Total Pageviews

Thursday, June 18, 2020

ದೂರ ತೀರ ಯಾನ....

  ಬೆಳಗ್ಗೆ ಏಳು , ಹಲ್ಲುಜ್ಜು , ಸ್ನಾನ ಮಾಡು , ತಿಂಡಿ ತಿನ್ನು ಕರೆಕ್ಟ್ ಸಮಯಕ್ಕೆ  ಕ್ಲಾಸಿಗೆ ಹೋಗು... ಇದು ಪ್ರತಿನಿತ್ಯದ ದಿನಚರಿ. ಇದರಲ್ಲಿ ಬದಲಾವಣೆಗಳು ಸಾಧ್ಯವೇ ಇಲ್ಲ. ಬದಲಾವಣೆ ಮಾಡಹೊರಟರೂ  ಅದು ಒಂದೋ ಎರೆಡೋ  ದಿನಕ್ಕಾಗುವ ಬದಲಾವಣೆಯೋ ವಿನಃ ದಿನಚರಿ ಆಗಲೊಲ್ಲದು.

ಹೀಗೆ ದಿನ ಪೂರ್ತಿ ಮಾಡಿದ್ದನ್ನೇ  ಮಾಡುತ್ತ , ಕೇಳಿದ್ದನ್ನೇ ಕೇಳುತ್ತ, ಅದೇ ಮನೆ, ಅದೇ ಕಾಲೇಜು ,ಅದೇ ಕಚೇರಿ  ಅದೇ ಜನ, ಅದೇ ಸಮಾಜ ಎಂಬ ನಿಯಮಿತ ಪರೀಧಿಯೊಳಗೆ ಸಾಗುತ್ತಿರುತ್ತದೆ ನಮ್ಮ ಜೀವನ ಗುಟ್ಟುಗಳಲ್ಲಿ ಹಾಗೂ ವಿಫಲ ರಟ್ಟುಗಳಲ್ಲಿ !

 ನಾವೇ ನಮ್ಮ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಸಮಾಜ, ಅದರ ಕಟ್ಟುಪಾಡುಗಳು ಏನೋ ಇದೆಲ್ಲ ಗೋಪಿ , ನನಗೊಬ್ಬನಿಗೆ ಹೀಗೆ ಅನ್ಸೋದ ಅಥವಾ ನಿಂಗೂ ಹಿಂಗ ಆಗುತ್ತ ?! ಸಾಕು  ಸುಮ್ನಿರಪಾ  ನಿನ್ನ ನಂಬಿಕೊಂಡು ಒಂದ್ಸಲ ನಿನ್ ಜೊತೆ ನಾನು ಅವನಲ್ಲ ಅವಳು ಫಿಲಂ ನೋಡಿದ್ದಕ್ಕೆ ಅಮ್ಮ ನಂಗೆ ಬಾಸುಂಡೆ ಬಾರೋ ಹಾಗೆ ಬಾರ್ಸಿದ್ಲು ಗೊತ್ತಲ್ವ ?! ದುಡ್ಡಿರೋರು ನೀವೆಲ್ಲ ಏನಂದ್ರು ನಡೆಯುತ್ತೆ ಏನ್ ಮಾಡಿದ್ರು ನಡೆಯುತ್ತೆ ಅಸಲಿಗೆ ಯಾಕೆ ಅಂತ ಕೇಳುವ ತಾಕತ್ತೇ ಯಾರ್ಗೂ ಇಲ್ಲ, ಯಾರ್ಗೂ ಗೊತ್ತಾಗದ ಹಾಗೆ ನ್ಯೂಮೆರೊಲೊಜಿ ಮಣ್ಣು ಮಸಿ ಅಂತ ದೀಪಕ್ ಅನ್ನೋ ಹೆಸರನ್ನೇ ದೀಪ್ ಮಾಡಿಕೊಂಡ ನೀನು ,ಸಮಾಜ ,ಶಾಸ್ತ್ರ ಅಂತ ಮಾತಾಡ್ತೀಯಾ? ಬಿಡು ಇಲ್ಲಿಗೆ ಇದನ್ನೆಲ್ಲ ಕೆಲಸಕ್ಕ್ ಬರೋದನ್ನ ಮಾಡು , ಮಾಡ್ಲಿಲ್ಲ ಅಂದ್ರೂ ತೊಂದ್ರೆ ಇಲ್ಲ ಬಿಡು ನಂಗೆ ಮಾತ್ರ ಬದುಕಲು ಬಿಟ್ಟಬಿಡು ! ಇದೆಲ್ಲ ನಂಗಾಗೋ ಕೆಲಸ ಅಲ್ಲ...ಎಂದು ರಾತ್ರಿ ಕಂಬೈನ್ ಸ್ಟಡಿ ಮಾಡಲು ಹೋಗಿದ್ದು, ಓದೋದನ್ನ ಬಿಟ್ಟು ಇನ್ನೆಲ್ಲ ಮಾಡಿದ್ದಾಯ್ತು, "ಹಿಂಗೇ ಆದ್ರೆ ನಾನು ಇಂಜಿನಿಯರ ಆದ ಹಾಗೆ!ನಾ ಮನೆಗ್ ಹೋಗ್ಬೇಕು ಇನ್ಯಾವತ್ತೂ ಬರಲ್ಲ ಇಲ್ಲಿ" ಎಂದು ಹೊರಡಲು ಅಣಿಯಾದ ಗೋಪಿ

ಲೋ ದಡ್ದ ಅದು ಹಂಗಲ್ಲ ಒಂದು ಸಿಗಾರ್ ಹೊಡೆಯಣ ಬಾ ಇಲ್ಲಿ , ನೋಡು ನಮಗೇನು ಅನ್ಸುತ್ತೋ ಅದನ್ನೇ ಮಾಡಿ ನಿಮಗ್ ಖುಷಿ ಕೊಡದನ್ನೇ ಹಿಂಬಾಲಿಸಿ ಅಂತ ಕನ್ನಡ ಮಾಷ್ಟ್ರು ಲೆಕ್ಚರ್ ಕೊಟ್ರ ಇಲ್ವಾ? ದೀಪಕ್ , ಗೋಪಿಯ ಹೆಗಲ ಮೇಲೆ ಕೈ ಹಾಕಿ ಸಮಾಧಾನ ಹೇಳಲು ಹೋಗಿದ್ದು ಫಲ ಕೊಡಲಿಲ್ಲ.  "ಅದಕ್ಕೂ ಇದಕ್ಕೂ ಸಂಭಂದ ಇಲ್ಲ" ಗೋಪಿ ಸಿಟ್ಟಲ್ಲಿ ಹೇಳಿದ ... "ಇದೆ ಕಣೋ ನಮ್ಮ ದೇಶ ನಮ್ಮ ಸಮಾಜ ಹೆಂಗೆ ನಿರ್ಮಿಸಲ್ಪಟ್ಟಿದೆ ಅಂದ್ರೆ ಯಾವನೋ ಏನೋ ರೂಲ್ಸು ಮಾಡಿ ಗೊಟಕ್ ಅನ್ನೋದು ನೇಣ್ ಹಾಕೋ ಪರಿಸ್ಥಿತಿ ಬಂದ್ರೂ ಅದನ್ನು ಚಾಚೂ ತಪ್ಪದೆ ಪಾಲ್ಸಿ ನೇಣ್ ಹಾಕೊಳ್ಳೋ ನಮ್ಮ ಜನರು , ಅವರು ಮಾಡಿದ್ದು ಸರಿ , ಅವರ ಸಂಪ್ರದಾಯ ಸರಿ, ಅವರ ಲೈಂಗಿಕತೆನೇ ಸರಿ ಅಂತ ವಾದ ಮಾಡಿ ಸಾಯ್ತಾವೆ ! ಅಮೇರಿಕಾ ಇಂಗ್ಲೆಂಡ್ ನಲ್ಲಿ ಗೇ ಮ್ಯಾರೇಜ್ ಎಲ್ಲ ಕಾಮನ್ ಮಗಾ ! ನಮ್ಮುವುಕ್ಕೆ ಅದೊಂದು ಅಪರಾಧ. ಸರಿ ತಪ್ಪು ಅವರವರ ಮನಸಿನ ಭಾವನೆ ಮತ್ತು ಆ ಭಾವನೆ ಮೂಡಿಸಿದ ಸಮಾಜದ ಮೇಲೆ ನಿರ್ಧರಿತವಾಗಿರುತ್ತದೆ ! ಇವತ್ತಿಗೂ ನಿಂಗೆ ಇಷ್ಟ ಇಲ್ಲ ಅಂದ್ರೆ ನಾನು , ನಿನ್ನ ಒತ್ತಾಯ ಪೂರ್ವಕವಾಗಿ ಇಟ್ಕೊಳ್ಳೋಕೆ ಆಗೋದಿಲ್ಲ, ನೀನು ಸಮಾಜ ಅಂತ ಅಂಜಿಕೊಂಡು ನಿನ್ನ ಆಸೆಗಳನ್ನು , ಮನದ ಬೇಡಿಕೆಗಳನ್ನು ಕೊಲ್ಲಬೇಕು ಅಂತ ನಿರ್ಧರಿಸಿದ್ದರೆ ಕೊಂದುಕೊ ಅದಕ್ಕಾಗಿ ಇನ್ನೊಬ್ಬ ಹುಡುಗಿಯ ಜೀವನ ಹಾಳು...... " ಎನ್ನುವಷ್ಟರಲ್ಲಿಯೇ ಸಿಟ್ಟಿನಲ್ಲಿ ಬಾಗಿಲನ್ನು, ರಪ್ ಅಂತ ಎಳೆದುಕೊಂಡು ಹೊರನಡೆದ ಗೋಪಿ.

ದಾರಿಯಲ್ಲಿ ನಡೆದು ಹೋಗುವಾಗ ,ಮನೆಯಲ್ಲಿ ಕಾಯಿಲೆ ಬಿದ್ದಿರುವ ಅಜ್ಜಿ, ಅಪ್ಪನಿಗಾಗಿ ಒಂದು ಕಿಡ್ನಿ ದಾನ ಮಾಡಿ, ಕೊನೆಗೂ ಅಪ್ಪನನ್ನು ಉಳಿಸಿಕೊಳ್ಳಲಾಗದೆ ಹೋದ ನತದೃಷ್ಟ ಹೆಂಡತಿ ನಾನು, ಎಂದು ದಿನಾ  ಶಪಿಸಿಕೊಂಡು ಅಡುಗೆ ಮಾಡುವ ಅಮ್ಮನನ್ನು ನೋಡಿ ಒಂದು ಸಲ ಪಾಪ ಪ್ರಜ್ಞೆ ಬಂದು ,ಕೆನ್ನೆ ತಟ್ಟಿ  ಹೋದ ಹಾಗೆ ಆಯ್ತು! ನಾನು ಓದಿ ಒಳ್ಳೆಯ ಕೆಲಸ ಸೇರಿ ಮನೆ ಸಾಲ ತೀರ್ಸಿ, ಅಮ್ಮನಿಗೊಂದು ಒಳ್ಳೆಯ ಜೀವನ ಕೊಡಬಹುದು ಅಂತ ಅಪ್ಪ ಇರುವಾಗಲೂ ಬಯಸಿದ್ದಳು ಅಮ್ಮ ! "ನಾನೀಗ ಓದುವುದನ್ನು ಬಿಟ್ಟು ಇನ್ನೇನೋ ಮಾಡಿಕೊಂಡು ಓಡಾಡ್ತಾ ಇದೀನಿ ಅಸಹ್ಯ" ಎಂದು ತನ್ನನ್ನು ತಾನೇ ಹಳಿದುಕೊಂಡು, ಮನೆ ತಲುಪಿ  ಮತ್ತೆ ಓದಲು ಕುಳಿತುಕೊಳ್ಳುತ್ತಾನೆ ಗೋಪಿ !

ಬಿಟ್ಟರೂ ಬಿಡದೀ ಮಾಯೆ ಅನ್ನುವ ಹಾಗೆ, ಎರಡು ಪುಟಗಳನ್ನ ತಿರುವಷ್ಟರಲ್ಲಿ ದೀಪಕ್ ಕಾಡಲು ಶುರು ಮಾಡುತ್ತಾನೆ ! ಥತ್  ಹಾಳಾದ್ದು ಓದಕ್ಕೆ ಆಗ್ತಿಲ್ಲ ಅಂತ ಪುಸ್ತಕ ಮುಚ್ಚಿಟ್ಟು , ಪಡಸಾಲೆಯಲ್ಲಿ ಅಜ್ಜಿಯ ಪಕ್ಕ ಬಂದು ಮಲಗುವ ನಾಟಕ ಮಾಡಿದರೂ, ನೆನ್ನೆ ರಾತ್ರಿ ಕುಡಿದ ಮತ್ತಿನಲ್ಲಿಯೇ ಎಲ್ಲವೂ ನಡೆಯಲಿಲ್ಲ ಆದರೂ ನಾನ್ಯಾವುದಕ್ಕೂ ಪ್ರತಿರೋಧ ಒಡ್ಡಲಿಲ್ಲ ಅಂದ್ರೆ ನನಗೂ ಅವನು ಮಾಡಿದ್ದೆಲ್ಲ ಇಷ್ಟ ಅಂತಲೇ ಅರ್ಥ ಅಲ್ವ ? ಕಾಲೇಜು ಅಂದ್ರೆ ಸುಂದರ ಹುಡುಗೀಯರನ್ನು ನೋಡಬಹುದು ಅಂತ ಹೇಳುವ ಹುಡುಗರ ಮಧ್ಯೆ ನನಗೆ ಮಾತ್ರ ದೀಪಕ್ ಮೋದಲ ನೋಟಕ್ಕೆ ಇಷ್ಟ ಆಗಿ ಬಿಟ್ಟಿದ್ದ, ಗಂಡು ಹೆಣ್ಣನ್ನು ಮಾತ್ರ ಇಷ್ಟ ಪಡಬೇಕು ಅಂತ ಕಾನೂನೇ ಇರುವಾಗ ನಾ ಹೇಗೆ ಧೈರ್ಯ ಮಾಡಿ ಅವನ ಹತ್ತಿರ ಹೋಗಿ ನನ್ನ ಇಷ್ಟ ಹೇಳಿಕೊಳ್ಳೋದು ಅಂತ ಮನಸ್ಸಿನಲ್ಲೇ ಕೊರಗುವಾಗ ಅವನೇ ಬಂದು ನನ್ನ ಪಕ್ಕ  ಕೂತು ನನ್ನನ್ನು  ಇಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಲ್ಲದೇ  ನನಗೆ ಗೊತ್ತಿಲ್ಲದೇ, ನನ್ನ ಇಡೀಯಾಗಿ ಆವರಿಸಿದ !
to be continued.....

No comments:

Post a Comment