Total Pageviews

Thursday, June 18, 2020

"ದಿ ಪ್ಲೇಗ್ " ಇಂದಿನ ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ !

ಫ್ರೆಂಚ್ ತತ್ವಜ್ಞಾನಿ ,ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ ": ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್ ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ...... ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ!

ಕೆಮುವಿನ ಕಾದಂಬರಿ "ದಿ ಪ್ಲೇಗ್ " ಇಂದಿನ  ಕೋವಿಡ್ -೧೯ ಸಾಂಕ್ರಾಮಿಕ  ರೋಗದ  ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ ! 

" ಈ ಅನಿರ್ದಿಷ್ಟ ದುರದೃಷ್ಟಕರ ಕಾಲಮಾನ ಏಕತಾನತೆಯಿಂದ ನರಳುವಂತೆ ಮಾಡುವುದಲ್ಲದೇ ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತದೆ. ತಗ್ಗಿಸಲಾಗದ ಬೆಂಕಿಯಂತೆ ಮೇಲುನೋಟಕ್ಕೆ ಕಂಡುಬಂದರೂ , ಪ್ಲೇಗ್ ನಂತಹ ಮಾರಿಯನ್ನು ಸಹ ಗೆದ್ದವರ ನೆನಪಿನೊಂದಿಗೆ, ಹೆಜ್ಜೆ ಹೆಜ್ಜೆಗೂ ಅತಿರೇಕದ ರಕ್ಕಸನಂತೆ,ವಿವರಿಸಲಾಗದ ಹಿಂಸೆ, ಸಾವು ,ನೋವು, ಹತಾಶೆಯನ್ನು  ಕೊಟ್ಟ  ಈ ಕಾಯಿಲೆ ಈಗ ಇತಿಹಾಸದ ಪುಟಗಳಲ್ಲಿನ ಕರಾಳ ಅಧ್ಯಾಯ! ಈ ಸ೦ವೇದನಾಶೀಲ ಜಾಡ್ಯದ ಮುಂದೆ ಇನ್ನೆಲ್ಲವೂ ಗೌಣವೆಂಬಂತೆ ಕಾಣುವಂತೆ ಮಾಡಿರುವುದು ಅಕ್ಷರಶಃ ನಿಜ. "ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ "-ಪುಟ ೧೭೯

ಕಾಲ್ಪನಿಕ ಕಾದಂಬರಿಯಾದರೂ, ೨ ಲಕ್ಷ ಜನಸಂಖ್ಯೆ ಇರುವ , ಉತ್ತರ ಆಫ್ರಿಕಾದ ಓರಾನ್ ಎಂಬ ಪಟ್ಟಣದಲ್ಲಿ ,ಜನ ಇದನ್ನು ತಡೆಯುವಲ್ಲಿ ಹೇಗೆ ಮಾನಸಿಕವಾಗಿ ತೈಯಾರಿ ನಡೆಸುತ್ತಿದ್ದರು , ಹಾಗೂ ಭಾವನಾತ್ಮಕವಾಗಿ ಎಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ಕ್ಯೆಮೂ ತನ್ನ ವಿಚಾರದ ಮೂಲಕ, ಹಾಗೂ ಪಾತ್ರಗಳ ಮುಖಾಂತರ, ಸಂಭಾಷಣೆಗಳಲ್ಲಿ, ಮನುಕುಲದ ಅಸ್ತಿತ್ವವನ್ನು ಅಣುಕಿಸುವ ಅನಿಶ್ಚತತೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾನೆ. 

ಹಾಗೆ ಹೋಲಿಸುವುದಾದರೆ  ಕ್ಯೆಮೂವಿನ ಪ್ಲೇಗ್ ಗೂ  ಹಾಗೂ ಕೋವಿಡ್ -೧೯ ಕೊರೋನಾ ಅಂಟುರೋಗಕ್ಕೂ ತುಂಬ ವ್ಯತ್ಯಾಸವಿದೆ . ಮೊದಲನೆಯದಾಗಿ ಪ್ಲೇಗ್ ಎರಡನೇ ಮಹಾಯುದ್ಧದ ಮುಂದುವರೆದ ಭಾಗದಂತೆ ಜನರನ್ನು ಕಾಡಿತ್ತು , ೭೦ ವರ್ಷದ  ಹಿಂದೆ ,ಈಗಿರುವ ವೈದ್ಯಕೀಯ ಸವಲತ್ತಾಗಲಿ, ಔಷಧವಾಗಲೀ ಇಲ್ಲದ ಕಾಲದಲ್ಲಿ ಸಮುದಾಯದ ನಾಮಾವಶೇಷ ಸಿಗದಂತೆ ಮಾಡಿದ್ದಲ್ಲದೇ, ಕುಟುಂಬ ನಡೆಸುವ ಆಧಾರ  ಸ್ಥ೦ಭವಾಗಿರುವ ಪುರುಷರನ್ನೇ ಹೆಚ್ಚಾಗಿ ಬಲಿ ತೆಗೆದುಕೊಂಡಿತ್ತು!

ದಿ ಪ್ಲೇಗ್ ನ ಮೂಲ ವಿಷಯ ಮನುಕುಲದ ಸಂಘರ್ಷವೇ ಆಗಿದ್ದರೂ, ಆಗಿನ ಕಾಲಕ್ಕೆ ನಮ್ಮ ಇಂದಿನ ಪರಿಸ್ಥಿತಿಗೂ ಹೋಲಿಕೆಯಾಗುವಂತೆ ಬೆಲೆ ಏರಿಕೆ ಹಾಗೂ ಹಾಹಾಕಾರದಿಂದ ಉಂಟಾಗುವ ಅಭಾವಗಳ ಉಲ್ಲೇಖ ಮಾಡಲಾಗಿದೆ. ಇವತ್ತಿಗೆ ಕೇಳುತ್ತಿರವ ಮಾಸ್ಕ ಹಾಗೂ ಸ್ಯಾನಿಟೈಜರ್ಗಳ  ಕೊರತೆಯನ್ನು  ಹಾಗೂ ಭಯದ ವಾತಾವರಣದಿಂದ ಜನ  ಅವಶ್ಯಕತೆಗೂ ಮೀರಿದ ಖರೀದಿಯನ್ನು ನಾವು ಕಾಣುತ್ತಲ್ಲೇ ಇದ್ದೇವೆ.  ಕಾಲ್ಪನಿಕವಾದ "ಓರಾನ್ ಪಟ್ಟಣದಲ್ಲಿ ಹಣದಾಸೆಗಾಗಿ ವ್ಯಾಪಾರಸ್ಥರು ತಮ್ಮಲ್ಲಿರುವ ಅವಶ್ಯಕತೆಯ ಆಹಾರ ಪದಾರ್ಥಗಳನ್ನು ಶ್ರೀಮಂತರಿಗೇ ಮಾರಾಟಮಾಡಿ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿ ಬಡವರಿಗೆ ತಿನ್ನಲು ಗಂಜಿಯೂ ಇಲ್ಲದಂತೆ ಮಾಡಿದ್ದರು . ಸಮುದಾಯಕ್ಕೆ ಹರಡಿದ ಸಾಮಾಜಿಕ ಪಿಡುಗಾದರೂ, ಎಲ್ಲ ವರ್ಗಗಳಿಗೆ ಸಮಾನತೆ ತರಬಹುದು ಎಂದು ಊಹಿಸುವುದೂ ಮೂರ್ಖತನ" ಪುಟ -೨೩೭. 

ಈ ವೈರಾಣುವಿನ ಜೊತೆಗಿನ ಹೋರಾಟ, ಒಂದು ರೀತಿಯ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳಂತೆಯೇ ಕಂಡುಬರುತ್ತದೆ, ಪೃಕೃತಿಗೆ ಹೇಗೆ ಮೇಲು -ಕೀಳು, ಶ್ರೀಮಂತ- ಬಡವ ,ಹೆಣ್ಣು -ಗಂಡು ಎಂಬ ತಾರತಮ್ಯವಿಲ್ಲವೋ ಹಾಗೆಯೆ ಈ ವೈರಾಣುವಿಗೂ ಕೂಡ! ಆದರೆ ಅತೀ ಕಡಿಮೆ ಸಂಪನ್ಮೂಲ ಹೊಂದಿ ಬದುಕುವ ಜನರಿಗೆ, ಅತೀ  ಹೆಚ್ಚಿನ ಹಾನಿ ಉಂಟಾಗುವುದಂತೂ ಎರಡೂ ವಿಷಯಗಳಲ್ಲಿ ನಿಜ ! 

ಈ ಪುಸ್ತಕದಲ್ಲಿ ನಿರೂಪಕನಾಗಿರುವವ ಡಾಕ್ಟರ್ ಬರ್ನಾರ್ಡ್, ಅವನದ್ದು ಬಿಡುವಿಲ್ಲದ ವೈದ್ಯಕೀಯ ಹೋರಾಟ!
ಕೊನೆಯ ಘಳಿಗೆಯವರೆಗೂ ಹೋರಾಡಿದರೂ ಅವನಿಗೆ ಸಿಗುತ್ತಿದ್ದ ಫಲಿತಾಂಶ ಮಾತ್ರ ೧೦೦ ಕ್ಕೆ ಒಂದರಂತೆ , ಇಂತಿಪ್ಪ ಸಾವುಗಳನ್ನು, ತನ್ನ ಅಸಹಾಯಕತೆಯನ್ನು, ಈ ಪಾತ್ರದ ಮೂಲಕ ಕ್ಯೆಮು ಸೂಕ್ಷ್ಮವಾಗಿ ವಿವರಿಸುತ್ತಾನೆ , ೯ ತಿಂಗಳ ಪ್ರತ್ಯೇಕತೆಯ ನಂತರ ಪಟ್ಟಣದಲ್ಲಿ ಎಲ್ಲರೂ ಮೊದಲಿನಂತೆ ಓಡಾಡಬಹುದು ಎಂಬ ಸಂಭ್ರಮಾಚಾರಣೆಯಲ್ಲಿ ತಾವು ಅನುಭವಿಸಿದ ನೋವನ್ನೆಲ್ಲ ಮರೆತಂತೆ ಕಂಡ ಜನರೆಡೆಗೆ ಬರ್ನಾರ್ಡ್ ಹೇಳುವ ಮಾತಿದು " ಅವನು ಎಲ್ಲರೊಳಗೊಂದಾಗಿ ಇರಲು ಇಚ್ಛಿಸಿದನೋ ಅಥವಾ ಹಾಗೆ  ೯ ತಿಂಗಳೂ ಏನೂ ನಡೆಯಲೇ  ಇಲ್ಲ ಎಂಬಂತೆ ಇರಲು  ಅವನ ಸುತ್ತಲಿನ ವಾತಾವರಣ ಕಾರಣವಾಯಿತೋ ಗೊತ್ತಿಲ್ಲ, ಆದರೆ ಮನುಷ್ಯರ ಹೃದಯದಾಳದಲ್ಲಿ ಬದಲಾವಣೆ ತರಲು, ಪ್ಲೇಗ್ ನ೦ತಹ  ಮಾರಣಾಂತಿಕ ಕಾಯಿಲೆಗೂ, ಸಾಧ್ಯವಿಲ್ಲ "  ಪುಟ ೨೯೫

ಹಾಗಾದರೆ ಈ ಜಾಡ್ಯದ ಫಲಿತಾಂಶವನ್ನು ಕ್ಯೆಮುವಿನ ಕಾದಂಬರಿಯ ದೃಷ್ಟಿಯಲ್ಲಿ ನೋಡ ಹೊರಟರೆ ಅಲ್ಲಿ,ಒಳ್ಳೆಯ ಹಾಗೂ ದುರದೃಷ್ಟಕರ ಎರಡೂ ಅಂಶಗಳಿವೆ, ಪ್ರೀತಿ ಪಾತ್ರರನ್ನು ಕಳೆದುಕೊಂಡು ಅನಾಥ ಭಾವದೊಟ್ಟಿಗೆ, ಭವಿಷ್ಯದ ಅನಿಶ್ಚಯತೆಯ ನಡುವೆ , ಹೃದಯವನ್ನು ಕಲ್ಲಾಗಿಸಿಕೊಂಡು ಬದುಕನ್ನು ಎದುರಿಸುವವರು ಒಂದುಕಡೆಯಾದರೆ, ತಮ್ಮ ಸಾವನ್ನೂ ಲೆಕ್ಕಿಸದೇ  ಕೊನೆಘಳಿಗೆವರೆಗೂ ಹೋರಾಡಿದ ವೈದ್ಯರೂ , ನರ್ಸುಗಳು ಹಾಗೂ ಸ್ವಯಂಸೇವಕರ ನಿಸ್ವಾರ್ಥ ಸೇವೆಯ ಅನಾವರಣ, ಇನ್ನೊಂದೆಡೆ. 

ಯಾವುದೊ ಹಂತದಲ್ಲಿ ಸರಿ ಇಲ್ಲವೆಂಬ ಅಂಶವನ್ನು, ಹಾಗೂ ಅನ್ಯಾಯವನ್ನು ಎದುರಿಸುವುದು ಕಷ್ಟ ಆದರೆ ಅದರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕ! ಜನ ಗೇಲಿಮಾಡಿದರೂ ಸರಿ ಯಾರೋ ಒಬ್ಬ ಮುಂದೆ ಬಂದು ಇದು ತಪ್ಪು, ಹೀಗೆ ಮಾಡುವುದು ಅನ್ಯಾಯ ಎಂದು ಸಾರ್ವಜನಿಕವಾಗಿ  ಹೇಳಿ, ಅದಕ್ಕೆ ಪ್ರತಿಕೂಲವಾದ ಕ್ರಿಯೆಯಿಂದ ಹೇಗೆ ಇದನ್ನು ಸರಿಮಾಡಬಹುದು ಎಂದು ತೋರಿಸಿಕೊಟ್ಟರೂ ಸಾಕು, ಅದು ಒಳ್ಳೆಯ ಕ್ರಿಯೆಯಾಗಿದ್ದರೆ ಖಂಡಿತವಾಗಿಯೂ ಎಲ್ಲರೂ ಅದನ್ನು ಪಾಲಿಸಲು ಮುಂದಾಗುತ್ತಾರೆ ! ಈ ಒಂದು ಬದಲಾವಣೆಯ ಗಾಳಿಯಿಂದಲೇ ಓರಾನ್ ತನ್ನ ಅಳಿವಿನಂಚಿನಿಂದ ಹೊರಬಂದು ಮೊದಲಿನ ಚೈತನ್ಯಕ್ಕೆ ನಾಂದಿ ಹಾಡಿದ್ದು. ಇದು ಬದುಕಿನ ಪಾಠವೂ ಹೌದು! 

ನಾವು ಕ್ಯೆಮುವಿನ ದೃಷ್ಟಿಯಲ್ಲಿ ,ಪರಿಗಣಿಸಬೇಕಾದ,ಇಂದಿನ  ಕೊರೋನಾಗೂ  ಒಗ್ಗುವ, ಎರಡು ಮುಖ್ಯಾ೦ಶಗಳು 

೧.  ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್  ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ. ಪುಟ-  ೧೨೫. 

೨.  ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ! ಪುಟ -೩೦೮(ಕೊನೆಯ ಪುಟ )

ಒಂದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಮ್ಮಿಂದೇನಾಗುತ್ತದೋ ಅದೆಲ್ಲವನ್ನೂ ಮಾಡೋಣ, ಸಧ್ಯ ಈ ಪಿಡುಗಿನಿಂದ ಪಾರಗಲೂ ಏನು ಮಾಡಬೇಕೋ ಅದನ್ನು ಮಾಡೋಣ , ಎಲ್ಲ ಮುಗಿದ ನಂತರ, ಪ್ಲೇಗ್ ಗಿಂತಲೂ ಕೆಟ್ಟದಾಗಿ ಅಂಟಿರುವ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾವೂ ಕಾರಣೀಕರ್ತರಾಗುತ್ತಿರುವ, ಪಿಡುಗುಗಳಾದ, ಪರಿಸರ ವಿನಾಶ ,ಹಸಿವು,ಯುದ್ಧ,  ಹಾಗೂ ವ್ಯವಸ್ಥಿತ ಅನ್ಯಾಯದ ವಿರುದ್ಧ  ಎಲ್ಲರೂ ಒಟ್ಟಾಗಿ ಹೋರಾಡೋಣ. 


No comments:

Post a Comment