Total Pageviews

Monday, April 23, 2018

ಆದರೆ ನಮ್ಮ ನಿರ್ಗಮನದ ನಂತರ ಮಾತಾಡುವುದು ನಮ್ಮ ಮೌಲ್ಯ ಮಾತ್ರ !




   
           ಬರೋಬ್ಬರಿ ಮೂರು ವರ್ಷಗಳಾದವಲ್ಲ!! ಬರೆಯುವದನ್ನು ಮರೆತೇ ಹೋದ ಭಯ ಹಾಗು ನಡುಕ! ನನ್ನ ಹಳೆಯ ಪೋಸ್ಟ್ ಗಳನ್ನೆಲ್ಲ ಓದಿ ನಾನೇ ಬರೆದಿದ್ನ ಅನ್ನೋ ಅನುಮಾನ ಕಾಡುವಷ್ಟು ಶೈಲಿ ಹಾಗು ಸರಕಿನ ಕೊರತೆ ಎದ್ದು ಕಾಣುತ್ತಿದೆ.  ಬರೆಯಲೇ ಬೇಕು!  ನನ್ನ ಅಭಿವ್ಯಕ್ತಿ ಎಂಬ ಸೊರಗಿ ಹೋದ ಮಗುವನ್ನು ಪುನ:ಶ್ಚೇತನಗೊಳಿಸುವ ಸಣ್ಣ ಪ್ರಯತ್ನ.....


                     ಏನೆಲ್ಲಾ ಆಯಾಮಗಳನ್ನೊಳಗೊಂಡು, ನಾವು  ಬಯಸಿದ ಬದುಕು , ತೃಪ್ತಿ ಸಿಗುವ ದಿಗಂತದತ್ತ ನಿರಂತರ ನಮ್ಮನ್ನು ಕೈ ಜಗ್ಗಿ ಕರೆದುಕೊಂಡು ಹೋಗುವ ಹಲವು ವಿಫಲ ಯತ್ನಗಳನ್ನು ನಡೆಸುತ್ತಲೇ ಇರುತ್ತದೆ! ಮೂರು ವರ್ಷದ ಬಿಡುವು ನನ್ನನ್ನ mature ಮಾಡಿಸಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಗುವಂತೆ ಎಲ್ಲವನ್ನು ಸಂಭ್ರಮಿಸಿ ಅಮಾಯಕ ಕಣ್ಣುಗಳಿಂದ ಎಲ್ಲವನ್ನು ತಿಳಿದುಕೋ ಅನ್ನೋ ಪಾಠವನ್ನಂತು ಕಲಿಸಿದೆ. ನನಗೆಲ್ಲವೂ ತಿಳಿದಿದೆ ಅನ್ನುವುದೇ ಅಧ:ಪತನದ ಮೊದಲ ಮೈಲಿಗಲ್ಲು ! ಹೆಚ್ಚು ವಿಷಯಾಂತರ  ಮಾಡದೆ ನೇರ ವಿಷಯಕ್ಕೆ ಬರೋಣ.


                   ನಮಗೆಲ್ಲ ಒಂದು ನಿರಂತರ ಸ್ಪೂರ್ತಿ ನೀಡುವ ಮಷೀನ್ ನ ಅವಶ್ಯಕತೆ ಇದೆ ಅನಿಸುತ್ತದೆ , ಸರಿಯಾಗಿ ಓದಿ ತಿಳಿದು, ಅಧ್ಯಯನ ಮಾಡಿದರೆ ನಮ್ಮ ಕನ್ನಡ ಸಾಹಿತ್ಯಕ್ಕಿಂತ ಸ್ಪೂರ್ತಿ ನೀಡುವ ಇನ್ನೊಂದು ಮಾಧ್ಯಮ ನನಗಂತೂ ಕಾಣುವುದಿಲ್ಲ! ನಾನು ಅಪ್ಪನಿಗೆ ಯಾವಾಗಲೂ ನಾವೇಕೆ ಸಾಹಿತ್ಯ ಓದಬೇಕು ಎಂದು ಕೇಳುತ್ತಿದೆ , ಅದಕ್ಕೆ ಅಪ್ಪನ ಉತ್ತರ      " ನಮ್ಮ ಬದುಕು ನಾವಂದುಕೊಂಡಷ್ಟು ದೊಡ್ಡದು ಹಾಗೂ ಮಹಾನ್ ಶಕ್ತಿಯುತವಾದುದ್ದಲ್ಲ , ಅಸಲಿಗೆ ಅದರ ಆಯಸ್ಸು ನಮಗೆ ತಿಳಿದಿಲ್ಲ ಇಂತಿಪ್ಪ ಈ ಚಿಕ್ಕ ಬದುಕಿನಲ್ಲಿ ನಿನಗೇನೂ ಬೇಕೋ ಎಲ್ಲವನ್ನೂ ಮಾಡಿ ಬದುಕಿನ ಕೊನೆ ಹಂತದ ಕ್ಷಣವನ್ನೂ ಅನುಭವಿಸಿಯೂ ಇನ್ನೇನೋ ತಿಳಿದುಕೊಳ್ಳುವುದು ಇನ್ನೇನೋ ಕಲಿಯುವುದು ಉಳಿದು ಹೋಯಿತಲ್ಲ ಅಂತ ಅನ್ನಿಸದೆ ಇರಬೇಕು ಅಂದರೆ ನೀನು ಸಾಹಿತ್ಯವನ್ನ ಓದಲೇ ಬೇಕು!"  ಬದುಕಿನ ಪಾಠವನ್ನು ಯಾವ ಗುರುವೂ ಹೇಳಿಕೊಡಲಾರ ! ಒಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳುವಲ್ಲಿ ನಮ್ಮ ಕನ್ನಡ ಸಾಹಿತ್ಯದ ಪಾತ್ರ ತುಂಬಾ ಮುಖ್ಯವಾಗಿದೆ ! ಅದು ಮಂಕು ತಿಮ್ಮನ ಕಗ್ಗ ಗಳಾಗಿರಬಹುದು , ಬೇಂದ್ರೆ ಅಜ್ಜನ ಕವನ ಗಳಿರಬಹುದು , ಕಾರಂತರ ಕೃತಿಗಳಿರಬಹುದು , ಕುವೆಂಪು ಅವರ ಗ್ರಂಥಗಳಿರಬಹುದು ಹಾಗೂ ಭೈರಪ್ಪನವರ ಕಾದಂಬರಿಗಳಾಗಿರಬಹುದು.


    ನಮ್ಮ ಮನುಷ್ಯ ಸಹಜ ಪ್ರತಿಕ್ರಿಯೆ ಅದು ಯಾವುದೇ ವಿಷಯಕ್ಕೆ ಸಂಭಂದಿಸಿದ ತೊಂದರೆಯಾಗಿದ್ದರೂ , "ನನಗೆ ಯಾಕೆ" ಅಥವಾ "ನಾನೇ ಯಾಕೆ" ಅದು ಕಾಯಿಲೆ ಆಗಿರಬಹುದು, ಅಪಘಾತವಾಗಿರಬಹುದು ಹಣ ಕಾಸಿನ ತೊಂದರೆಯಾಗಿರಬಹುದು , ಸಾವು ನೋವುಗಳಿರಬಹುದು ಅಥವಾ ದೊಡ್ಡ  ಸೋಲುಗಳಿರಬಹುದು, ನಾವುಗಳೆಲ್ಲ ಅವುಗಳ್ಯಾವವೂ ನಮ್ಮ ಹತ್ತಿರ ಸುಳಿಯದಿರಲಿ ಅಂತ ಪ್ರಾರ್ಥಿಸೋಣ ಆದರೆ ಅಕಸ್ಮಾತಾಗಿ ಬಯಸದೆಯೂ ಇವುಗಳೇನಾದರೂ ನಮ್ಮ ಹತ್ತಿರ ಸುಳಿದರೆ ಇವುಗಳನ್ನು ಎದುರಿಸಲು ನಾವು ಸಿದ್ಧರೆ ?! ಎಂದು ಪ್ರಶ್ನಿಸಿಕೊಂಡರೆ ದಿಗಿಲಾಗುವಷ್ಟು ಭಯ ! ಇಲ್ಲ ಖಂಡಿತ ಇದಕ್ಕೆಲ್ಲ ಪ್ರೆಪರಶನ್ ನ ಅಗತ್ಯ ಇರುವುದಿಲ್ಲ ಬದುಕು ಬಂದಂತೆ ಎದುರಿಸುವುದಷ್ಟೇ , ನಮ್ಮ ಸಿದ್ಧತೆ ದೇಹಕ್ಕೆ ಸಂಭಂದಿಸಿರುವುದಿಲ್ಲ ಸಿದ್ಧತೆ ಮನಸ್ಸಿಗೆ ಸಂಭದಿಸಿದ್ದು , ಮಾನಸಿಕವಾಗಿ ನಾನು ಎದುರಿಸಲು ಶಕ್ತಳಾದಮೇಲೆ ತಾನೇ ದೈಹಿಕವಾಗಿ ನಮ್ಮ ದೇಹವೂ ಸಹಕರಿಸಲು ಸ್ಸಾಧ್ಯ ?

ಇಂಥ ಮಾನಸಿಕ ಸಿದ್ಧತೆ ನಮಗೆ , ಪ್ರಭುದ್ಧತೆ , ಅನುಭವ ಹಾಗೂ ಸಾಹಿತ್ಯ ಮಾತ್ರವೇ ಕೊಡಬಲ್ಲುದು! ನಮ್ಮ ಪೀಳಿಗೆಯ ಬಹು ದೊಡ್ಡ ಲಾಸ್ ಎಂದರೆ ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟ ಅಥವಾ ತೊಂದೆರೆ ಎಂಬ ಪದಗಳ ಡೆಫಿನಿಷನ್ ಗೊತ್ತೇ ಹೊರತು ಅದರ ಅನುಭವ ಇಲ್ಲ ! ನಮ್ಮ ಅಪ್ಪ ಅಮ್ಮ  ಕಷ್ಟ ಪಟ್ಟು ಬೆಳೆದರು ನಮ್ಮನ್ನು ಕಷ್ಟ ಪಟ್ಟು ಬೆಳೆಸಿದರು ನಾವುಗಳು ಕಷ್ಟವನ್ನು ಒಂದು ಹಂತದ ವರೆಗೆ ನೋಡುತ್ತಾ ಬೆಳೆದೆವೆ ಹೊರತು  ಅವುಗಳನ್ನು ಅನುಭವಿಸಿಲ್ಲ ! ನಮ್ಮ ಮುಂದಿನ ಪೀಳಿಗೆಯವರಿಗಂತೂ ಅನುಭವಿಸುವದಿರಲಿ  ಕಷ್ಟವನ್ನು ನೋಡುವುದು  ಸಹ ದುರ್ಲಭ ! ನಾವೆಲ್ಲ ಎಷ್ಟೊಂದು ಕಂಫರ್ಟ್ ಜೋನ್ ನಲ್ಲಿ   ಬದುಕುತ್ತಿದ್ದೇವೆ ಎಂದರೆ ಒಂಚೂರೇ ಚೂರು ನಮ್ಮ ಪರಿಧಿಯನ್ನು ವಿಸ್ತರಿಸಿಕೊಳ್ಳಲೋ ಅಥವಾ ಪರಿಧಿಯೊಳಗೆ ಇನ್ನೇನೋ ಇನ್ಯಾರನ್ನೋ ಸೇರಿಸಲೂ ಸಿದ್ಧರಿಲ್ಲ !


ತಂತ್ರಜ್ನ್ಯಾನದ ನಮ್ಮ ವಿದ್ಯಾರ್ಥಿಗಳಿಗೆ ಚೇತನ್ ಭಗತ್ ಹಾಗೂ ರವಿಂದ್ರ್ ಸಿಂಗ್ ಥರದ ಲೇಖಕರು ಅಚ್ಚು ಮೆಚ್ಚು ! ಆಫ್  ಕೋರ್ಸ್ ವಿದ್ಯಾರ್ಥಿ ಜೀವನದ ಮಧುರ ಕ್ಷಣಗಳನ್ನು , ಪ್ರೀತಿ ಪ್ರೇಮದ ಕಲ್ಪನೆಯಲ್ಲಿರುವ ಹರೆಯದ ಮನಸ್ಸುಗಳಿಗೆ ಆಪ್ತವಾಗುವಂಥ, ಒಂದಿಡೀ ತಲೆಮಾರನ್ನೇ ತಮ್ಮ ಕೃತಿಗಳೆಡೆಗೆ ಆಕರ್ಷಣೆಗೊಳಗಾಗುವಂತೆ ಮಾಡಿದವರಿವರು . ಆದರೆ ಇವರುಗಳದ್ದು ಕೇವಲ ಮನರಂಜನೆ! ಓದಿದ ನಂತರ ಒಂದು ಸಂದೇಶವೋ ಅಥವಾ ತೃಪ್ತಿ ನೀಡುವ ಬರಹಗಳಲ್ಲ ಅವು .

ಈಗಿನ ಮಕ್ಕಳು ಎಷ್ಟು ಬಿಂದಾಸ್ ಆಗಿ ತಮ್ಮ ವಿದ್ಯಾರ್ಥಿ ಜೀವನ ಸಾಗಿಸುತ್ತಾರೋ ಅದರ ತದ್ವಿರುದ್ಧವಾಗಿ ವಿಪರೀತ ಸ್ಟ್ರೆಸ್ ನಲ್ಲಿ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನ ಸಾಗಿಸುತ್ತಾರೆ . ನಾವೆಲ್ಲರೂ  ನಾವು ಅನುಭವಿಸುವ ಕಷ್ಟವೇ ಜಗತ್ತಿನೆಲ್ಲ ಕಷ್ಟಗಳಿಗಿಂತ ದೊಡ್ಡದು , ನಾವು ಪಟ್ಟಿರುವ ದುಃಖವೇ ಎಲ್ಲರ ದುಃಖಕ್ಕಿಂತ ಮಿಗಿಲಾದದ್ದು ಅನ್ನುವ ಮನುಷ್ಯ ಸಹಜ ಸೈಕಾಲಾಜಿ ಹೊಂದಿರುತ್ತೇವೆ ! ಯಾಕೆಂದರೆ ನಮಗಿಂತ ಅಥವಾ ನಮ್ಮ ತೊಂದರೆಗಳಿಗೆ ಅಲ್ಪ ಮಟ್ಟದಲ್ಲೂ ಹೋಲಿಕೆ ಇರದಂಥ ಅನೇಕ ಕಷ್ಟಗಳನ್ನು ಹೀಗೂ ಎದುರಿಸಿ ಬದುಕನ್ನು ಹೀಗೂ ಸುಂದರವಾಗಿಸಿಕೊಳ್ಳಬಹುದಾ  ಎಂದೆನಿಸುವ ಯಾವುದೇ ವ್ಯಕ್ತಿತ್ವವದ  ಪರಿಚಯವಿಲ್ಲ ! ಅಂಥ  ವ್ಯಕ್ತಿತ್ವಗಳನ್ನು ನಮ್ಮ ಕನ್ನಡ ಸಾಹಿತ್ಯ ಅನೇಕ ಕೃತಿಗಳಲ್ಲಿ ಎತ್ತಿ ಹಿಡಿದಿದೆ .

ಹೀಗೆ ನಿಜಜೀವನದಲ್ಲಂತೂ ಕಾಣ ಸಿಗದ ಇಂಥ ಅಪರೂಪ ಎನಿಸುವ ವ್ಯಕ್ತಿತ್ವವನ್ನು ಮತ್ತು ಆ ವ್ಯಕ್ತಿತ್ವದ ಸುತ್ತ ನಡೆಯುವ ಅನೇಕಾನೇಕ ವಿಚಿತ್ರ, ವಿಲಕ್ಷಣ ಸನ್ನಿವೇಶಗಳು  ಹಾಗೂ ಆ ಸನ್ನಿವೇಶಗಳನ್ನು ಎದುರಿಸುವ ಪರಿ ಎಲ್ಲವೂ ನಮ್ಮ ಜೀವನಕ್ಕೆ ಅತ್ಯುತ್ತಮ ಪ್ರೇರಣೆ! ಇಲಿ ಹೋದರೆ ಹುಲಿ ಹೋಯಿತೆಂದು ಬೊಬ್ಬೆ ಇಡುವ ನಾವುಗಳಿಗೆ " ಇಂಥವೆಲ್ಲ ನಡೆದು ಹೋಗಿರುವಾಗ ನಂದೇನು ಮಹಾ " ಎನ್ನುವ ಪ್ರಭುದ್ಧತೆ ಹಾಗೂ  ಜೀವನ ಪಾಠವನ್ನು  ನಮ್ಮ ಸುಪ್ತ ಮನಸ್ಸಿನಲ್ಲಿ ಬೇರೂರುವಂತೆ ಮಾಡಬಹುದಾದ ಏಕೈಕ ಮಾರ್ಗದರ್ಶಕ  ನಮ್ಮ ಸಾಹಿತ್ಯ ಕ್ಷೇತ್ರ !

ಎಲ್ಲರೂ ಎಲ್ಲದೂ ಒಂದು ದಿನ ನಶಿಸಿ ಹೋಗುವಂಥದೆ . ಹೇಗ್ ಹೇಗೋ ಬದುಕಿಯೂ ನಶಿಸಲೇ ಬೇಕು ! ಮೌಲ್ಯಯುತವಾದ ತತ್ವಗಳನ್ನು ಪಾಲಿಸಿಯೂ ನಶಿಸಲೇಬೇಕು ! ಆದರೆ ನಮ್ಮ ನಿರ್ಗಮನದ ನಂತರ ಮಾತಾಡುವುದು ನಮ್ಮ ಮೌಲ್ಯ ಮಾತ್ರ ! ಅಷ್ಟೇ ವ್ಯತ್ಯಾಸ .      

                     

2 comments:

  1. welcome back..! ಬಹಳ ಚೆನ್ನಾಗಿದೆ ಲೇಖನ..Do keep writing! :)

    ReplyDelete