ಕ್ಲಬ್ ನ  ಆಟಗಾರನಾಗಿ ಸೇರಿಕೊಂಡರೆ ಅವನ ಚಿಕಿತ್ಸೆಯನ್ನು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಬಾರ್ಸಿಲೋನಾ ಯೂಥ್ ಅಕಾಡೆಮಿ , ಮೆಸ್ಸಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ !  ಕುಂಠಿತ ಬೆಳವಣಿಗೆಯ ಕಾಯಿಲೆಯ ಮಧ್ಯೆಯೂ ತನ್ನ ೧೭ನೇ ವಯಸ್ಸಿಗೆ ೨೦೦೪ ರಲ್ಲಿ  ಚೊಚ್ಚಲ ಪಂದ್ಯದ ಆಟಗಾರನಾಗಿ ಪಾದಾರ್ಪಣೆ ಮಾಡುತ್ತಾನೆ ! ತದ ನಂತರ ಕೇವಲ ಮೂರ್ ಮೂರು ವರ್ಷಗಳಲ್ಲಿ ಅಂದರೆ ೨೦೦೭ ರ ಹೊತ್ತಿಗೆ ಇಡೀ ಪ್ರಪಂಚವೇ ಮೆಸ್ಸಿಯ ಆಟದ ಶೈಲಿ ಹಾಗೂ ಗೋಲ್ ಮಾಡುವ ವಿಧಾನವನ್ನು  ಹಾಡಿ ಹೊಗಳುವಂತೆ ಮಾಡಿದ್ದಲ್ಲದೆ , ತನ್ನ ೨೨ ನೇ ವಯಸ್ಸಿಗೆ  ಫಿಫಾ ನೀಡುವ ವಿಶ್ವದ ಅತ್ಯತ್ತಮ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ !


ಚೈನಾ ದಲ್ಲಿ ನಡೆದ ೨೦೦೮ ರ ಒಲಿಂಪಿಕ್ಸ್ ನಲ್ಲಿ ತನ್ನ ತಂಡಕ್ಕೆ ಬಂಗಾರದ ಪದಕ ಸಿಗುವುದಕ್ಕೆ ಮುಖ್ಯ ಕಾರಣ ಮೆಸ್ಸಿ ! ಇಷ್ಟೆಲ್ಲಾ ಸಾಧನೆಯ ನಂತರ ೨೦೧೧ಕ್ಕೆ ಅರ್ಜೆಂಟೀನಾ ತಂಡದ ನಾಯಕನ ಪಟ್ಟವನ್ನು  ಹೊತ್ತ ಮೆಸ್ಸಿ ಸತತ ಮೂರು ಬಾರಿ ವಿಶ್ವ ಕಪ್ ಅಂತಿಮ ಪಂದ್ಯಕ್ಕೆ  ಕೊಂಡೊಯ್ಯುತ್ತಾನೆ ! ಅಂದರೆ ನಾಯಕನ್ನಾಗಿ ನೇಮಕಗೊಂಡ ವರ್ಷದಿಂದ ಸತತವಾಗಿ ಮೂರು ವರ್ಷ ತಂಡ ಫೈನಲ್ ತಲುಪುತ್ತದೆ , ಕೆಲವೊಮ್ಮೆ ಅದೃಷ್ಟವೂ ಬೇಕಾಗುತ್ತದೆ ಎನ್ನುವುದು ಇದಕ್ಕೆ , ಅಷ್ಟು ಕಠಿಣ ಹಣಾ ಹಣಿಯ ನಂತರ ಮೂರು ಬಾರಿ ಕಪ್ ಮುಡಿಗೇರಿಸುವಲ್ಲಿ ಅರ್ಜೆಂಟೀನಾ ವಿಫಲವಾಗುತ್ತದೆ ! ಕಪ್ ಗೆಲ್ಲದಿದ್ದರೇನು , ಈ ಅವಧಿಯಲ್ಲಿ ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿ ನಿಲ್ಲುತ್ತಾನೆ, ಇವತ್ತು ವಿಶ್ವದಲ್ಲಿ ತಮ್ಮ ದೇಶದ ಫುಟ್ಬಾಲ್ ಆಟಗಾರನನ್ನು ಬಿಟ್ಟು ಬೇರೆ ದೇಶದ ಆಟಗಾರನನ್ನು ಆರಾಧಿಸುವಂತೆ ಮಾಡಿದ್ದು ಮೆಸ್ಸಿ ಮಾತ್ರ! ಬ್ರೆಝಿಲ್ ತಂಡದಲ್ಲಿ  ರೊನಾಲ್ಡಿನೋ  ಎಂಬ  ಅತ್ಯತ್ತಮ ಆಟಗಾರನಿದ್ದೂ , ಹಲವು ಪ್ರದೇಶದ ಜನ ಮೆಸ್ಸಿ ಹಾಗೂ  ಅರ್ಜೆಂಟೀನಾ ದೇಶವನ್ನು ಬೆಂಬಲಿಸುತ್ತಾರೆ ಎಂದರೆ ಅದೆಷ್ಟು ಮೋಡಿ ಮಾಡಿರಬೇಕು ಈ ಮೆಸ್ಸಿ ಎಂಬ ಮಾಂತ್ರಿಕ ?!


ಫುಟ್ಬಾಲ್ ಆಟಗಾರರಿಗೆ ಹೆಸರು ಮತ್ತು ಹಣ ನೀರಿನಂತೆ ಹರಿದು ಬರುತ್ತದೆ , ಇಂಥ ಸುಖದ  ಸುಪತ್ತಿಗೆಯಲ್ಲಿರುವವರಿಗೆ ಹೆಣ್ಣಿನ ಸ್ನೇಹ ಸರಸ ಸರ್ವೇ ಸಾಮಾನ್ಯ ! ಈ ವಿಷಯದ್ಲಲೂ ಮೆಸ್ಸಿ ತಾನೇಕೆ ಉಳಿದ ತಾರೆಗಳಿಗಿಂತ ಭಿನ್ನ ಎಂದು ತೋರಿಸಿಕೊಟ್ಟಿದ್ದಾನೆ. ೨೦೦೯ ರಿಂದ ೨೦೧೪ರ ವರೆಗೆ ಮೆಸ್ಸಿ ಫಾಟ್ಬಾಲ್ ಕ್ಷೇತ್ರದ ಅತೀ ಹೆಚ್ಚು ಹಣ ಗಳಿಸಿದ ಆಟಗಾರ! ಯಾವುದೇ ಗಾಸಿಪ್ ಗಳಿಲ್ಲದ, ಕಪ್ಪು ಚಿಕ್ಕೆ ಇಲ್ಲದ   ವೈಯಕ್ತಿಕ ಜೀವನ ,ತ ನಡೆಸಿದ ಮೆಸ್ಸಿ, ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಇದ್ದ ಗರ್ಲ್ ಫ್ರೆಂಡ್  ಆಂಟೀನೆಲ್ಲಾ ರೋಕಝ್ಯ ಎಂಬಾಕೆಯನ್ನು ಎರಡು ಮಕ್ಕಳ ನಂತ್ರ ೨೦೧೭ ರಲ್ಲಿ ವಿವಾಹವಾಗಿ  ಅನೇಕ ಹುಡುಗಿಯರ ಪಾಲಿನ ಮಿಸ್ಟರ್ ಪರ್ಫೆಕ್ಟ್ ಆಗಿ ಕಾಡುತ್ತಾನೆ !


ತಾನು ಅನುಭವಿಸಿದ ಬಾಲ್ಯದ ತೊಂದರೆ ಇನ್ಯಾರೂ  ಅನುಭವಿಸದಿರುವಂತೆ ನೋಡಿಕೊಳ್ಳಲು ಮೆಸ್ಸಿ ತನ್ನದೇ ಬಾರ್ಸಿಲೋನಾ ಕ್ಲಬ್ ನ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ಯೂನಿಸೆಫ್ ಎಂಬ ಸಂಸ್ಥೆಗೆ ಧಾರಾಳ ಹಣ ಸಹಾಯ ಒದಗಿಸಿದ್ದಲ್ಲದೆ , ತಾನು ಹುಟ್ಟಿ ಬೆಳೆದ ರೊಸಾರಿಯೋ ಎಂಬ ಊರಿನ ಪ್ರತಿ ಫುಟ್ಬಾಲ್ ಪಟು ಮೆಸ್ಸಿಯ ದೇಣಿಗೆಯಿಂದ ಮುಂದೆ ಬರುತ್ತಿದ್ದಾರೆ ! 

ಆಟದಮೈದಾನದಲ್ಲಿ ಯಾವತ್ತೂ ಮೋಸದಾಟವಾಗಲಿ ಎದುರಾಳಿಯನ್ನು ತುಚ್ಛವಾಗಿ ಕಾಣುವುದಾಗಲೀ ಎಂದೂ ಮಾಡದ ಮೆಸ್ಸಿಯ  ಬೊಕ್ಕಸದಲ್ಲಿ ಅತೀ ಹೆಚ್ಚು ಗೋಲ್ ಮಾಡಿದ ಸಾಧನೆ  ಒಂದೆಡೆಯಾದರೆ, ಫುಟ್ಬಾಲ್ ದಂತಕಥೆ ಮೆರಡೋನ  ಮೆಸ್ಸಿ ಯನ್ನು   ಸರ್ವ ಶ್ರೇಷ್ಠ ಆಟಗಾರ ಎಂದು ರೊನಾಲ್ಡಿನೋ ಹಾಗೂ ರೊನಾಲ್ಡೊರನ್ನು ಮೆಸ್ಸಿಯ ನಂತ್ರ ಎಂಬಂತೆ ಬಿಂಬಿಸಲಾಗುತ್ತಿದೆ. 

ಒಂದು ಚೆಂಡಿನ ಹಿಂದೆ ೨೨ ಜನ ಓಡಾಡಿ ಬಡಿದಾಡುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ , ಅಂಥದರಲ್ಲಿ ಮೆಸ್ಸಿ ಎಂಬುದು  ಅಸಾಧಾರಣ ಹಾಗೂ ಅಪರೂಪ ವ್ಯಕ್ತಿತ್ವ!  ಸದಾ ವೃತ್ತಿಪರತೆ ತೋರುವ ಮೆಸ್ಸಿ  ಅಂಥ ಒಬ್ಬ ಕ್ಯಾಪ್ಟನ್ ಕೂಲ್ ನನ್ನು  ಮೈದಾನದಲ್ಲಿ ನೋಡುವುದು  ಒಂದು ಸಂಭ್ರಮ !  ಮೆಸ್ಸಿಯ ಹಲವು ರೆಕಾರ್ಡ್ ಗಳು ಇನ್ನು ಯಾರಿಂದಲೂ ಭೇದಿಸಲಾಗದೆ ಉಳಿದಿರುವ ಬೆನ್ನಲ್ಲೇ , ಈ ಸಲದ ವಿಶ್ವ ಕಪ್ ಮೆಸ್ಸಿಯ ಕೊನೆಯ ಆಟವಾಗಿರುವರಿಂದ , ಇಂಥ ಅಪರೂಪದ ನಾಯಕ ತನ್ನ ತಂಡದ  ಜಯಭೇರಿಗೆ  ಕಾರಣನಾಗಿ  ಕೊನೆಯ ಬಾರಿಯಾದರೂ ವಿಶ್ವ ಕಪ್ ಮೆಸ್ಸಿಯ ಪಾಲಾಗಲಿ  ಎಂಬುದು ಎಲ್ಲ ಅಭಿಮಾನಿಗಳ ಆಸೆ! 








Monday, May 7, 2018

ಜಪಾನ್ ಎಂಬ ಬೆರಗು !


             



   ಒಂದು ಸಲ   ನಮ್ಮ ದೇಶದವರಿಗೆ ತುರ್ತಾಗಿ  ಒಂದು ಸಬ್  ಮರಿನ್ ಅವಶ್ಯಕತೆ ಉಂಟಾಗಿ , ಖರೀದಿಸಲು ನಿರ್ಧರಿಸುತ್ತಾರಂತೆ, ಆಗ ಮೊದಲು ಅಮೆರಿಕಾದವರಿಂದ ಖರೀದಿಸಲು ಯೋಚಿಸಿ , ಅವರನ್ನು ಕೇಳಿದಾಗ ಅವರು ಒಂದು ೫೦೦ ಪುಟಗಳು ಟರ್ಮ್ಸ್   ಅಂಡ್ ಕಂಡೀಶನ್ ಬುಕ್ ಅನ್ನು ಕಳಿಸುತ್ತಾರಂತೆ , ಅದನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮೂರು ತಿಂಗಳಾಗಿ ಕೆಲವು ಪುಟಗಳು ಕಳೆದು ಹೋದವಂತೆ! ಆಗ , ಇವರುಗಳು ರಷ್ಯಾ ದೇಶದವರನ್ನು ಸಂಪರ್ಕಿಸಿ ಕೇಳುತ್ತಾರಂತೆ ನಮಗೆ ಇನ್ನಾರು ತಿಂಗಳುಗಳಲ್ಲಿ ತುರ್ತಾಗಿ ಸಬ್ ಮರಿನ್ ನ ಅವಶ್ಯಕೆತೆ ಇದೆ ನೀವೇನಾದರೂ ಕೊಡಬಹುದೆ ಎಂದು ಅದಕ್ಕೆ ರಷ್ಯಾ ೨೫೦ ಪುಟಗಳ ಟರ್ಮ್ಸ್ ಅಂಡ್ ಕಂಡೀಶನ್ ಕಳಿಸಿ ೯ ತಿಂಗಳಲ್ಲಿ ಕಳಿಸಿಕೊಡುತ್ತೇವೆ ಎಂದರಂತೆ ! ಇನ್ನೇನು ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತಾಗ ಯಾರೋ ಜಪಾನ್ ಬಗ್ಗೆ ಹೇಳಿದರಂತೆ ಹೆಚ್ಚಿನ ಕಾಲಾವಕಾಶ ಇರದಿದ್ದರಿಂದ ದೂರವಾಣಿ ಕರೆ ಮೂಲಕ ಡೀಲ್ ಮಾಡುವ ಉದ್ದೇಶದಿಂದ ಫೋನಾಯಿಸಿ ಹೇಗ್ ಹೀಗೆ ಅಂತ ಹೇಳಿದಾಗ ಆ ಕಡೆ ಇಂದ ಸರಿ ಬರೋಬ್ಬರಿ ೫ ತಿಂಗಳು ಹದಿನೈದು ದಿವಸದಲ್ಲಿ ಸಬ್ ಮರೀನ್ ನಿಮ್ಮ ದೇಶದಲ್ಲಿ ಇಂಥಿಂಥ ತಾರೀಖು ಇಂಥಿಂಥ ಸಮಯಕ್ಕೆ ಸರಿಯಾಗಿ ಇಂತಿಥ ಜಾಗಕ್ಕೆ ಬಂದಿರುತ್ತದೆ ಎಂದರಂತೆ , ಇದನ್ನು ಕೇಳಿ ನಮ್ಮ ಅಧಿಕಾರಿ ಮತ್ತೆ ಟರ್ಮ್ಸ್ ಅಂಡ್ ಕಂಡೀಶನ್ ಕಥೆ ಏನ್ ಸ್ವಾಮಿ ಯಾರೂ ಆಗಲ್ಲ ಅಂತ ಹೇಳಿದಾಗ ನೀವು ಕೊಡುತ್ತೇನೆ ಅಂದಿರಿ ಯಾವ ಆಧಾರದ ಮೇಲೆ ನಿಮ್ಮನ್ನು ನಂಬಲಿ ಎಂದು ಕೇಳಿದರಂತೆ ಅದಕ್ಕೆ ಜಪಾನೀ ಅಧಿಕಾರಿ " ನೀವು ನಮ್ಮ್ ಜೊತೆಗೆ  ಮೊದಲನೇ ಸಲ ವ್ಯವಹರಿಸುತ್ತಿದ್ದೀರಿ ಎಂದೆನಿಸುತ್ತದೆ ಅದಕ್ಕೆ ನಿಮಗೆ ನಮ್ಮ ಬಗ್ಗೆ ತಿಳಿದಿಲ್ಲ ನಾವೇನಾದರೂ ಹೇಳಿದ ದಿನಕ್ಕಿಂತ ಒಂದೇ ಒಂದು ದಿನ ಮೀರಿದರೆ ನಮ್ಮ ಸಬ್ ಮರಿನ್ ನಿಮಗೆ ಗಿಫ್ಟ್ ಆಗಿ ಕೊಡುತ್ತೇವೆ ಹಣ ತೆಗೆದುಕೊಳ್ಳುವುದಿಲ್ಲ"! ಎಂದರಂತೆ   ಇದು ಒಂದು ಕಾಲ್ಪನಿಕ ಕಥೆಯಾದರೂ ಜಪಾನ್ ನವರೆಲ್ಲರೂ ಒಪ್ಪುವಂಥ ಹಾಗೆಯೇ ನಡೆದುಕೊಳ್ಳುವಂಥ ಕಥೆ !ನಾವು ಶಾಲೆಯಲ್ಲಿರುವಾಗ ನಮ್ಮ ಮೇಷ್ಟ್ರು ಯಾವಾಗಲೂ ಜಪಾನ್ ಎಂಬ ಪುಟ್ಟ ದೇಶದ ಬಗ್ಗೆ ವಿಪರೀತ ಎನ್ನುವಷ್ಟು ಪ್ರೀತಿ ಹಾಗೂ ಬೆರಗು ಮೂಡುವಂಥ ಕಥೆಗಳನ್ನು ಹೇಳುತ್ತಿದ್ದರು , ಎಲ್ಲರಿಗೂ ಅಮೇರಿಕಾ ಮಾದರಿ ಆದರೆ ನಮ್ಮೆಲರಿಗೂ ಜಪಾನ್ ಎಂದರೆ ಅಚ್ಚರಿ !

ಇವತ್ತು ದೊಡ್ಡಣ್ಣ ಅಮೆರಿಕಾಗೆ ಸಾಟಿಯಾಗಿ ತಾಂತ್ರಿಕವಾಗಿ ಸವಾಲೆಸೆಯಬಲ್ಲ ದೇಶ ಎಂದರೆ ಅದು ಜಪಾನ್ ಮಾತ್ರ! ಜಗತ್ತಿನಲ್ಲಿ ಆ ದೇಶ ಅನುಭವಿಸದಷ್ಟು ಸಾವು ನೋವು ಇನ್ಯಾವ ದೇಶವೂ ಅನುಭವಿಸಿರಲಿಕ್ಕಿಲ್ಲ ಆ ದೇಶ ಕಂಡಷ್ಟು ಪ್ರಕೃತಿ ವಿಕೋಪವನ್ನು ಇನ್ಯಾವ ದೇಶವೂ ಎದುರಿಸರಲಿಕ್ಕಿಲ್ಲ ! ಎಷ್ಟೇ ಅಡೆ  ತಡೆಗಳಿದ್ದರೂ ಮತ್ತೆ ಒಂದು ಅಭೇದ್ಯ ಶಕ್ತಿಯಾಗಿ ಹೊರ ಹೊಮ್ಮುತ್ತದೆ ಪ್ರತಿಬಾರಿಯೂ ಇಡೀ ವಿಶ್ವವೇ ಬೆರಗಾಗಿ  ಅವರತ್ತ ನೋಡುವಂತೆ ಮಾಡುತ್ತದೆ ! ಹಿರೋಷಿಮಾ ನಾಗಸಾಕಿ ದುರಂತದ ನಂತರ ಅದು ಜಗತ್ತಿನ ಭೂಪುಟದಲ್ಲಿ ಉಳಿಯುವ ಯಾವ ಸೂಚನೆಯು ಇರಲಿಲ್ಲ , ಒಂದಾದ ಮೇಲೊಂದು ಭೂಕಂಪ , ಸುನಾಮಿಗಳು ಒಂದೇ ಎರಡೇ  ಪ್ರತಿ ಬಾರಿ ಹೊಸ ದುರಂತ ಹೊಸ ಸಮಸ್ಯೆ ಎಲ್ಲವನ್ನು ಮೆಟ್ಟಿ ನಿಂತುರುವ ಆ ದೇಶದ ಪ್ರತಿ ಪ್ರಜೆಯು ಸಾಹಸಿಯಂತೆ ಕಾಣುತ್ತಾನೆ !

ನಾವೆಲ್ಲಾ ಗಂಡ ಕಚೇರಿಯಿಂದ ಮನೆಗೆ ಬೇಗ ಬಂದರೆ ಖುಶಿ  ಪಟ್ಟು ತಬ್ಬಿ ಮುದ್ದಾಡಿದರೆ , ಜಪಾನ್ ದೇಶದ ಹೆಂಗಸರು ಗಂಡ ಬೇಗ ಮನೆಗೆ ಬರುವುದು ಒಂದು ಅಕ್ಷಮ್ಯ ಅಪರಾಧ ಹಾಗೂ ಅವಮಾನ ಎಂದು ಭಾವಿಸುತ್ತಾರೆ ! ಅಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಪ್ರತಿಯೊಬ್ಬರೂ ದೇಶ ಮೊದಲು ಹಾಗೂ ನಾವು ಕೆಲಸ ಮಾಡುವುದು  ದೇಶಕ್ಕಾಗಿ  ನಂತರ ನಮಗಾಗಿ ನಾವು ನಮ್ಮದು ಎಂಬ ಘೋಷಿತ ವಾಕ್ಯವನ್ನು ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಪಾಲಿಸುತ್ತಾರೆ !

ಅವರಲ್ಲಿನ ವೃತ್ತಿಪರತೆ, ಶಿಸ್ತು , ಕೆಲಸ ಹಾಗೂ ಕೆಲಸ ಮಾಡುವ ಸಂಸ್ಥೆಯನ್ನು ಗೌರವಿಸುವ ಪರಿ ಎಲ್ಲವೂ ಪರಿಪೂರ್ಣ ! ಸಾಮಾನ್ಯವಾಗಿ ಎಲರೂ ಪಾಲಿಸುವಂತೆ ೮ ಗಂಟೆಗಳೇ ಅಲ್ಲಿನ ಕಚೇರಿ ಸಮಯವಾಗಿದ್ದರೂ ಅಲ್ಲಿನ ಪ್ರತಿ ಪ್ರಜೆಯೂ ೧೦ ರಿಂದ ೧೨ ಗಂಟೆ ಸಮಯವನ್ನು ಕಚೇರಿಗೆಂದೇ ಮೀಸಲಿಟ್ಟಿರುತ್ತಾರೆ ! ಕೇವಲ ೧೨೫ ಮಿಲಿಯನ್ ಜನಸಂಖ್ಯೆ ಹೊಂದಿರುವ  ದೇಶ ಇಂದು ಜಗತ್ತಿನಲ್ಲೇ ತಾಂತ್ರಿಕವಾಗಿ ಮುಂದುವರೆದ ಕೆಲವೇ ಕೆಲವು ದೇಶಗಳಲ್ಲಿ ಒಂದು ಮತ್ತು ವಿಶ್ವದಲ್ಲೇ ಎರಡನೇ ದೊಡ್ಡ ಜಿಡಿಪಿ ಹೊಂದಿರುವ ರಾಷ್ಟ್ರ !ಅಲ್ಲಿನ ನಿರುದ್ಯೋಗ ಕೇವಲ ೪. ೧%  ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಕೇವಲ ೧೩. ೫ % , ಸ್ವಾತಂತ್ರ  ಬಂದು ೭೦ ಸಂವತ್ಸರ ದಾಟಿ ಅವರಷ್ಟು ದೊಡ್ಡ ಮಟ್ಟದ ಯುದ್ಧ ಅಥವಾ ಹಾನಿಯಾಗಲಿ ಆಗದೇ ಇದ್ದರೂ ನಮ್ಮಲ್ಲಿ ಧರ್ಮ ಮೊದಲು ನಂತ್ರ ದೇಶ! ನಮ್ಮಷ್ಟು ಧರ್ಮ ,ಜಾತಿ , ಭಾಷೆ ,ಗಡಿ ಸಮಸ್ಯೆ ಅವರಲ್ಲಿ ಇಲ್ಲದಿದ್ದರೂ ಅವರಷ್ಟು ಕಷ್ಟಗಳಿಗೆ ಎದೆ ಒಡ್ಡಿ ಇದನ್ನು ಮಾಡಿಯೇ ತೀರುತ್ತೇವೆ ಎಂಬ  ಎದೆಗಾರಿಕೆ ನಮಗಿಲ್ಲ !

ಒಂದು ದೇಶಕ್ಕೆ ದೇಶವೇ ಅಳಿವಿನಂಚಿನಲ್ಲಿರುವಾಗ ಅಲ್ಲಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಹೇಳುವುದೇ ಬೇಡ ! ಎರಡನೇ ಮಹಾ ಯುದ್ಧದ ನಂತ್ರ ಅಂದರೆ ೧೯೪೦-೪೬ ರ ವರೆಗೆ ಆರ್ಥಿಕವಾಗಿ ದಿವಾಳಿ  ಹೊಂದಿ ಅಮೆರಿಕಾಗೆ ಶರಣಾಗಿಯೂ ಹೇಚ್ಛೆನೂ ಲಾಭ ಸಿಗದೇ ಬಳಲಿ ಹೋಗಿದ್ದ ಜಪಾನಿಗರಿಗೆ ಅಮೆರಿಕನ್ನರೇ ಡಾಡ್ಜ್ ಎಂಬ ಬ್ಯಾಂಕರ್ ನನ್ನ ಕರೆಸಿ ಕೆಲವು ಸಹಾಯಕಾರಿ ಆರ್ಥಿಕ ಸಬಳೀಕರಣದ ಅದರಲ್ಲಿ ೧) ಹಣದುಬ್ಬರ ಇಳಿಕೆ  ೨) ಸಮತೋಲನ ಬಜೆಟ್  ೩) ಜಪಾನೀ ಸರಕಾರದ ಸಾಲ ವಾಪಸಾತಿ  ೪) ಮತ್ತು ಫಿಕ್ಸೆಡ್ ಎಕ್ಸ್ಚೇಂಜ್ ರೇಟ್  (೧ ಡಾಲರ್ =೩೬೦ ಯೆನ್ ) ಅಂತ ನಿಯಮಗಳನ್ನು ಜಪಾನಿಗರ ಮುಂದಿಡುತ್ತಾನೆ ! ಈ ನಿಯಮಗಳನ್ನು ಪಾಲಿಸದೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ

ಇದರಿಂದ ೧೯೪೯ ರ ಹೊತ್ತಿಗೆ ಈ ನಿಯಮದಡಿ ಉದ್ಯಮದಾರರು ಹಾಗೂ ಕಾರ್ಮಿಕ ವರ್ಗ ತಮ್ಮ ಸರಕುಗಳಿಗೆ ಅಂತರಾಷ್ಟ್ರೀಯ ಬೆಲೆಗೆ ತಕ್ಕಂತೆ ಹೊಂದಾಣಿಕೆಯಾಗದೇ ಅತೀ ದುಬಾರಿ ಎನಿಸಿ ಎಲ್ಲರಿಂದ ತಿರಸ್ಕರಿಸಲ್ಪಟ್ಟವು ! ಇದರಿಂದ ಗ್ಲೋಬಲ್ ಮಾರುಕಟ್ಟೆ ಕಳೆದುಕೊಂಡರು ! ಇದರಿಂದ ಎದೆ ಗುಂದದ ಜಪಾನಿಗರಿಗೆ ಅಲ್ಲಿನ ಸ್ಟೇಟ್ ಬ್ಯಾಂಕ್ ಗಳು ಧಾರಾಳವಾಗಿ ಸಾಲ ಸಹಾಯ ಒದಗಿಸಿ ದಿವಾಳಿಯಾಗುದನ್ನು ತಡೆದವು ! ೧೯೫೦ ರ ಹೊತ್ತಿಗೆ ಒಂದು ಹೊಸ ಉದ್ದೇಶ ಹೊತ್ತ ಜಪಾನ್ ನ ಆರ್ಥಿಕ ಉದ್ದೇಶ ಕೇವಲ ರಫ್ತು  ಹೆಚ್ಚಿಸುವದಷ್ಟೇ ಆಗಿತ್ತು ಇದರಿಂದ ಸಹಜವಾಗಿಯೇ ತಲಾ ಸಂಗ್ರಹಣೆ ಕಡೆ ಗಮನ ಹೆಚ್ಚಿಸುವಂತೆ ಆಯಿತು ! ಇದಕ್ಕೆ ಸರಿಯಾಗಿ ಮಧ್ಯಮ ಗಾತ್ರದ  ಉದ್ಯಮಿದಾರರೆಲ್ಲ ಸೇರಿಕೊಂಡು ಟ್ಯಾಕ್ಸ್ ಏರಿಕೆ ಖಂಡಿಸಿ ಹೋರಾಟ ನಡೆಸಿದರು , ಈ ಎಲ್ಲ ಕಾಳಜಿಯನ್ನು ಮುಂದಿಟ್ಟುಕೊಂಡು ಜಪಾನಿಗರು ಹುಟ್ಟು ಹಾಕಿದ್ದು " ಮಾನವ ಕಲ್ಯಾಣ ಸಮಾಜ " ಈ ಮಾನವ ಕಲ್ಯಾಣ ಸಮಾಜಕ್ಕಾಗಿಯೇ ಸ್ವತಂತ್ರ ನಿಯಮ , ಮಾರ್ಪಾಡು ಹೊಂದಿದ ಕಾನೂನು ,ಹೊಸ ಸಾಲದ ನಿಯಮ ಅಷ್ಟೇ ಅಲ್ಲದೆ ಹೊಸದಾಗಿ ಶಾಸನ ಮಾನ್ಯತೆಯನ್ನು ಕೊಡಲಾಯಿತು ! ಕಲ್ಯಾಣ ರಾಷ್ಟ ಎಂದಾಗಿದ್ದರೆ ಟ್ಯಾಕ್ಸ್ ಹೆಚ್ಚಳವನ್ನು ಒಪ್ಪಲೇ ಬೇಕಾದ ಅನಿವಾರ್ಯತೆ ಇತ್ತು ಅದಕ್ಕಾಗಿ ಸಮಾಜದ ಹಿತ ಕಾಯ್ದುಕೊಂಡರೆ ದೇಶ ತಾನೇ ತಾನಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ನಿಯಮವನ್ನು ಅಷ್ಟೇ ಕಟ್ಟು ನಿಟ್ಟಾಗಿ ಪಾಲಿಸಿದರು !

ಈ ಸಮಾಜದ ಸ್ಥಾಪನೆಯಿಂದ ನಿವೃತ್ತಿ ಭತ್ತ್ಯೇ ಗಳನ್ನು ತಮ್ಮ ಸ್ವಂತ ಉಳಿತಾಯದಿಂದಲೇ ನಿರ್ವಹಿಸುವಂತಾಗಿ , ಪ್ರತಿ ಕಾರ್ಮಿಕನ ಹೊಣೆ ಆಯಾ ಉದ್ಯಮಗಳೇ ಹೊತ್ತು ಇನ್ಶೂರೆನ್ಸ್ ಇಂದ ಹಿಡಿದು ಮೆಡಿ ಕ್ಲೇಮ್ ಎಲ್ಲವನ್ನು ಸರಕಾರದ ಬೊಕ್ಕಸಕ್ಕೆ ಧಕ್ಕೆಯಾಗದಂತೆ ಎಲ್ಲ ಆಯಾ ಕಂಪನಿಗಳೇ ನಿರ್ವಹಿಸಿದವು ! ಸಹಜವಾಗಿ ಸರಕಾರೀ ಬೊಕ್ಕಸ ಭಾರಿ ಲಾಭ ಹೊಂದುತ್ತಲಿತ್ತು  , ಆ ಹಣದಲ್ಲಿ ತಾಂತ್ರಿಕ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅರ್ಹತೆಯ ಸ್ಪರ್ಧೆಗೆ  ತಯಾರಿ ನಡೆಸಲು ಮುಂದಾಯಿತು ಜಪಾನ್ !ಇದೆಲ್ಲ ನಡೆದಿದ್ದು ಕೇವಲ ೨೩ ವರ್ಷಗಳ ಅವಧಿಯಲ್ಲಿ ಅಂದರೆ ೧೯೫೦-೭೩ ರ ಅವಧಿ ಜಪಾನಿಗರಿಗೆ ಆರ್ಥಿಕ ಸಬಲೀಕರಣವನ್ನು ತಂದು ಕೊಟ್ಟಿತಲ್ಲದೆ , ೧೯೬೪ ರಲ್ಲೇ ಮೊದಲ ಬುಲೆಟ್ ಟ್ರೈನ್ ಪರಿಚಯಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಿತು !ಇಂದು ಅಲ್ಲಿ ಉತ್ಪಾದನೆ ಹೊಂದುವ ಶೇಕಡಾ ೭೦ ಪ್ರತಿಶತ ಸರಕು ಇಡೀ ವಿಶ್ವದೆಲ್ಲೆಡೆ ರಫ್ತಾಗುತ್ತದೆ (ವಿಥ್ ದಿ ಬ್ರಾಂಡ್ ನೇಮ್ )

ಅಂತಿಮವಾಗಿ ಇದೆಲ್ಲಕ್ಕೂ ಮುಖ್ಯ  ಕಾರಣ ಜಪಾನೀ ಸಾಮಾನ್ಯ ಜನರು ! ಎರಡನೇ ಮಹಾ ಯುಧ್ಧದ ನಂತರ ಪ್ರತಿ ಜಪಾನೀ ಪ್ರಜೆಯು ದೇಶ ಮೊದಲು ಹಾಗೂ ದೇಶಕ್ಕಾಗಿ ಏನು ಬೇಕಾದರೂ   ಮಾಡಲು ಸಿದ್ಧ ಎಂಬ ಧ್ಯೇಯ ವಾಕ್ಯವನ್ನು ಕಾಯಾ  ವಾಚಾ ಹಾಗೂ ಮನಸಾ ಪಾಲಿಸಲು ಪ್ರಾರಂಭಿಸಿದರು !
"ಯಾವಾಗಲೂ ನಾವೆಲ್ಲರೂ ಒಂದೇ , ಮತ್ತು ನಾವೆಲ್ಲರೂ ಉಳಿದ ಏಶಿಯನ್ ಗಳಿಗಿಂತ ಉತ್ತಮರು  ಹಾಗೂ ಬಿಳಿಯರಿಗಿಂತ ಉನ್ನತರು " ಎಂಬ ಪ್ರತಿಜ್ಞೆ ತೆಗೆದುಕೊಂಡು ಹುಟ್ಟುವ ಪ್ರತಿ ಮಗುವಿನಲ್ಲೂ ಈ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಾರೆ ! ಮಹಾ ಯುದ್ಧದ ನಂತರ ತಮ್ಮ ದೇಶದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರತಿ ಪ್ರಜೆಯು ತನ್ನ ವೈಯಕ್ತಿಕ ಸುಖಕ್ಕಾಗಿ ಹಂಬಲಿಸದೆ , ಅದಕ್ಕಾಗಿ ತಮ್ಮ ದೇಶದಲ್ಲಿ ತಮ್ಮದೇ ಸರಕಿನ ಬೆಲೆ ಎರಡರಷ್ಟು ದುಬಾರಿಯಾದರೂ ಚಿಂತಿಸದೇ ಅದನ್ನು ಮನಸಾ  ಸ್ವಾಗತಿಸಿ ಬೆಂಬಲಿಸಿದರು ! ಇದೇ ಮನಸ್ಥಿತಿ ಅವರನ್ನು ಇಂದಿಗೂ ಅವರ ಚಿಂತೆಗಳನ್ನಾಗಲಿ , ಅಥವಾ ಒತ್ತಡಗಳನ್ನಾಗಲಿ , ಧಾರ್ಮಿಕ / ಸಾಂಸ್ಕೃತಿಕ ಹೀಗೆ ಯಾವುದೇ ವ್ಯತ್ಯಾಸಗಳನ್ನ ಸಾರ್ವಜನಿಕವಾಗಿ  ವ್ಯಕ್ತವಾಗದಂತೆ ತಡೆಯುತ್ತ ಬಂದಿದ್ದಲ್ಲದೆ , ಜಗತ್ತಿನ ಅತೀ ಕಡಿಮೆ ಅವಧಿಯಲ್ಲಿ ಮುಂದುವರೆದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿತು !

ನೋಟು ಬ್ಯಾನ್ನಿಂದಾಗಿ ಏಟಿಎಂ ಮಷೀನ್ ಮುಂದೆ ಕಾಯುವುದೇ ದೇಶದ ಅತ್ಯಂತ ಕರಾಳ ದಿನ ಎಂದು , GST  ಬರುವುದರಿಂದ ದೇಶವೇ ದಿವಾಳಿಯಾಗುತ್ತದೆ , ಕಾರ್ಪೊರೇಟ್ ಕಾರ್ಯನಿರ್ವಾಹಕರ  ಆಗಮನದಿಂದಾಗಿ ದೇಶದ ರೈತರೆಲ್ಲರೂ ಬೀದಿಗೆ ಬರುತ್ತಾರೆ ಎಂದು ಪ್ರತಿಯೊಂದಕ್ಕೂ ನಮ್ಮ ಹಾಗೆ ವಿರೋಧ ವ್ಯಕ್ತ ಪಡಿಸಿ  ಬಂದ್ ಮಾಡಿ ಅಡ್ಡಗಾಲು ಹಾಕಿ, ಉದ್ದುದ್ದ ಮಲಗಿದ್ದರೆ ಇವತ್ತು ಜಪಾನ್ ಕೂಡ ಮಿನಿ ಭಾರತವಾಗಿರುತ್ತಿತ್ತು !

Tuesday, May 1, 2018

ಮೋದಿ ಎಂಬ ಮಾಯೆ ಮತ್ತು ನಾವು !


ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು, ಕಾಲೇಜುಗಳಲ್ಲಿ  ಪಾಠ ಮಾಡುವ ಉಪನ್ಯಾಸಕರು, ಪ್ರಾಧ್ಯಾಪಕರು  ಹಾಗೂ ಸಮಾಜದಲ್ಲಿ ಮುಖಂಡ ಎನಿಸಿಕೊಂಡವ ಮತ್ತು ರಾಜಕೀಯ ನಾಯಕ , ಇವರೆಲ್ಲರಿಗೂ ವಕ್ಚಾತುರ್ಯ ಮತ್ತು ಜನರನ್ನು ಆಕರ್ಷಣೆ ಮಾಡುವ ಕಲೆ ಗೊತ್ತಿಲ್ಲದಿದ್ದರೆ ಇವರುಗಳ ಸರ್ವೈವಲ್ ತುಂಬಾ ಕಷ್ಟ !

ನಾನು ಮೋದಿ ಅಭಿಮಾನಿ ಹಾಗೂ ಇತ್ತೀಚಿಗೆ ಈ ಆಗದವರು ಅಂತೆ ಇರುವ ಕೆಲವರು ಹೆಸರಿಸಿರುವ ಹಾಗೆ ಭಕ್ತಳೂ ಹೌದು !
 ಇದಕ್ಕೆ ಕಾರಣ ಇದೆ.. ಎಲ್ಲರೂ ಹೇಳಿರಬಹುದು ಆದರೂ ನಮ್ಮ ಕರ್ನಾಟಕದ ಚುನಾವಣೆಯ ಸಂಧರ್ಭ ಆಗಿದ್ದರಿಂದ ಇದು ನನ್ನ ಅಭಿಯಾನದ ಲೇಖನ ಎಂದುಕೊಳ್ಳಬಹುದು ! ನಮ್ಮೆಲ್ಲರಿಗೂ ರಾಜಕೀಯ ಎಂದರೆ ಬರಿ ಮೋಸ , ದಗಾ , ವಂಚನೆ ಹಾಗೂ  ಹಗರಣಗಳ ಕ್ಷೇತ್ರ , ಇಲ್ಲಿ ಒಳ್ಳೆಯವರು ಮತ್ತು ಓದಿಕೊಂಡವರು ಬರುವಂತಿಲ್ಲ ಎಂಬ ಅಲಿಖಿತ ನಿಯಮ ವನ್ನು ಎಲ್ಲರೂ ಶಿರಸಾ ಪಾಲಿಸುತ್ತಿದ್ದ ದಿನಗಳಲ್ಲಿ ದಿಢೀರನೆ ಒಂದು ಚೈತನ್ಯ ಕಾಣಲು ಸಿಕ್ಕ್ಕಿತು ! ಒಂದೇನೋ ಹೊಸ ಅಲೆ , ಹೊಸ ಯೋಚನೆ,ಹೊಸ ಕನಸು ಹೊತ್ತು ಬಂದ  ಫಕೀರನಂತೆ ಕಂಡದ್ದು  ನಮ್ಮ ಮೋದಿ .

ಮೋದಿ ಎಂಬ ದೈತ್ಯ ವ್ಯಕ್ತಿತ್ವ ಎಂಥೆಂಥವರನ್ನೋ ಮಾರುಳಾಗುವಂತೆ ಮಾಡಿತು, ಏಕೆಂದರೆ ಆ ವ್ಯಕ್ತಿತ್ವ ಕೇವಲ ತನಗಾಗಿ ಮಾಡಲ್ಪಟ್ಟಿದ್ದಲ್ಲ ಬದಲಾಗಿ ಒಂದು ಹೊಸ ಅಲೆಯ ಆಗಮನಕ್ಕಾಗಿ ಇರುವಂಥದ್ದು ಅಂತ ಮನದಟ್ಟು ಮಾಡಲು ಆಯ್ದು ಕೊಂಡ ಮೊದಲ ಅಸ್ತ್ರ ಜನರನ್ನು ತಲುಪುವುದು ಮತ್ತು ತುಂಬಾ ಸರಳ ಹಾಗೂ ಮನಸಿಗೆ ನಾಟುವ ಪದಗಳಿಂದ ಜನರನ್ನ ತಲುಪುವುದು ! ಈರುಳ್ಳಿ ಬೆಲೆ ಇಂದ ಹಿಡಿದು ಬಾಹ್ಯಾಕಾಶದಲ್ಲಿ  ಹಾರಾಡುವ ರಾಕೆಟ್ ವಿಷಯ ಇರಬಹುದು ಅಥವಾ ಡಿಜಿಟಲ್ ಸಂವಹನದಿಂದ ಹಿಡಿದು ಹಲವು ಯೋಜನೆ ಗಳು , ಕಾರ್ಯಕ್ರಮಗಳು  ಕಡೆಗೆ GST ವರೆಗೂ ಪ್ರತಿ ವಿಷಯವನ್ನು ಕೂಲಂಕುಷವಾಗಿ ಅಳೆದು ತೂಗಿ ವಾಹ್ ಮಾತಾಡಿದ್ರೆ ಹೀಗೆ ಮಾತಾಡ್ಬೇಕು ಅಂತ ವಾಜಪೇಯಿ ನಂತರ ಭಾರತದಲ್ಲಿ ಜನ ಯಾರನ್ನಾದರೂ ನೋಡಿ ಪುಳಕಿತರಾಗಿದ್ದರೆ ಅದು ಮೋದಿ ಮಾತ್ರ !

ಒಂದು ಕ್ಷಣ ಯೋಚಿಸಿ ವಾಜಪೇಯಿ ನಂತರದ  ಕಾಲಮಾನದಲ್ಲಿ , ಬರೋಬ್ಬರಿ ಹತ್ತು ವರ್ಷ ನಮ್ಮ ದೇಶ ನಿಚ್ಚಳ ಮೌನದಲ್ಲಿದ್ದಂತೆ ಭಾಸವಾಗುತ್ತಿತ್ತು . ನಮಗ್ಯಾರಿಗೂ ಫೀಲ್ ಗುಡ್ ಫ್ಯಾಕ್ಟರ್ಸ್ ಗಳೇ ಇರಲಿಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಬಾಯಿಗೆ ಸಿಕ್ಕಲ್ಲಿ ಗುಟ್ಕಾ ಪಾನ್ ಜಗಿದು ಗೋಡೆಗಳನೆಲ್ಲ ರಂಗೇರಿಸುತ್ತಿದ್ದ ಜನ ಇವತ್ತು , ಸ್ವಚ್ಚ ಭಾರತ ಅಭಿಯಾನ್ ಕಣ್ರೀ ಹಿಂಗೆಲ್ಲ ಎಸಿಬಾರ್ದು ಅನ್ನೋ ಘಟ್ಟ ತಲುಪಿದ್ದಾರೆ. ಕಚೇರಿ ಇಂದ ಎದ್ದು ಹೊರಡುವಾಗ ಸಿಸ್ಟೆಮ ಆಗ್ಲಿ ಲೈಟ್ ಆಗ್ಲಿ ಆರಿಸುವಾಗ ನಂದಲ್ಲ ಕಂಪನಿ ತಾನೇ ನೋಡ್ಕೊಳ್ತಾರೆ ಬಿಡು ಅನ್ನುವ ಜನ ದೇಶದ ಸಂಪನ್ಮೂಲ ಹಾಳು  ಮಾಡಬಾರದು ಅನ್ನುತ್ತಿದ್ದಾರೆ !   ಹಳ್ಳಿಗಳಲ್ಲಿ ಲಕ್ಷ ಲಕ್ಷ ಜನ ಬಹಿರ್ದೆಸೆಯಿಂದ ಮುಕ್ತಿ ಹೊಂದಿ ಶೌಚಾಲಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ! ಇಲ್ಲಿ ನಾನು ಎಲ್ಲ ಬದಲಾವಣೆ ಆಗಿಯೇ ಹೋಯಿತು ಎಲ್ಲ ಅಂದು ಕೊಂಡಂತೆ ನಡೆದೇ ಹೋಯಿತು ಅಂತ ಹೇಳುತ್ತಿಲ್ಲ , ಒಂದು ಬದಲಾವಣೆಯ ಗಾಳಿಯಂತೂ ಬೀಸುತ್ತಿದೆ ( Let's not get into numerical facts and counter attacks!) ನಾ ಕಂಡಂತೆ ನನ್ನ ಪರಿಧಿಯೊಳಗೆ ನಾ ಕಂಡಷ್ಟು ಮಾತ್ರ ಇಲ್ಲಿ ಹೇಳಿದ್ದೇನೆ . ಯಾವುದೇ ವಿಷಯವನ್ನು ಜನರು  ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದಂತೂ ಇತಿಹಾಸದ ಯಾವ ಪುಟಗಳಲ್ಲೂ  ಕಾಣ ಸಿಗುವುದಿಲ್ಲ !

ಚುನಾವಣಾ ಪೂರ್ವ ಹಲವು ಭರವಸೆಗಳನ್ನು ಮಂಡಿಸಿದ್ದಿರಬಹುದು ಹಾಗೂ ಅದ್ರಲ್ಲಿ ಕೆಲವು ಈಡೇರದೇ ಇರಲುಬಹುದು, ಇಲ್ಯಾರೂ ೧೦೦ ಪ್ರತಿಶತ efficiency  ಕೊಡುವ ಮಶಿನ್ ಗಳಿಲ್ಲ , ಮಲ್ಯ ಓಡಿ  ಹೋಗಿದ್ದಕ್ಕೆ ಮೋದಿ ರಾಜೀನಾಮೆ ಕೊಡಲಿ ಎಂದು ಬೊಬ್ಬೆ ಇಡುವವರು ಅದೇ ಮಲ್ಯನ RCB ಟೀಮ್ನ ಪರ ವಹಿಸಿಕೊಂಡು ಮಲ್ಯ ತೆಂಗಿನಕಾಯಿ ಚಿಪ್ಪು ಕೊಟ್ಟರೂ ಪರ್ವಾಗಿಲ್ಲ ಕಪ್ ನಮ್ದೇ ಎಂದು ಎದೆ ಬಡಿದುಕೊಂಡು ಮ್ಯಾಚ್ ನೋಡಲು ಹೋಗುತ್ತಾರೆ !   ನಮ್ಮ ಸೋಶಿಯಲ್ ಮೀಡಿಯಾ ಪ್ರಭಾವ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರೆ , ಒಬ್ಬ ಮನುಷ್ಯ ತನ್ನ ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದು ಅವನನ್ನು ಯಾರೂ ಗಮನಿಸುತ್ತಿಲ್ಲ ಅವನ ಮಾತು ಯಾರೂ ಕೇಳುತ್ತಿಲ್ಲ ಎಂದೆನಿಸಿ ರಾತ್ರೋ ರಾತ್ರಿ ಮೋದಿ ಬಗ್ಗೆ ಒಂದೆರಡು ಇಲ್ಲ ಸಲ್ಲದ ಹೇಳಿಕೆ ಅಸಲಿಗೆ ಮೋದಿಗೂ ಆ ವಿಷಯಕ್ಕೂ ಸಂಭಂದ ಇರದೇ ಇರುವ ಕೆಲವು ಪ್ರಹಸನಗಳನ್ನು ಮುಂದೆ ಇಟ್ಟುಕೊಂಡು ಮೋದಿ ತಲೆ ಕೆಟ್ಟವ, ರಾಕ್ಷಸ , ರಾಜೀನಾಮೆ ಕೊಡ್ಲಿ ಎಂದು ಹೇಳಿ  ಬಿಟ್ಟರೆ ಆಯ್ತು , ಬೆಳಿಗ್ಗೆ ಆಗುವಷ್ಟಿಗೆ ಎಲ್ಲೋ ಮೂಲೆ ಯಲ್ಲಿ ಅಡಗಿ ಕುಳಿತ ಒಂದು ವಿಲಕ್ಷಣ ವಿಚಾರಧಾರೆಗೆ ಎಲ್ಲರೂ ಬಿಟ್ಟು ಬಿಡದೆ ನೀರೆರದು ಅದನ್ನೊಂದು ದೊಡ್ಡದಾದ ಬರಡು ಮರವನ್ನಾಗಿಸುವಲ್ಲಿ ನಾವು ನೀವೆಲ್ಲರೂ ಕಾರಣಿಕರ್ತರು ! ಬರಗೆಟ್ಟ ಟಿವಿ ಮಾಧ್ಯಮಕ್ಕಂತೂ ಒಂದು ವಾರಕ್ಕಾಗುವಷ್ಟು ಆಹಾರ !


ಅಲ್ಲೆಲ್ಲೋ ದೂರದ ಊರಿನಲ್ಲಿ ಕುಳಿತು ದೇಶದ ಹಿತಕ್ಕಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದು ನಮ್ಮೆಲ್ಲ ಕನಸುಗಳನ್ನು ಈಡೇರಿಸುವತ್ತ ನಿರತರಾಗಿರುವ ಒಬ್ಬ ಪ್ರಾಮಾಣಿಕ ಹಾಗು ದಕ್ಷ ಪ್ರಧಾನ ಮಂತ್ರಿ , ಇಲ್ಯಾರೋ ಕುಡಿದ ಮತ್ತಿನ್ನಲ್ಲಿ ಅನ್ನ  ಯಾವುದು ಹೇಸಿಗೆ ಯಾವುದು ಅಂತಲೂ ಗೊತ್ತಾಗದೆ ತಿನ್ನುತ್ತಾ ಕೂತಿರುವ  ನಿರ್ಗತಿಕ ಕ್ರಿಮಿ ಕೀಟಗಳೆಲ್ಲವೂ ಸೇರಿಕೊಂಡು ತಮ್ಮದೇ ಒಂದು ಗುಂಪು ಮಾಡಿಕೊಂಡು, ಮನೆಯಲ್ಲಿ ಹೆಗ್ಗಣ ಸತ್ತರೂ ಮೋದಿ ಕಾರಣ , ಹೆಂಡತಿ ಹೊಡೆದರೂ ಮೋದಿ ಕಾರಣ ಎಂದು ಬಳೆ ಒಡೆದುಕೊಂಡು ಅಳುವುದನ್ನು ನೋಡುವುದೇ ಒಂದು ತಮಾಷೆ ! ಯಾರೋ ದೊಂಬಿ ಎಬ್ಬಿಸಿ ಗಲಾಟೆ ಮಾಡಿದರೆ, ಅಲ್ಯಾರೋ ರೇಪ್ ಮಾಡಿ ಕೊಲೆ ಮಾಡಿದರೆ ಇನ್ಯಾವನೋ ದೇಶ ಬಿಟ್ಟು ಓಡಿ  ಹೋದರೆ ಎಲ್ಲದಕ್ಕೂ ಪ್ರಧಾನಿ ನೇ ಕಾರಣ ಅಂತಾದರೆ ನಮ್ಮ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬ ಪಟ್ಟದ ಅವಶ್ಯಕತೆ ಇದೆಯೆ ? ಅಸಲಿಗೆ ನಮ್ಮ ರಾಜ್ಯದ ಹೊರೆ ಮೊದಲು ಹೊರಬೇಕಾದ್ದು  ಪ್ರಧಾನಿ ಅಂತ ನನಗೆ ಇತ್ತೀಚಿಗಷ್ಟೇ ಮನವರಿಕೆಯಾದ ವಿಷಯ !


ಮೋದಿಯನ್ನು ನಂಬಿ ಇದುವರೆಗೂ ಹಾಳಾಗಿದ್ದಂತೂ ನಂಗೇನೂ ಕಾಣುತ್ತಿಲ್ಲ , ನಾನು ಭಕ್ತಳೆಂಬ ಕಾರಣವೂ ಇರಬಹುದು ! ಆದರೆ ಇದುವರೆಗೂ ದೇವಸ್ಥಾನ , ಮಠ,  ಮಂದಿರಗಳಿಗೆ ಸೀಮಿತವಾದ ಭಕ್ತ ಎಂಬ ವರ್ಗವೊಂದು ದೇಶ ಕಂಡ ಮಹಾನ್ ನಾಯಕನಿಗೂ ಅನ್ವಯವಾಗುತ್ತಿರುವುದು ಸಂತಸದ ವಿಷಯವೇ ಸರಿ ! ಕೇವಲ ಒಂದು ಜಿಲ್ಲೆಯ ಅಧಿಕಾರಿಯಾಗಿ ನೇಮಕಗೊಂಡವರನ್ನ ಕೇಳಿ ನೋಡಿ ಎಲ್ಲವೂ ಪಾರದರ್ಶಕವಾಗಿ ಒಂದಿಷ್ಟೂ ಹಗರಣಗಳಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು! ಇಂತಹ ನೂರಾರು  ಜಿಲ್ಲೆಗಳನ್ನೊಳಗೊಂಡ ೨೨ ರಾಜ್ಯಗಳನ್ನು ಅದ್ಹೇಗೆ ನಿಭಾಯಿಸುತ್ತಿರಯುವ ಆ ಶಕ್ತಿ ಅದೆಂಥದ್ದಿರಬಹುದು ?!

ಗಡಿಯಲ್ಲಿ ನಮಗಾಗಿ ಬಡಿದಾಡಿ ವೀರ ಮರಣ ಹೊತ್ತ ಒಬ್ಬೇ ಒಬ್ಬ ಸೈನಿಕನ ಹೆಸರನ್ನು ಹೇಳಲಾಗದ ನಮ್ಮೆಲ್ಲರ ದೇಶಭಕ್ತಿಗೆ ಹಾಗೂ ಒಂದು ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದು ಎಂದರೆ ಕೋತಂಬ್ರಿ ಸೊಪ್ಪನ್ನು ಮಾರುವಷ್ಟೇ ಸುಲಭ ಎಂದು ತಿಳಿದು ಹಗಲಿರುಳು ಬಾಯಿ ಬಡೆದುಕೊಳ್ಳುವ ಜನರನ್ನು ವಿಶ್ವ ವಿಖ್ಯಾತರನ್ನಾಗಿ ಮಾಡುವ ನಮ್ಮ ಅವಿರತ ಪ್ರಯತ್ನಕ್ಕೊಂದು ದೊಡ್ಡ ಸಲಾಂ !